ಆಡ್ವಾಣಿಯನ್ನು ಮೂಲೆಗುಂಪು ಮಾಡಿದ್ದ ಅಮಿತ್ ಶಾ ಗ್ಯಾಂಗ್ ಈಗ ಬಿಎಸ್ವೈ ಹಿಂದೆ?
ಬೆಳೆದು ಬಂದ ದಾರಿಯನ್ನು ತುಳಿಯಬಾರದು ಎನ್ನುವುದು ಸಂಸ್ಕಾರ. ಅದಕ್ಕೆ ರಾಜಕೀಯ ಕೂಡಾ ಹೊರತಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ವಾಜಪೇಯಿ ಅವರಾಗಿಯೇ ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದರು. ಆದರೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ? ಬಿಜೆಪಿಯ ವೃದ್ದಾಶ್ರಮದಲ್ಲಿರುವ ಇವರು ಕನಿಷ್ಠ ಪಕ್ಷದ ಮುಖಂಡರಿಗೆ ಬುದ್ದಿವಾದ ಹೇಳಲೂ ಲಾಯಕ್ಕಿಲ್ಲವೇ?
ಈ ವಿಚಾರಕ್ಕೆ ಯಾಕೆ ಈಗ ಪ್ರಸ್ತುತ ಎಂದರೆ, ಎಪ್ಪತ್ತೈದರ ಹರಯದ ಮೇಲಿನ ಮುಖಂಡರಿಗೆ ಬಿಜೆಪಿಯ ರಿಟೈರ್ಮೆಂಟ್ ಪಾಲಿಸಿ. ಸುಮಾರಾಗಿ ಯಡಿಯೂರಪ್ಪ ಕಡೆ ಬೀಸುತ್ತಿದ್ದ ಈ ಗಾಳಿ, ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಂಡಿದೆ. ಹಾಗಾದರೆ, ಆಡ್ವಾಣಿ, ಜೋಷಿಯನ್ನು ಸೈಡ್ಲೈನ್ ಮಾಡಿದ ಹಾಗೇ, ಬಿಎಸ್ವೈ ಅವರನ್ನು ಕೂಡಾ ಮೂಲೆಗುಂಪ ಮಾಡಲು ಸಾಧ್ಯವೇ?
ಚಿತ್ರದಲ್ಲಿನ ಬಿಎಸ್ವೈ ಬಾಡಿ ಲಾಂಗ್ವೇಜ್: ಹುಟ್ಟು ಹಾಕುವುದು ನೂರು ಪ್ರಶ್ನೆಗಳನ್ನಾ..
ಖಂಡಿತ ಇದು ಸುಲಭದ ಮಾತಲ್ಲ. ರಾಜ್ಯ ರಾಜಕೀಯದಲ್ಲಿರುವ ಇಬ್ಬರು ಮಾಸ್ ಮುಖಂಡರೆಂದರೆ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ. ಮೋದಿ ಸಭೆಗೆ ಬೇಕಾದರೆ ಜನರನ್ನು ಕರೆತರಬೇಕಾಗಬಹುದು, ಆದರೆ ಈ ಇಬ್ಬರು ಮುಖಂಡರ ವಿಚಾರದಲ್ಲಿ ಹಾಗಲ್ಲ. ಅದರಲ್ಲೂ, ರಾಜ್ಯದ ನಂಬರ್ ಒನ್ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ.
ಕೇವಲ 17ತಿಂಗಳಲ್ಲಿ ಮೂರು ಬಾರಿ 'ಬದಲಾದ' ಕುಮಾರಸ್ವಾಮಿಯ ರಾಜಕೀಯ ಬಣ್ಣ
ಪಕ್ಷದಿಂದ ಬೇಸರಗೊಂಡು ಕೆಜೆಪಿ ಕಟ್ಟಿದಾಗ, ಅದರ ಎಫೆಕ್ಟ್ ಬಿಜೆಪಿಗೆ ಯಾವ ಮಟ್ಟಿಗೆ ತಾಟಿತ್ತು ಎನ್ನುವುದು ಬಹುಷ: ಅಮಿತ್ ಶಾಗೂ ಗೊತ್ತಿರುವ ವಿಚಾರ. ಆಡ್ವಾಣಿ ಹೇಗೆ ದೇಶದಲ್ಲಿ ಬಿಜೆಪಿಯನ್ನು ಕಟ್ಟಿದರೋ, ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಎಂದರೆ ಅತಿಶಯೋಕ್ತಿಯಾಗಲಾರದು.
ಸೋನಿಯಾ ಗಾಂಧಿ, ಕಾಂಗ್ರೆಸ್ ಮೇಲೆ ಯಾವರೀತಿ ಹಿಡಿತ ಸಾಧಿಸಿದ್ದರು
ಒಂದು ಕಾಲದಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮೇಲೆ ಯಾವರೀತಿ ಹಿಡಿತ ಸಾಧಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ, ಕೇಂದ್ರದಲ್ಲಿ ಅಮಿತ್ ಶಾ ಮತ್ತು ರಾಜ್ಯದಲ್ಲಿ ಬಿ.ಎಲ್.ಸಂತೋಷ್ ಬಿಜೆಪಿಯಲ್ಲಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಹಾಗಾಗಿ, ಯಡಿಯೂರಪ್ಪನವರ ಮುಖದಲ್ಲಿ ವರ್ಚಸ್ಸಿಲ್ಲ, ಹಿಂದಿನ ಲವಲವಿಕೆಯಿಲ್ಲ. ಈ ಕಾರಣಕ್ಕೆ ಅವರು ತನ್ನದು 'ತಂತಿ ಮೇಲಿನ ನಡಿಗೆ' ಎಂದು ಕರೆದಿರಬಹುದು.
ಯಡಿಯೂರಪ್ಪನವರ ಬದಲಾದ ಬಾಡಿ ಲಾಂಗ್ವೇಜ್
ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾದ ಬಾಡಿ ಲಾಂಗ್ವೇಜ್ ಪಕ್ಷದಲ್ಲಿ ಅವರಿಗಿರುವ ಸ್ಥಾನಮಾನ ಏನು ಎನ್ನುವುದನ್ನು ತೋರಿಸುತ್ತಿರುವುದಂತೂ ಹೌದು. ಅದನ್ನು ಖುದ್ದು ಅವರೇ ಒಪ್ಪಿಕೊಂಡಿದ್ದಾರೆ ಕೂಡಾ. ಹಾಗಾದರೆ, ಯಡಿಯೂರಪ್ಪನವರ ಜನಪ್ರಿಯತೆ, ಸಮುದಾಯದ ಬೆಂಬಲ ಮತ್ತು ಪಕ್ಷಕ್ಕೆ ಮುಖವಾಣಿಯಂತಿರುವ ಬಿಎಸ್ವೈ ಪಕ್ಷಕ್ಕೆ ಬೇಡವಾದರಾ? ಯಡಿಯೂರಪ್ಪ ಆಪ್ತರು, ಅವರನ್ನು ಕಡೆಗಣಿಸುತ್ತಿರುವವರಿಗೆ ಎಚ್ಚರಿಕೆಯನ್ನೂ ನೀಡಿದ್ದಾಗಿದೆ.
ಆಪ್ತವಲಯಕ್ಕೆ ಮಾತ್ರ ಯಡಿಯೂರಪ್ಪ ಮಣೆ ಹಾಕುತ್ತಾರೆ ಎನ್ನುವ ಅಪವಾದ
ತಮ್ಮ ಆಪ್ತವಲಯಕ್ಕೆ ಮಾತ್ರ ಯಡಿಯೂರಪ್ಪ ಮಣೆ ಹಾಕುತ್ತಾರೆ ಎನ್ನುವುದು ಅವರ ಮೇಲಿರುವ ಮೊದಲ ಮತ್ತು ಬಲವಾದ ಅಪವಾದ. ಆದರೆ, ಅದನ್ನು ಸರಿದಾರಿಗೆ ತರುವ ಹಲವು ದಾರಿಗಳು ಬಿಜೆಪಿ ವರಿಷ್ಠರ ಮುಂದಿತ್ತು. ಬರಪರಿಹಾರದ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಉತ್ತರ ಕರ್ನಾಟಕ ಭಾಗಕ್ಕೆ ಹೋಗಲು ಮುಖವೇ ಇಲ್ಲದಂತಾಗಿದೆ. ಇದೆಲ್ಲಾ, ಉದ್ದೇಶಪೂರ್ವಕವಾಗಿಯೇ ನಡೆಯುತ್ತಿದೆಯಾ? ಇನ್ನೊಬ್ಬರು ನಾಯಕನನ್ನು ಪರ್ಯಾಯವಾಗಿ ಬೆಳೆಸಲು ಸಲುವಾಗಿಯೇ ಮೂರು ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಾಗಿದೆ. ಭಾನು ಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಕರೆತರಲಾಗಿದೆ.
ರಂಭಾಪುರಿ ಮಠದ ಕಾರ್ಯಕ್ರಮವೊಂದರಲ್ಲಿ " ನನ್ನ ರಾಜಕೀಯ ಜೀವನ ತಂತಿ ಮೇಲಿನ ನಡಿಗೆ"
ರಂಭಾಪುರಿ ಮಠದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, " ನನ್ನ ರಾಜಕೀಯ ಜೀವನ ತಂತಿ ಮೇಲಿನ ನಡಿಗೆ" ಎನ್ನುವ ಮಾತನ್ನು ಹೇಳಿದ್ದಾರೆ. ಈ ಮಾತನ್ನು ಯಾವ ಅರ್ಥದಲ್ಲಿ ಯಡಿಯೂರಪ್ಪ ಹೇಳಿದ್ದಾರೆ ಎನ್ನುವುದನ್ನು ಅರಿತುಕೊಳ್ಳಲು ಪಿಎಚ್ಡಿ ಮಾಡಬೇಕಾಗಿಲ್ಲ. ನಳಿನ್ ಕಟೀಲ್ ಅವರು ರಾಜ್ಯಾಧ್ಯಕ್ಷರಾದ ಮೇಲೆ ನಡೆಯುತ್ತಿರುವ ವಿದ್ಯಮಾನಗಳು, ಯಡಿಯೂರಪ್ಪನವರನ್ನು ಬಿಜೆಪಿ ಎಲ್ಲಿ ಇಟ್ಟಿದೆ ಅಥವಾ ಎಲ್ಲಿ ಇಡಲು ಮುಂದಾಗಿದೆ ಎನ್ನುವುದನ್ನು ಸಾರುವಂತಿದೆ.
ಅತೃಪ್ತ ಶಾಸಕರಿಗೆ ನಾನು ಕೊಟ್ಟ ವಾಗ್ದಾನವನ್ನು ಮಾಡಲು ಬಿಡಿ
ಒಂದು ಕಾಲದಲ್ಲಿ ರಾಜ್ಯ ಬಿಜೆಪಿಯಲ್ಲಿ 'ರಾಜಾಹುಲಿ'ಯಂತಿದ್ದ ಯಡಿಯೂರಪ್ಪ ಈಗ ಸಂಪೂರ್ಣ ಹತಾಶರಾಗಿದ್ದಾರೆ. ಯಾವಮಟ್ಟಿಗೆ ಎಂದರೆ, "ಅತೃಪ್ತ ಶಾಸಕರಿಗೆ ನಾನು ಕೊಟ್ಟ ವಾಗ್ದಾನವನ್ನು ಮಾಡಲು ಬಿಡಿ. ಅದಾದ ಮೇಲೆ, ನಿಮ್ಮ ತಂಟೆಗೆ ಬರದೇ, ನಾನಾಯಿತು ಮತ್ತು ನನ್ನ ಮುಖ್ಯಮಂತ್ರಿ ಹುದ್ದೆಯಾಯಿತು. ಯಾವ ಕಾರಣಕ್ಕೂ ಪಕ್ಷದ ವಿಚಾರಕ್ಕೆ ಬರುವುದಿಲ್ಲ" ಎಂದು ಹೇಳಿದ್ದಾರೆ ಎನ್ನುವ ಸುದ್ದಿಯಿದೆ.
ಯಡಿಯೂರಪ್ಪ ಪಕ್ಷದಿಂದ ಮಾನಸಿಕವಾಗಿ ದೂರ ಆಗುವ ನಿರ್ಧಾರ?
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಯಡಿಯೂರಪ್ಪ ಪಕ್ಷದಿಂದ ಮಾನಸಿಕವಾಗಿ ದೂರ ಆಗುವ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಂತೆ. ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅನ್ನೋ ಮನೋಭಾವವನ್ನು ಸಿಎಂ ಬೆಳಸಿಕೊಂಡಿದ್ದಾರೆ ಎನ್ನುವ ವಿಚಾರ ಬಿಜೆಪಿ ಆಪ್ತಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪನನ್ನು ಮೂಲೆಗುಂಪು ಮಾಡುವ ಮುನ್ನ ಮಿಸ್ಟರ್ ಅಮಿತ್ ಶಾ...
ಯಡಿಯೂರಪ್ಪ ಅವರಾಗಿಯೇ ಪಕ್ಷದಿಂದ ದೂರವುಳಿದು ಮಾರ್ಗದರ್ಶಕರಾಗಿ ಮುಂದುವರಿದರೆ, ಅಮಿತ್ ಶಾ ಕೈಮೇಲಾದಂತೆ. ಆದರೆ, ಬಲವಂತದಿಂದ ಬಿಎಸ್ವೈ ಅವರನ್ನು ಮೂಲೆಗುಂಪು ಮಾಡಲು ನೋಡಿದರೆ, ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್ ಆಗುವ ಸಾಧ್ಯತೆಯಿಲ್ಲದಿಲ್ಲ. ಇವೆಲ್ಲವುಗಳ ಆಚೆಗೆ ಉತ್ತರ ಕರ್ನಾಟಕದ ಪ್ರವಾಹಕ್ಕೆ ತುರ್ತಾಗಿ ಕೇಂದ್ರದ ಪರಿಹಾರ ಬಿಡುಗಡೆಯಾಗಬೇಕಿದೆ. ಇದಕ್ಕೆ ಮುಖ್ಯಮಂತ್ರಿಯವರಿಗೆ ದನಿಯಾಗಿ ರಾಜ್ಯದ ಸಂಸದರು ಹಕ್ಕೊತ್ತಾಯವನ್ನು ಮಂಡಿಸಬೇಕಿದೆ. ಇದು ನಡೆಯದೇ ಹೋದರೆ ಬಿಎಸ್ವೈ ಮಾತ್ರಲ್ಲ, ಬಿಜೆಪಿಯ ಎಲ್ಲಾ ನಾಯಕರು ಜನರ ಮುಂದೆ ಸಣ್ಣವರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.