ಹಾಗಾದ್ರೆ.. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು?
Recommended Video
ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕಿದ ವಿಚಾರವನ್ನು ಇಟ್ಟುಕೊಂಡು, ಕಾಂಗ್ರೆಸ್ ಮುಖಂಡರು ಒಬ್ಬೊಬ್ಬೊರಾಗಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಎಚ್ದಿಕೆ ಕಣ್ಣೀರು ವಿದ್ಯಮಾನ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು.
ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ನಂತರ, ಕಾಂಗ್ರೆಸ್ಸಿನ ಇನ್ನಷ್ಟು ಶಾಸಕರುಗಳು, ಮಾಜಿಗಳು ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಮಾತನ್ನಾಡಿದ್ದಾರೆ. ಎಚ್ಡಿಕೆ ಕಣ್ಣೀರಿಗೆ ನಾವು ಕಾರಣರಲ್ಲ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ.
ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..
ಬಿಜೆಪಿ ಈಗಾಗಲೇ ಕುಮಾರಸ್ವಾಮಿ ಒಬ್ಬ ಮಹಾನ್ ಕಲಾವಿದ ಎಂದು ಅಣಕವಾಡಿದ್ದಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಹ್ಯಾಷ್ ಟ್ಯಾಗ್ ಭಾನುವಾರ (ಜುಲೈ 15) ಟ್ರೆಂಡಿಂಗ್ ನಲ್ಲಿತ್ತು ಮತ್ತು ಬಹುತೇಕ ಟ್ವಿಟ್ಟಿಗರು, ಕುಮಾರಸ್ವಾಮಿಯವರ ವೇದನೆಯನ್ನು ಸಮರ್ಥಿಸಿಕೊಳ್ಳಲಿಲ್ಲ.
ಪಕ್ಷದ ಪ್ರಧಾನ ಕಚೇರಿ, ಬೆಂಗಳೂರಿನ ಜೆ ಪಿ ಭವನದಲ್ಲಿ ಶನಿವಾರ (ಜುಲೈ 14) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕುಮಾರಸ್ವಾಮಿ ಸಿಎಂ ಆದರು ಎಂದು ನೀವು ಖುಷಿಪಟ್ಟಿರಬಹುದು. ಆದರೆ, ನಾನು ವಿಷಕಂಠನ ಹಾಗೇ ಎಲ್ಲಾ ಕಷ್ಟವನ್ನು ನುಂಗಿಕೊಂಡು ಆಡಳಿತ ನಡೆಸುತ್ತಿದ್ದೇನೆ.
ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ
ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಗಾದರೂ ನಾನು ರಾಜಕೀಯದಲ್ಲಿ ಇದ್ದೇನೆ. ನಾನು ಹೋದಲ್ಲೆಲ್ಲಾ ಲಕ್ಷಾಂತರ ಜನ ಸೇರುತ್ತಿದ್ದರು, ಆದರೆ ಮತ ಹಾಕುವಾಗ ಮಾತ್ರ ಪಕ್ಷವನ್ನು ಮರೆತರು ಎಂದು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದರು.
ಕಾಂಗ್ರೆಸ್ ಮುಖಂಡರು, ಕುಮಾರಸ್ವಾಮಿ ಕಣ್ಣೀರಿಗೆ ನಾವು ಕಾರಣರಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು? ಕಾಂಗ್ರೆಸ್ ಮುಖಂಡರು ಏನಂತಾರೆ, ಮುಂದೆ ಓದಿ..
ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ
ಸಮಸ್ಯೆಯನ್ನು ಎದುರಿಸಲೇ ಬೇಕಾಗುತ್ತದೆ. ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ನೀಡಿದರೆ, ಜಾತ್ಯಾತೀತ ನಂಬಿಕೆಯನ್ನಿಟ್ಟು ಬೆಂಬಲ ಕೊಟ್ಟ ನಂತರ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕುಮಾರಸ್ವಾಮಿ ಧೈರ್ಯದಿಂದ ಇಂತಹ ಸನ್ನಿವೇಶವನ್ನು ಎದುರಿಸಬೇಕು ಎಂದು ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್
ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಮೃತವನ್ನು ನೀಡಿದೆ ವಿಷವನ್ನಲ್ಲ, ಸಿಎಂ ಆದವರು ಜನರ ಕಣ್ಣೀರು ಒರೆಸಬೇಕು ಹೊರತು ತಾವೇ ಕಣ್ಣೀರು ಹಾಕಬಾರದು. 37 ಶಾಸಕರು ಇರುವ ಜೆಡಿಎಸ್ಸಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ, 80 ಸ್ಥಾನ ಗೆದ್ದಿದ್ದರೂ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ್ದೇವೆ, ಸಮ್ಮಿಶ್ರ ಸರ್ಕಾರದಲ್ಲಿ ಕಷ್ಟ-ಸುಖ ಇಬ್ಬರೂ ಅನುಭವಿಸೋಣ, ಕಾಂಗ್ರೆಸ್ ಪಕ್ಷವು ನಿಮ್ಮ ಜತೆ ಇದೆ, ಯಾವತ್ತೂ ಸಹ ಕಾಂಗ್ರೆಸ್ ನಿಮ್ಮ ಬೆಂಬಲಕ್ಕಿರುತ್ತದೆ. ರಾಜ್ಯ ಮುಖ್ಯಮಂತ್ರಿಯಾಗಿ ಅವರೇ ಅತ್ತರೆ ಹೇಗೆ - ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್.
ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ
ಕಾಂಗ್ರೆಸ್ಸಿನ ಇಂದಿನ ಪರಿಸ್ಥಿತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣವೇ ಹೊರತು, ಬೇರೆ ಯಾರೂ ಅಲ್ಲ. ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ. ಖರ್ಗೆ, ಪರಮೇಶ್ವರ್ ಸೇರಿದಂತೆ ಕೆಲವರಿಗೆ ಮೈತ್ರಿ ಸರ್ಕಾರ ಮುಂದುವರಿಯುವುದು ಬೇಕಿದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರಿಗೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಬೇಕಿಲ್ಲ. ಹೈಕಮಾಂಡ್ ತೀರ್ಮಾನದಂತೆ ಮೈತ್ರಿ ಸರ್ಕಾರ ರಚನೆಯಾಗಿದೆ - ಮಾಜಿ ಸ್ಪೀಕರ್ ಕೋಳಿವಾಡ.
ನಾವು ಅವರಿಗೆ ವಿಷ ನೀಡಿಲ್ಲ. ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ
ಕುಮಾರಸ್ವಾಮಿಯವರನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ನಾವು ಅವರಿಗೆ ವಿಷ ನೀಡಿಲ್ಲ. ಅವರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ. ಎಲ್ಲಾ ರೀತಿಯ ಸ್ವತಂತ್ರವನ್ನೂ ಅವರಿಗೆ ಕೊಟ್ಟಿದ್ದೇವೆ. ಅವರು ಬಯಸಿದ್ದ ಖಾತೆಗಳೂ ಅವರ ಬಳಿಯಿದೆ, ಹಣಕಾಸು ಕೂಡಾ ಅವರಲ್ಲಿದೆ. ಕುಮಾರಸ್ವಾಮಿಯವರು ಮಾತಿನ ಶೈಲಿ, ಕಾಂಗ್ರೆಸ್ ಪಕ್ಷದ ಮುಖಂಡನಾಗಿ ನನಗೆ ಬೇಸರ ತರುತ್ತದೆ. ಕಾಂಗ್ರೆಸ್ಸಿನಿಂದಾಗಿಯೇ ತಪ್ಪಾಗಿರುವ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ - ಎ ಮಂಜು.
ಕಾಂಗ್ರೆಸ್ಸಿಗೂ ಯಾವುದೇ ಸಂಬಂಧ ಕಲ್ಪಿಸುವುದು ಬೇಡ
ಕುಮಾರಸ್ವಾಮಿ ಅವರ ಹೇಳಿಕೆಗೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧ ಕಲ್ಪಿಸುವುದು ಬೇಡ. ಅವರ ಪಕ್ಷದ ವೇದಿಕೆಯಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು, ನಮ್ಮ ಪಕ್ಷಕ್ಕೆ ಅನ್ವಯಿಸುವುದಿಲ್ಲ. ನಾವು ಜೆಡಿಎಸ್ ಪಕ್ಷಕ್ಕೆ ನಮ್ಮ ಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ. ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ಕಣ್ಣೀರಿಟ್ಟಿದಾರೋ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ - ದಿನೇಶ್ ಗುಂಡೂರಾವ್.
ಸಿಎಂ ಸಂತೋಶದಿಂದ ಇದ್ದರೆ ಮಾತ್ರವೇ ಎಲ್ಲರೂ ಸಂತೋಶದಿಂದ ಇರಲು ಸಾಧ್ಯ
ಅವರು ಹಾಗೆ ಹೇಗೆ ಹೇಳುತ್ತಾರೆ?, ಮುಖ್ಯಮಂತ್ರಿ ಸಂತೋಶದಿಂದ ಇದ್ದರೆ ಮಾತ್ರವೇ ಎಲ್ಲರೂ ಸಂತೋಶದಿಂದ ಇರಲು ಸಾಧ್ಯ, ಅವರು ಸದಾ ಸಂತೋಶವಾಗಿ ಇರಬೇಕು ಎಂದು ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಹೇಳಿಕೆ.