'ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ'
ಬೆಂಗಳೂರು, ಏಪ್ರಿಲ್ 6: ಕೊರೊನಾ ಮಹಾಮಾರಿ ಕರ್ನಾಟಕದ ಮೇಲೂ ಕಾರ್ಮೋಡ ಕವಿಯುವಂತೆ ಮಾಡಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರವೂ ತೀವ್ರ ಕಸರತ್ತು ನಡೆಸಿದೆ.
ದೇಶವೇ ಸಂಪೂರ್ಣ ಲಾಕ್ಡೌನ್ ಆಗಿರುವುದರಿಂದ ಜನಸಾಮಾನ್ಯರ ಹಿತ ಕಾಪಾಡುವುದು ಮಹತ್ವದ ಹೊಣೆಗಾರಿಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೇಲಿ ಬಿದ್ದಿದೆ.
ಲಾಕ್ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ!
ಯಡಿಯೂರಪ್ಪ ಅವರು ಇಂದು ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಒಂದು ಮಹತ್ವದ ಎಚ್ಚರಿಕೆಯನ್ನು ಜನಕ್ಕೆ ಕೊಟ್ಟಿದ್ದಾರೆ. ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಭಾಗವಹಿಸಿ ಸೋಂಕು ಹರಡಿಸಿಕೊಂಡ ಕೆಲ ಮುಸ್ಲಿಂ ವ್ಯಕ್ತಿಗಳ ಹಿನ್ನೆಲೆಯಲ್ಲಿ ಹಾಗೂ ಮೊನ್ನೆ ಬೆಂಗಳೂರಿನ ಸಾದಿಕ್ ಕಾಲೋನಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯಲ್ಲಿ ಕೊರೊನಾಕ್ಕೂ ಕೋಮು ಬಣ್ಣ ಬಳೆಯುತ್ತಿರುವವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಕೋಮು ಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ
ಸಂದರ್ಶನದಲ್ಲಿ ನಿರೂಪಕರು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಯಡಿಯೂರಪ್ಪ ಅವರು, ಕೊರೊನಾ ಸೋಂಕು ಹರಡಲು ತಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಸಂಪೂರ್ಣವೇ ಲಾಕ್ಡೌನ್ ಮಾಡಿದ್ದಾರೆ. ಮುಸ್ಲಿಂ ಸಮಾಜವೂ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಂತಿದೆ. ಅಲ್ಲೊಂದು, ಇಲ್ಲೊಂದು ಅಹಿತಕರ ಘಟನೆಗಳು ನಡೆದಿವೆ. ಆ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅವುಗಳನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇಂತಹ ಘಟನೆಗಳಲ್ಲಿ ಕೋಮು ಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ ಎಂಬ ಸಂದೇಶವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ.
ಸಚಿವರಿಗೆ ಮೆಚ್ಚುಗೆ ಸೂಚಿಸಿದ ಯಡಿಯೂರಪ್ಪ
ಸಂದರ್ಶನದಲ್ಲಿ ನಿರೂಪಕರು ಕೊರೊನಾ ವಿಷಯವಾಗಿ ಸಚಿವರಾದ ಶ್ರೀರಾಮುಲು ಹಾಗೂ ಕೆ ಸುಧಾಕರ ನಡುವೆ ತಿಕ್ಕಾಟ ಇದೆ. ಇಂತಹ ಸಂದರ್ಭದಲ್ಲಿ ಅವರ ಕೆಲಸ ನಿಮಗೆ ಸಮಾಧಾನ ತರಿಸಿದೆಯಾ ಎಂಬ ಪ್ರಶ್ನೆಗೆ ಸಿಡುಕಿನಿಂದ ಉತ್ತರಿಸಿದ ಬಿ ಎಸ್ ಯಡಿಯೂರಪ್ಪ, ಇಬ್ಬರ ಸಚಿವರ ಕೆಲಸ ನನಗೆ ಸಂಪೂರ್ಣ ಸಮಾಧಾನ ತರಿಸಿದೆ. ಅವರಿಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ. ನೂರಕ್ಕೆ ನೂರರಷ್ಟು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಇಬ್ಬರೂ ಸಚಿವರನ್ನು ಸಮರ್ಥಿಸಿಕೊಂಡರು ಯಡಿಯೂರಪ್ಪ.
ಜಿಲ್ಲಾಧಿಕಾರಿಗಳೇ ಬೆಸ್ಟ್
ಸಂದರ್ಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ ಪ್ರಸಂಗ ನಡೆಯಿತು. ಕೊರೊನಾ ವಿಷಯವಾಗಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗಿಂತ ಜಿಲ್ಲಾಧಿಕಾರಿಗಳು ಅತ್ತುತ್ತಮ ಕೆಲಸ ಮಾಡುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಅವರಿಂದಲೇ ಕೊರೊನಾ ವೈರಸ್ ಹರಡುವುದು ನಿಂತಿದೆ ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ
ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಬಿ ಎಸ್ ಯಡಿಯೂರಪ್ಪ ಅವರು ಆತಂಕ ತೋಡಿಕೊಂಡಿದ್ದಾರೆ. ಸಂಪೂರ್ಣ ಲಾಕ್ಡೌನ್ ಇರುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದಕ್ಕೆಯುಂಟಾಗಿದೆ. ಮುಂದೆನಾಗಲಿದೆ ಎಂಬ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ಪ್ರಧಾನಿ ಅವರು ಲಾಕ್ಡೌನ್ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ ಎಂದರು.