ಸಂಪುಟ ಸಭೆ: ರಾಜ್ಯಕ್ಕಿಲ್ಲ ಕೊರೊನಾ ಮೂರನೇ ಅಲೆ ಆತಂಕ ಎಂಬ ತೀರ್ಮಾನಕ್ಕೆ ಬಂದ ರಾಜ್ಯ ಸರ್ಕಾರ!
ಬೆಂಗಳೂರು, ಆ. 19: ಅಮೃತ ಸ್ವಾತಂತ್ರ್ಯ ಮಹೋತ್ಸವ ದಿನದಂದು ಘೋಷಣೆ ಮಾಡಿದ್ದ 11 ಯೋಜನೆಗಳಿಗೆ ಕ್ಯಾಬಿನೆಟ್ ಅನುಮೋದನೆ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ತೆಗೆದುಕೊಳ್ಳಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆದ ಮೊದಲ ಸಂಪುಟ ಸಭೆಗೆ ಸಚಿವರಾದ ಆನಂದ್ ಸಿಂಗ್ ಹಾಗೂ ಬಿ. ಶ್ರೀರಾಮುಲು ಗೈರಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇಬ್ಬರೂ ಸಚಿವರ ಗೈರು ಹಾಜರಿ ಬಿಜೆಪಿಯಲ್ಲಿ ಖಾತೆ ಕ್ಯಾತೆ ಇನ್ನೂ ಮುಗಿದಿಲ್ಲ ಎಂಬುದನ್ನು ತೋರಿಸಿದೆ. ಜೊತೆಗೆ ಕೊರೊನಾ ಮೂರನೇ ಅಲೆ, ರಾಜ್ಯ ವಿಧಾನ ಮಂಡಲ ಅಧಿವೇಶನ, ಇಂದಿರಾ ಕ್ಯಾಂಟೀನ್ ಕುರಿತಂತೆ ಸರ್ಕಾರದ ತೀರ್ಮಾನಗಳನ್ನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೊದಲ ಸಲ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆದಿದೆ. ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ತೀರ್ಮಾನಗಳನ್ನು ಸಚಿವ ಮಾಧುಸ್ವಾಮಿ ವಿವರಿಸಿದ್ದಾರೆ. ಏನೆಲ್ಲ ತೀರ್ಮಾನಗಳನ್ನು ಸಂಪುಟ ಸಭೆಯಲ್ಲಿ ಮಾಡಲಾಗಿದೆ ಎಂಬುದು ಮುಂದಿದೆ.
ಖಾತೆ ಖ್ಯಾತೆ; ಸಂಪುಟ ಸಭೆಗೆ ಸಚಿವರ ಗೈರು!
ಸಚಿವರಾದ ಆನಂದ್ ಸಿಂಗ್ ಹಾಗೂ ಬಿ. ಶ್ರೀರಾಮುಲು ಅವರು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಗೆ ಗೈರಾಗಿದ್ದಾರೆ. ಗೈರಾಗುವ ಮೂಲಕ ತಮ್ಮ ಖಾತೆ ಬದಲಾವಣೆ ಕುರಿತು ಇರುವ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಅವರು ಬಳ್ಳಾರಿಯಲ್ಲಿಯೇ ಇದ್ದರೂ ಸಂಪುಟ ಸಭೆಯಲ್ಲಿ ಭಾಗವಹಿಸಲು ಬಂದಿಲ್ಲ ಎನ್ನಲಾಗಿದೆ. ಆದರೆ ಸಚಿವ ಬಿ. ಶ್ರೀರಾಮುಲು ಅವರು ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿರುವುದರಿಂದ ಸಂಪುಟ ಸಭೆಗೆ ಗೈರಾಗಿದ್ದಾರೆ ಎಂಬ ಮಾಹಿತಿಯಿದೆ. ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ತೀರ್ಮಾನಗಳನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಕೇಂದ್ರದ ಅನುದಾನದಲ್ಲಿ ಆರೋಗ್ಯ ಉಪ ಕೇಂದ್ರಗಳು ಮೇಲ್ದರ್ಜೆಗೆ!
ಆರೋಗ್ಯ ಅಧಿನಿಯಮಗಳ ವಿಧೇಯಕ ಜಾರಿಗೆ ಸಂಪುಟದ ಅನುಮತಿ ಪಡೆಯಲಾಗಿದ್ದು, ಅದರಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಸ್ಟೇಟ್ ಮೆಂಟಲ್ ಕೇರ್ ಆಥಾರಿಟಿ ಜಾರಿಗೆ ತರಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ರಾಜ್ಯದಲ್ಲಿರುವ 2,859 ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದಕ್ಕಾಗಿ 478 ಕೋಟಿ ರೂ. ಅನುಮೋದನೆ ನೀಡಲು ತೀರ್ಮಾನ ಮಾಡಲಾಗಿದ್ದು, ಅದರಲ್ಲಿ ಶೇ 50ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕೊಡಲಿದೆ. ಉಳಿದ 278 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಜೊತೆಗೆ ಆರೋಗ್ಯ ಪೂರೈಕೆದಾರರ ಹುದ್ದೆಗಳ ಭರ್ತಿಗೆ ನಿರ್ಣಯಕೈಗೊಳ್ಳಲಾಗಿದ್ದು, ಬಿಎಸ್ಸಿ ನರ್ಸಿಂಗ್ ಮುಗಿಸಿದವರನ್ನು ಪರಿಗಣನೆ ಮಾಡಲು ತೀರ್ಮಾನ ಮಾಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ಕೊಟ್ಟಿದ್ದಾರೆ.
ಅಮೃತ ನಿರ್ಮಲ ಜನಗರ ಯೋಜನೆಗೆ ಸಂಪುಟ ಅಸ್ತು!
ಅಮೃತ ನಿರ್ಮಲ ನಗರ ಯೋಜನೆ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ಕೊಟ್ಟಿದೆ. 73 ನಗರ ಪಟ್ಟಣಗಳ ಸ್ವಚ್ಛತೆಗೆ ಒತ್ತು ನೀಡಿದ್ದೇವೆ. 71 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಅಮೃತ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಮಾರಾಟಕ್ಕೆ ಮೂರು ವರ್ಷಕ್ಕೆ ಅನುದಾನ ನೀಡಲಾಗುತ್ತದೆ. ನೇಕಾರ, ಮೀನುಗಾರರು ಸೇರಿದಂತೆ ಕೆಲವರಿಗೆ ಕೊಡಲಾಗುತ್ತದೆ. 75 ಕೋಟಿ ರೂ. ಅನುದಾದನದಲ್ಲಿ 750 ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆ ಜಾರಿಗೆ ತರಲು ತೀರ್ಮಾನ ಮಾಡಲಾಗಿದೆ. ಅದರೊಂದಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 25 ಲಕ್ಷ ರೂ. ಅನುದಾನಕ್ಕೆ ಒಪ್ಪಿಗೆ ಕೊಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ
ಆಳಂದದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 12.48 ಕೋಟಿ ರೂ. ಅನುದಾನ ಕೊಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು, ಅದಕ್ಕೆ ಈಗ ಹೆಚ್ಚುವರಿಯಾಗಿ 2.2 ಕೋಟಿ ಹಣ ಮಂಜೂರು ಮಾಡಲು ತೀರ್ಮಾನ ಮಾಡಲಾಗಿದೆ. ಮಂಗಳೂರು ತ್ಯಾಜ್ಯ ವಿಲೇವಾರಿಗೆ ಗಮನ ಕೊಡಲಾಗಿದ್ದು, ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ 73.75 ಕೋಟಿ ರೂ. ಅನುದಾನ ಕೊಡಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಜೊತೆಗೆ ಇಂದಿರಾ ಕ್ಯಾಂಟೀನ್, ಕೊರೊನಾ ಮೂರನೇ ಅಲೆ ಹಾಗೂ ಮಳೆಗಾಲದ ಅಧಿವೇಶನ ಕುರಿತು ಸಂಪುಟದಲ್ಲಿ ಚರ್ಚೆ ಆಗಿದೆಯಾ? ಎಂಬ ಪ್ರಶ್ನೆಗೆ ಮಾಧುಸ್ವಾಮಿ ಹೀಗೆ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಚಿಂತೆ ಇಲ್ಲ
ಕೊರೊನಾ ಮೂರನೇ ಅಲೆಯ ಆತಂಕ ರಾಜ್ಯ ಸರ್ಕಾರಕ್ಕೆ ಇದ್ದಂತಿಲ್ಲ. ಕೋವಿಡ್ ಮೂರನೆ ಅಲೆಯ ಆತಂಕ ಸದ್ಯಕ್ಕೆ ಕಂಡು ಬಂದಿಲ್ಲ. ಹೀಗಾಗಿ ಕೊರೊನಾ ಮೂರನೇ ಅಲೆ ಬಗ್ಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಅದರೊಂದಿಗೆ ಇಂದಿರಾ ಕ್ಯಾಂಟಿನ್ ವಿಚಾರದಲ್ಲಿ ಕ್ಯಾಬಿನೆಟ್ನಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದೂ ಮಾಧುಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಅದರೊಂದಿಗೆ ಭಗವಂತ ಖೂಬಾ ಸ್ವಾಗತಕ್ಕೆ ಬಂದೂಕು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಅದರ ಬಗ್ಗೆ ನಾನು ಇಲ್ಲಿ ಮಾತನಾಡುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
Recommended Video
ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನ
ವಿಧಾನ ಮಂಡಲ ಮಳೆಗಾಲದ ಅಧಿವೇಶನವನ್ನು ಸೆಪ್ಟಂಬರ್ 13 ರಿಂದ 24ರವರೆಗೆ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ವರ್ಷದ ಮೊದಲ ಅಧಿವೇಶನ ಹಾಗೂ ಬಜೆಟ್ ಅಧಿವೇಶನಗಳು ಒಂದೇ ಸಲಕ್ಕೆ ನಡೆದಿದ್ದವು. ಕಳೆದ ಜೂನ್ ತಿಂಗಳಿನಲ್ಲಿಯೇ ವಿಧಾನ ಮಂಡಲ ಮಳೆಗಾಲದ ಅಧಿವೇಶನ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಸದನ ನಡೆಸದಿರಲು ಸರ್ಕಾರ ತೀರ್ಮಾನಿಸಿತ್ತು. ಹೀಗಾಗಿ ಮೂರು ತಿಂಗಳು ತಡವಾಗಿ ಮಳೆಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದೆ.
ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ತೀರ್ಮಾನ ಮಾಡಿರುವುದರಿಂದ ಮತ್ತೆ ಬೆಳಗಾವಿಗೆ ಈ ಸಲವೂ ಅಧಿವೇಶನದ ಭಾಗ್ಯ ಸಿಕ್ಕಿಲ್ಲ. ಇದೂ ಕೂಡ ಉಭಯ ಸದನಗಳಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಸರ್ಕಾರದ ವೈಫಲ್ಯ, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯಿಂದ ರಾಜ್ಯದ ಜನರಿಗೆ ಪ್ರವಾಹ ಹಾಗೂ ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳು, ಸರ್ಕಾರದ ಹಗರಣಗಳು, ಸಚಿವರ ಮೇಲಿನ ಭ್ರಷ್ಟಾಚಾರ ಆರೋಪಗಳು, ಸೇರಿದಂತೆ ಹಲವು ವಿಷಯಗಳ ಕುರಿತು ಎರಡೂ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಈಗಾಗಲೇ ತಯಾರಿ ಮಾಡಿಕೊಂಡಿವೆ.