ಕಂಬಳ, ಚಕ್ಕಡಿ ಓಟದ ಸ್ಪರ್ಧೆಗೆ ಕಾನೂನಿನ ಮಾನ್ಯತೆ
ಕಂಬಳ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಇದರಲ್ಲಿ ಯಾವುದೇ ಪ್ರಾಣಿ ಹಿಂಸೆ ಇರುವುದಿಲ್ಲ ಎಂಬುದು ಅದನ್ನು ಬೆಂಬಲಿಸುತ್ತಿರುವವರ ಖಡಕ್ ವಾದ. ಕಡೆಗೂ ಕನ್ನಡ ನಾಡಿನ ಜನರ ಹೋರಾಟಕ್ಕೆ ಜಯ ಸಂದಿದೆ.
ಬೆಂಗಳೂರು, ಜನವರಿ 29 : ಕನ್ನಡಿಗರ ಹೋರಾಟಕ್ಕೆ ಕಡೆಗೂ ಜಯ ಸಂದಿದೆ. ಜಲ್ಲಿಕಟ್ಟಿನಂತೆ ಕರ್ನಾಟಕದ ಜನಪ್ರಿಯ ಎತ್ತು, ಕೋಣಗಳ ಓಟದ ಕ್ರೀಡೆಗಳಾದ ಕಂಬಳ ಮತ್ತು ಚಕ್ಕಡಿ ಓಟದ ಸ್ಪರ್ಧೆಗೆ ಕಾನೂನಿನ ಮಾನ್ಯತೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ.
ಫೆಬ್ರವರಿ 6ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕಂಬಳಕ್ಕೆ ಅನುವು ಮಾಡಿಕೊಡಲು ಅಗತ್ಯವಾದ ಕಾನೂನಿನ ತಿದ್ದುಪಡಿ ತರಲು ಸಿದ್ದರಾಮಯ್ಯ ಸಂಪುಟ ಶನಿವಾರ ಸಂಜೆ ನಿರ್ಧರಿಸಿತು.
ಸರ್ವೋಚ್ಚ ನ್ಯಾಯಾಲಯ ನಿಷೇಧ ಹೇರಿದ್ದರೂ ತಮಿಳುನಾಡು ಸರಕಾರ ಜಲ್ಲಿಕಟ್ಟು ಕ್ರೀಡೆಗಾಗಿ ಕಾನೂನು ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ ನಂತರ ಕರ್ನಾಟಕದಲ್ಲಿಯೂ ನಿಷೇಧಿತ ಕಂಬಳಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಹೋರಾಟ ನಡೆಯುತ್ತಿದೆ. [ಕರಾವಳಿಯ ಮೂಡಬಿದಿರೆಯಲ್ಲಿ ಹೊತ್ತಿದೆ ಕಂಬಳದ ಕಿಚ್ಚು]
ಕಂಬಳದಂಥ ಕ್ರೀಡೆಯಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎಂದು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್ (PETA) ಸಂಸ್ಥೆ ಹೂಡಿರುವ ಅರ್ಜಿಯನ್ನಾಧರಿಸಿ ಸುಪ್ರೀಂ ಕೋರ್ಟ್ 2015ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದೆ.
ಕಂಬಳ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಇದರಲ್ಲಿ ಯಾವುದೇ ಪ್ರಾಣಿ ಹಿಂಸೆ ಇರುವುದಿಲ್ಲ ಎಂಬುದು ಅದನ್ನು ಬೆಂಬಲಿಸುತ್ತಿರುವವರ ಖಡಕ್ ವಾದ. ಕಂಬಳಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಮೂಡಬಿದಿರೆಯಲ್ಲಿ ಭಾರೀ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು. [ಕಂಬಳ ಇರಲಿ, ಪನಿಕುಲ್ಲನೆ ಬೇಡ: ದೇವನೂರು ಮಹಾದೇವ]