ಸಂಷ್ಟದಲ್ಲೂ ಹಲವು ನಿರ್ಣಯ ತೆಗೆದುಕೊಂಡ ಸಚಿವ ಸಂಪುಟ
ಬೆಂಗಳೂರು, ಜುಲೈ 11: ಸರ್ಕಾರ ಉರುಳುವ ಸಂಕಷ್ಟದಲ್ಲಿದ್ದರೂ ಇಂದು ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಕುಮಾರಸ್ವಾಮಿ ಅಂಗೀಕಾರ ಮಾಡಿಲ್ಲವಾಗಿರುವ ಕಾರಣ ಸರ್ಕಾರದ ಎಲ್ಲ ಸಚಿವರು ತಮ್ಮ-ತಮ್ಮ ಸ್ಥಾನದಲ್ಲಿ ಮುಂದುವರೆದಿದ್ದು, ಬಹುತೇಕ ಸಚಿವರು ಇಂದು ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು.
Live Updates: ಸ್ಪೀಕರ್ ಕಚೇರಿ ಒಳಗೆ 11 ಅತೃಪ್ತ ಶಾಸಕರು
ಯಾವುದೇ ಪ್ರಮುಖ ನಿರ್ಧಾರಗಳನ್ನು ಸರ್ಕಾರವು ತೆಗೆದುಕೊಳ್ಳಬಾರದು ಎಂದು ರಾಜ್ಯಪಾಲರು ಸೂಚಿಸಿದ್ದರೂ ಸಹ ಕೆಲವು ಅಭಿವೃದ್ಧಿಪರ ನಿರ್ಣಯಗಳನ್ನು ಸಚಿವ ಸಂಪುಟ ಸಭೆಯು ಇಂದು ತೆಗೆದುಕೊಂಡಿತು.
ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ರಾಜ್ಯದ 30 ಜಿಲ್ಲಾ ಪಂಚಾಯಿತಿಗಳು ಮತ್ತು 177 ತಾಲ್ಲೂಕು ಪಂಚಾಯಿತಿಗಳ ರಾಜ್ಯ ಹಣಕಾಸು ಆಯೋಗದ ಅರ್ನಿಬಂಧಿತ ಅನುದಾನವನ್ನು ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
2019-20ನೇ ಸಾಲಿನ ಆರ್ಥಿಕ ವರ್ಷದಿಂದ 30 ಜಿಲ್ಲಾ ಪಂಚಾಯತ್ಗಳಲ್ಲಿ ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತಿರ್ಣವನ್ನು ಆಧರಿಸಿ ಅದರ ಆಧಾರದ ಮೇಲೆ ಕನಿಷ್ಟ 4 ಕೋಟಿ ಗಳಿಂದ ಗರಿಷ್ಠ 8 ಕೋಟಿಯ ವರೆಗೆ ಅನುದಾನ ಹಂಚಿಕೆ ಮಾಡಲಾಗುವುದು. ಇದಕ್ಕೆ 172.07 ಕೋಟಿ ಅನುದಾನ ನಿಗದಿಗೊಳಿಸಲಾಗಿದೆ.
ರಾಜ್ಯದ 24 ಜಿಲ್ಲೆಗಳಲ್ಲಿ ಕೃಷಿ ಬೆಳೆಗಳಿಗೆ ಹನಿ ನೀರಾವರಿ ಘಟಕಗಳ ಅಳವಡಿಕೆಗಾಗಿ ಎಲ್ಲಾ ವರ್ಗದ ರೈತರಿಗೆ ಸಹಾಯಧನ ನೀಡಲು ನಬಾರ್ಡ್ ನಿಂದ 20 ಕೋಟಿ ರೂ.ಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಕ್ರಿಯಾಯೋಜನೆಯಂತೆ ರಸ್ತೆಗಳಿಗೆ ವೈಟ್ಟ್ಯಾಪಿಂಗ್ ಮಾಡಲು 146.97 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ಪರಿಶೀಲಿಸಿ ತೀರ್ಮಾನಕೈಗೊಳ್ಳಲು ಆಯೋಗ ರಚಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಷ್ಟು ಮಾತ್ರವಲ್ಲದೆ, ರಾಮನಗರ, ಮಂಡ್ಯ, ಹಾಸನ, ಬೆಳಗಾವಿ, ಬೆಂಗಳೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳು ಮತ್ತು ಅನುದಾನ ಬಿಡುಗಡೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ.