ಬಿಬಿಎಂಪಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು, ಸೆ. 03: ಆಡಳಿತಾತ್ಮಕ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ತಿಂಗಳು ಕೋವಿಡ್ ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿಯನ್ನು 8 ವಲಯಗಳಲ್ಲಿ ವಿಂಗಡನೆ ಮಾಡಲಾಗಿತ್ತು. ಜೊತೆಗೆ ಬಿಬಿಎಂಪಿ ವಿಭಜನೆ ಮಾಡಲು ಕಾನೂನು ತಿದ್ದುಪಡಿ ತರಲೂ ನಿರ್ಧಾರ ಮಾಡಲಾಗಿದೆ.
Recommended Video
ಇದೇ ಸಂದರ್ಭದಲ್ಲಿ ಬಿಬಿಎಂಪಿ ಕುರಿತು ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.
ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಇಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಪ್ರಾಥಮಿಕ ಶಿಕ್ಷಣದಲ್ಲಿಯೂ ಅಮೂಲಾಗ್ರ ಬದಲಾವಣೆ ತರಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಪ್ರವಾಹ ಹಾಗೂ ಅತಿವೃಷ್ಟಿ ಕುರಿತು ಸಮೀಕ್ಷೆ ನಡೆಸಲು ಬರುವ ಕೇಂದ್ರ ತಂಡಕ್ಕೆ ರಾಜ್ಯದಿಂದಲೂ ಸಮೀಕ್ಷೆ ವಿವರಣೆ ಕೊಡುವುದು ಸೇರಿದಂತೆ ಹೆಚ್ಚಿನ ಪರಿಹಾರಕ್ಕೆ ಮನವಿ ಸಲ್ಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಇನ್ನು ಕೋವಿಡ್ ಸೋಂಕಿತರ ಮನೆಗೆ ಪೋಸ್ಟರ್ ಸಹ ಹಾಕಲ್ಲ
ಬಿಬಿಎಂಪಿ ವಾರ್ಡ್ ಸಂಖ್ಯೆ
ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿ ವಿಭಜನೆಗೆ ಚಿಂತನೆ ನಡೆದಿದೆ. ಅದಕ್ಕೂ ಮೊದಲು ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿಯಲ್ಲಿ ಈಗ ಒಟ್ಟು 198 ವಾರ್ಡ್ಗಳಿವೆ. ಅವುಗಳನ್ನು 225 ವಾರ್ಡ್ಗಳಿಗೆ ಹೆಚ್ಚಿಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಮಾಹಿತಿ ಕೊಟ್ಟಿದ್ದಾರೆ.
ಹೊಸ ನೀತಿಗೆ ಅನುಗುಣವಾಗಿ 40 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಬಿಬಿಎಂಪಿಗೆ ಚುನಾವಣೆಗೂ ಮೊದಲು ಆಡಳಿತಾಧಿಕಾರಿಗಳ ನೇಮಕದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಬಿಬಿಎಂಪಿ ಜೋನ್ಗಳನ್ನೂ ಹೆಚ್ಚು ಮಾಡುವ ಚಿಂತನೆ ಇದೆ ಎಂದು ಮಾಧುಸ್ವಾಮಿ ಮಾಹಿತಿ ಕೊಟ್ಟಿದ್ದಾರೆ.
ಎಲ್ಲ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಶಿಕ್ಷಣ ನೀಡಲು ತೀರ್ಮಾನ ಮಾಡಲಾಗಿದೆ. ಒಟ್ಟು 276 ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ನಡೆಸಲು ತೀರ್ಮಾನ ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದೆ ಎಂದು ಮಾಧುಸ್ವಾಮಿ ಸಂಪುಟದ ತೀರ್ಮಾನವನ್ನು ತಿಳಿಸಿದರು.
108 ಸೇವೆ ವಿಸ್ತಾರ
ರಾಜ್ಯದಲ್ಲಿರುವ 108 ಆ್ಯಂಬುಲೆನ್ಸ್ ಸೇವೆಗೆ ಟೆಂಡರ್ ಕರೆಯಲು ಕೋರ್ಟ್ ಸೂಚನೆ ಇತ್ತು. ಹೀಗಾಗಿ ಟೆಂಡರ್ ಕರೆದಿದ್ದೇವೆ. ಇನ್ನುಮುಂದೆ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿ ಹೇಳುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಜೊತೆಗೆ ಆ್ಯಂಬುಲೆನ್ಸ್ ವ್ಯವಸ್ಥೆಗೆ ಕಿಲೋಮೀಟರ್ ವ್ಯಾಪ್ತಿಯಿಲ್ಲ. ಈ ಮೊದಲು ಕೇವಲ ಮೂವತ್ತು ಕಿ.ಮೀ ವ್ಯಾಪ್ತಿ ಮಾತ್ರ ಇತ್ತು. ಈಗ ಆ ನಿಯಮ ತೆಗೆದು ಹಾಕಿದ್ದೇವೆ. ರೋಗಿಗೆ ಅನುಕೂಲವಾಗುವ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ಹೋಗಬೇಕು ಎಂದು ನಿಯಮ ಬದಲಾವಣೆ ಮಾಡಿದ್ದೇವೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಕಾನೂನಿಗೆ ತಿದ್ದುಪಡಿ
ಸಾಂಕ್ರಾಮಿಕ ರೋಗದ ಆತಂಕದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು, ಕಾನೂನಿಗೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ. ಗಲಭೆ, ಪ್ರತಿಭಟನೆ ಸಂದರ್ಭದಲ್ಲಿ ಹಾನಿಯಾದ ಮೊತ್ತದ ದುಪ್ಪಟ್ಟು ದಂಡ ವಸೂಲಿಗೆ ಕೋರ್ಟ್ಗೆ ಅಧಿಕಾರ ಕೊಡಲಾಗುತ್ತದೆ.
ಈ ಕುರಿತು ಕರ್ನಾಟಕ ಸಾಂಕ್ರಾಮಿಕ ರೋಗಗಳ ತಿದ್ದುಪಡಿ ವಿಧೇಯಕಕ್ಕೆ ಮತ್ತೆ ತಿದ್ದುಪಡಿ ತರಲಾಗುವುದು. ಇದೇ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.