ಜಾತಿ ಗಣತಿಯಲ್ಲಿ ವ್ಯತ್ಯಾಸ, 175 ಕೋಟಿ ಹೊಳೆಯಲ್ಲಿ ಕಿವುಚಿದ ಹುಣಸೆ!
ಕರ್ನಾಟಕ ಸರಕಾರ ಕೈಗೊಂಡ ಜಾತಿಗಣಯು ಹೊಣೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿದೆಯಾ? ಸರಕಾರಿ ದಾಖಲೆಗಳ ಜೊತೆಗೆ ಹೋಲಿಸಿದರೆ ಮೇಲ್ನೋಟಕ್ಕೆ ಹಾಗನ್ನಿಸುತ್ತಿದೆ.
ಬೆಂಗಳೂರು, ಜನವರಿ 3: ಕರ್ನಾಟಕ ಸರಕಾರ 2015ರಲ್ಲಿ ನಡೆಸಿದ ಸಮಾಜೋ-ಆರ್ಥಿಕ ಜಾತಿ ಗಣತಿಯು ಹೊರಹಾಕಿರುವ ಮಾಹಿತಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾತಿ ಪ್ರಮಾಣ ಪತ್ರ ಹಾಗೂ ಗುರುತಿನ ಪತ್ರದ ಸರಕಾರದ ಹಳೆ ದಾಖಲೆ ಜೊತೆಗೆ ಈ ಸಂಖ್ಯೆಯು ತಾಳೆಯಾಗುತ್ತಿಲ್ಲ.
ಆರಂಭದಲ್ಲಿ ಗಣತಿಯ ಉದ್ದೇಶವೇ ಪ್ರಶ್ನಾರ್ಹವಾಗಿತ್ತು. ಇದೀಗ ವಿವಾದಾತ್ಮಕವಾಗಿರುವ ಈ ಸಂಖ್ಯೆಗಳು ಬೋಗಸ್ ಮತ್ತು ರಾಜಕೀಯ ಕಾರಣಗಳಿಗಾಗಿ ತಿರುಚಿರುವಂಥದ್ದು ಅನ್ನುವಂತೆ ಕಾಣುತ್ತಿವೆ. ಒನ್ ಇಂಡಿಯಾಗೆ ಲಭ್ಯವಾದ ದಾಖಲೆಗಳನ್ನು ಇಟ್ಟುಕೊಂಡು ತಹಶೀಲ್ದಾರ್ ಕಚೇರಿ ಹಾಗೂ ಕಂದಾಯ ಇಲಾಖೆಯ ಮಾಹಿತಿ ಜೊತೆ ಹೋಲಿಸಿದರೆ ವ್ಯತ್ಯಾಸ ಕಂಡುಬರುತ್ತಿದೆ.[ಲೋಕಾಯುಕ್ತದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!]
ಈ ಎರಡೂ ಕಡೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಾರೆ. ಒಂದು ಪ್ರದೇಶದ ನಿರ್ದಿಷ್ಟ ಜಾತಿಯ ಜನಸಂಖ್ಯೆಯನ್ನು ಗಣತಿಯಲ್ಲಿ ಉತ್ಪ್ರೇಕ್ಷೆಯಿಂದ ಕೊಡಲಾಗಿದೆ. ಇದಕ್ಕೆ ಉದಾಹರಣೆ ಅಂದರೆ ಚಿತ್ರದುರ್ಗ ಜಿಲ್ಲೆಯ ಮೇದಹಳ್ಳಿ. ತಹಶೀಲ್ದಾರ್ ಕಚೇರಿಯಿಂದ 1395 ಮಂದಿಗೆ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ. ಆದರೆ ಗಣತಿಯಲ್ಲಿ 6357 ಮಂದಿ ಬಳಿ ಜಾತಿ ಪ್ರಮಾಣ ಪತ್ರ ಇದೆ ಎಂದು ದಾಖಲಾಗಿದೆ.
ಇನ್ನು ಗಣತಿಯಲ್ಲಿ ಇರುವ 6357 ಹೆಸರಲ್ಲಿ ಕೇವಲ 360 ಹೆಸರು ಮಾತ್ರ ತಹಶೀಲ್ದಾರ್ ಕಚೇರಿ ದಾಖಲೆಯೊಂದಿಗೆ ತಾಳೆಯಾಗುತ್ತದೆ. ಇದು ಒಂದು ಜಿಲ್ಲೆಯ, ಒಂದು ಹಳ್ಳಿಯ ಸ್ಥಿತಿಯಾಯಿತು. ಇದೀಗ ಹೋರಾಟಗಾರರು ಆಕ್ಷೇಪಿಸುತ್ತಿರುವಂತೆ ಇಡೀ ಗಣತಿಯೇ ಬೋಗಸ್. ಶೇ 80ರಷ್ಟು ಜಾತಿ ಪ್ರಮಾಣ ಪತ್ರಗಳನ್ನು ಮರು ಪರಿಶೀಲಿಸಿಲ್ಲ ಅಥವಾ ಸರಕಾರಿ ದಾಖಲೆಗಳಲ್ಲೂ ಇಲ್ಲ.[ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]
ಆದ್ದರಿಂದ ಸಮೀಕ್ಷೆಯು ಜಾತಿಯ ಸಮೀಕರಣವನ್ನು ತೆರೆದಿಡುವುದರಲ್ಲಿ ಅನರ್ಹವಾಗಿದೆ. ಕಂದಾಯ ಇಲಾಖೆಯ ಸಮೀಕ್ಷೆಯೇ ಹೆಚ್ಚು ನಿಖರವಾದ ಮಾಹಿತಿ ನೀಡುತ್ತದೆ. ಏಕೆಂದರೆ ಜಾತಿ ಪ್ರಮಾಣ ಪತ್ರವನ್ನು ವಿತರಿಸುವ ಇಲಾಖೆ ಅದು. ಸರಕಾರದ್ದೇ ಇಲಾಖೆಯ ಮಾಹಿತಿಯನ್ನು ಸಮಾಜೋ ಆರ್ಥಿಕ ಜಾತಿ ಗಣತಿಗೆ ಪರಿಗಣನೆಗೆ ತೆಗೆದುಕೊಂಡಿಲ್ಲ.
ಈಗ ಸಂಖ್ಯೆಯು ಹೊಂದಾಣಿಕೆ ಅಗದ ಕಾರಣಕ್ಕೆ ಗಣತಿಯ ಒಟ್ಟಾರೆ ಪ್ರಕ್ರಿಯೇ ರಾಜಕೀಯ ಹುನ್ನಾರ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. 2013ರ ಬಜೆಟ್ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸವಲತ್ತುಗಳು ಹಾಗೂ ಮೀಸಲಾತಿಯನ್ನು ಸಮಾಜೋ ಆರ್ಥಿಕ ಗಣತಿಯ ಆಧಾರದಲ್ಲೇ ನಿಗದಿಪಡಿಸಲಾಗುವುದು ಎಂದು ಹೇಳಿದ್ದರು.[ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ]
ಕಳೆದ ಎಂಬತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಜಾತಿ ಆಧಾರದಲ್ಲಿ ಆರ್ಥಿಕ ಸ್ಥಾನಮಾನ, ಜಾತಿ, ಶೈಕ್ಷಣಿಕ ವಿದ್ಯಾಭ್ಯಾಸ, ಆಸ್ತಿ ಮತ್ತಿತರ ವಿವರಗಳನ್ನು ಮನೆ ಬಾಗಿಲಿಗೆ ಹೋಗಿ ಸಂಗ್ರಹಿಸುವ ಈ ಗಣತಿಗಾಗಿ ಸರಕಾರವು ಬಜೆಟ್ ನಲ್ಲಿ 175 ಕೋಟಿ ರೂಪಾಯಿ ಮೀಸಲಿರಿಸಿತ್ತು.