ರಾಜ್ಯದಲ್ಲಿ ಮತ್ತೆ "ಲಾಕ್ಡೌನ್' ಜಾರಿ ಕುರಿತು ಸಂಪುಟದಲ್ಲಿ ಚರ್ಚೆ ಆಗಿಲ್ಲ
ಬೆಂಗಳೂರು, ಜೂ. 25: ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದು ಕಡಿಮೆಯಾಗುತ್ತಿಲ್ಲ. ಕೊರೊನಾ ವೈರಸ್ ಹರಡದಂತೆ ತಡೆಯುವುದು ಸೇರಿದಂತೆ ಹಲವು ಆಡಳಿತಾತ್ಮಕ ವಿಷಯಗಳ ಬಗ್ಗೆ ಇಂದಿನ ರಾಜ್ಯ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಹೊಸದಾಗಿ ಸುಸಜ್ಜಿತ ಆ್ಯಂಬುಲೆನ್ಸ್ಗಳನ್ನು ಖರಿದಿಸಲು ತೀರ್ಮಾನ ಮಾಡಲಾಗಿದೆ. ಬಹು ಚರ್ಚಿತ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಹೆ ವಹಿಸಿಕೊಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ. ಸಚಿವ ಸಂಪುಸ ತೀರ್ಮಾನಗಳು ಮುಂದಿವೆ.
ಲಾಕ್ಡೌನ್ ಬಗ್ಗೆ ಚರ್ಚೆ ಆಗಿಲ್ಲ
ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ಕೊಟ್ಟಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಕೊರೊನಾ ವೈರಸ್ ಎದುರಿಸುವ ಹಿನ್ನೆಲೆಯಲ್ಲಿ, ಅತ್ಯಂತ ಸುಸಜ್ಜಿತ 120 ಉನ್ನತ ಮಾದರಿಯ ಅಂಬ್ಯುಲೆನ್ಸ್ಗಳ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದ್ದು, 32.04 ಕೋಟಿ ರೂ. ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ಕೊಟ್ಟಿದೆ ಎಂದಿದ್ದಾರೆ.
ನಿರಾಣಿ ಶುಗರ್ಸ್ಗೆ ಕಾರ್ಖಾನೆ
ಮಂಡ್ಯ ಜಿಲ್ಲೆಯ ರೈತರು, ರೈತ ಹೋರಾಟಗಾರರ ವಿರೋಧದ ನಡೆವೆಯೂ ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಕೊಡಲಾಗಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಲಿಕತ್ವದ ನಿರಾಣಿ ಶುಗರ್ಸ್ ಲಿಮಿಟೆಡ್ಗೆ ಗುತ್ತಿಗೆ ಕೊಡಲು ಸಂಪುಟ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ.
ಮತ್ತಷ್ಟು ಕಠಿಣಕ್ರಮ: ಬೆಂಗಳೂರಿಗರಿಗೆ ಸಿಎಂ ಬಿಎಸ್ವೈ ಎಚ್ಚರಿಕೆ
ಮುಂದಿನ 40 ವರ್ಷಗಳ ಅವಧಿಗೆ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿದೆ. ಟೆಂಟರ್ ಪ್ರಕ್ರಿಯೆಯ ಬಳಿಕವೇ ಗುತ್ತಿಗೆ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಸಂಪುಟದ ನಿರ್ಣಯವನ್ನು ತಿಳಿಸಿದರು.
ಚಿಕಿತ್ಸೆಗೆ ದರ ನಿಗದಿ
ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಗೆ ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಮೊನ್ನೆ ನಿಗದಿಗೊಳಿಸಿ ಸುತ್ತೋಲೆ ಹೊರಡಿಸಿದ್ದ ದರವನ್ನೇ ಅಂತಿಮಗೊಳಿಸಿ ನಿರ್ಣಯ ಮಾಡಲಾಗಿದೆ.
ಇನ್ನು ಖಾಸಗಿ ಆಸ್ಪತ್ರೆಗಗಳು ಒಪ್ಪಿಗೆ ಕೊಡುವಂತೆ ಅವುಗಳ ಆಡಳಿತ ಮಂಡಳಿಗಳೊಮದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡುತ್ತಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಸರ್ಕಾರಿ ಭೂಮಿ ಮಾರಾಟಕ್ಕೆ ನಿರ್ಧಾರ
ಇನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟಿರುವ ಸರ್ಕಾರಿ ಭೂಮಿಯನ್ನು ಖರೀದಿಗೆ ಕೊಡಲು ಮಹತ್ವದ ತೀರ್ಮಾನವನ್ನು ಇಂದಿನ ಸಂಪುಟ ಸಭೆಯಲ್ಲಿ ಮಾಡಲಾಗಿದೆ.
ರಾಜ್ಯಾದ್ಯಂತ ಮತ್ತೆ ಲಾಕ್ಡೌನ್? ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಬೇಸಾಯ, ಕೈಗಾರಿಕೆ, ಧಾರ್ಮಿಕ , ಶೈಕ್ಷಣಿಕ ಉದ್ದೇಶಗಳಿಗೆ ಗುತ್ತಿಗೆ ಕೊಟ್ಟಿರುವ ಸರ್ಕಾರಿ ಭೂಮಿಯನ್ನ ಖರೀದಿಗೆ ಕೊಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಗುತ್ತಿಗೆ ಪಡೆದಿರುವ ಖಾಸಗಿ ಸಂಘ ಸಂಸ್ಥೆಗಳಿಗೆ ಭೂಮಿ ಖರೀದಿಗೆ ಕೊಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಉಳಿದಂತೆ ಸಂಪುಟದ ಇತರ ನಿರ್ಧಾರಗಳು ಹೀಗಿವೆ
* 2012ರಿಂದಲೂ ಇಲ್ಲಿ ತನಕ ಬಾಕಿ ಇರುವ 9.74 ಲಕ್ಷ ಮನೆಗಳ ನಿರ್ಮಾಣಕ್ಕೆ 10,194 ಕೋಟಿ ರೂ. ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ಕೊಟ್ಟಿದೆ.
* ಪದ್ಮ ಶ್ರೀ ಪ್ರಶಸ್ತಿಗೆ ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲು ಒಪ್ಪಿಗೆ
* ಕೈಗಾರಿಕೆಗಳ ಸ್ಥಾಪನೆಗೆ ಒನ್ ವಿಂಡೋ ವ್ಯವಸ್ಥೆಯಡಿ 15 ಕೋಟಿ ರೂ.ಗಳಿಗಿಂತ ಕಡಿಮೆ ಹೂಡಿಕೆಯ ಕೈಗಾರಿಕೆಗಳನ್ನು ಜಿಲ್ಲಾ ಸಮಿತಿ ವ್ಯಾಪ್ತಿಗೆ, ಅದಕ್ಕಿಂತ ಹೆಚ್ಚಿನ ಹೂಡಿಕೆಯ ಕೈಗಾರಿಕೆಗಳನ್ನು ರಾಜ್ಯ ಸಮಿತಿ ವ್ಯಪ್ತಿಗೆ ತರಲು ತೀರ್ಮಾನ.
* ಕೊರೊನಾ ವೈರಸ್ ಸಂಕಷ್ಟದದಲ್ಲಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ಸಂಬಳದ ಶೇಕಡಾ 30ರಷ್ಟು ವೇತಕ ಕಡಿತಗೊಳಿಸಲು ಘೊಟನೋತ್ತರ ಒಪ್ಪಿಗೆ