ಸಂಪುಟ ವಿಸ್ತರಣೆಗೆ ಅಮಿತ್ ಶಾ ನೀಡಿದ ''ಸೂತ್ರ'' ಬಹಿರಂಗ
ಬೆಂಗಳೂರು, ಜನವರಿ 24: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ದಾವೋಸ್ ನಿಂದ ಬೆಂಗಳೂರಿಗೆ ಕಾಲಿರಿಸುತ್ತಿದ್ದಂತೆ ಸಚೈಚ ಸಂಪುಟ ವಿಸ್ತರಣೆ ಬಗ್ಗೆ ಬಿರುಸಿನ ಚರ್ಚೆ, ಲೆಕ್ಕಾಚಾರ ಮೊದಲುಗೊಂಡಿದೆ. ಬಿಜೆಪಿ ಹೈಕಮಾಂಡ್ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ, ನಂತರ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.
"ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ"ಸಂಪುಟ ವಿಸ್ತರಣೆ ಬಗ್ಗೆ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಇನ್ನೊಂದು ಸುತ್ತಿನ ವಿವರವಾದ ಮಾತುಕತೆ ನಡೆಸಿದ ಬಳಿಕ ಇನ್ನು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿಗೆ ಬರ್ತಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ
8+7+1 ಸೂತ್ರದಡಿ ಮಂತ್ರಿ ಮಂಡಲ ವಿಸರಿಸಿ ಎಂದು ಅಮಿತ್ ಶಾ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಈ ಸೂತ್ರಕ್ಕೆ ಯಡಿಯೂರಪ್ಪ ಸಮ್ಮತಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರು 9+3+1 ಸೂತ್ರ ಇರಲಿ ಎಂದು ಹೈಕಮಾಂಡ್ ಮುಂದೆ ಹೊಸ ಸೂತ್ರ ಇಟ್ಟಿದ್ದರಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಯಿತು ಜೊತೆಗೆ ಮುಖ್ಯಮಂತ್ರಿಗಳ ದಾವೋಸ್ ಭೇಟಿ ಇದ್ದಿದ್ದರಿಂದ ಇನ್ನಷ್ಟು ವಿಳಂಬವಾಯಿತು. ಏನಿದು 8+7+1 ಸೂತ್ರ? ಅಮಿತ್ ಶಾ ನೀಡಿದ ಈ ಸೂತ್ರವನ್ನು ಯಡಿಯೂರಪ್ಪ ಪಾಲಿಸುವರೇ? ಅಥವಾ ನಡ್ಡಾ ನೀಡುವ ಹೊಸ ತಂತ್ರಕ್ಕೆ ತಲೆಬಾಗುವರೇ? ಕಾದು ನೋಡಬೇಕಿದೆ.
ಏನಿದು 8+7+1 ಸೂತ್ರ
ಮಂತ್ರಿಮಂಡಲದಲ್ಲಿ ಖಾಲಿ ಇರುವ 16 ರಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಆಯ್ಕೆಗೊಂಡ ಹೊಸಬರಿಗೆ ಎಂಟು, ಏಳು ಸ್ಥಾನಗಳನ್ನು ಮೂಲ ಬಿಜೆಪಿಯವರಿಗೆ ಹಾಗೂ ಒಂದು ಸ್ಥಾನವನ್ನು ಖಾಲಿ ಉಳಿಸುವಂತೆ ಹೈಕಮಾಂಡ್ ನಾಯಕರು ಸಲಹೆ ಮಾಡಿದ್ದಾರೆ. ವರಿಷ್ಠರು ತೆಗೆದುಕೊಂಡ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿಯವರಿಗೆ ಸಂದೇಶ ರವಾನಿಸಿದ್ದಾರೆ.
ಆದರೆ, ವರಿಷ್ಠರ ಸೂತ್ರಕ್ಕೆ ಸಮ್ಮತಿಸದ ಯಡಿಯೂರಪ್ಪ ದಾವೋಸ್ ನೆಪವೊಡ್ಡಿ ಅಂದು ದೆಹಲಿ ಪ್ರವಾಸವನ್ನೇ ರದ್ದು ಮಾಡಿದ್ದರು. ಈಗ ಮತ್ತೊಮ್ಮೆ ದೆಹಲಿ ನಾಯಕರ ಮುಂದೆ ನಿಲ್ಲಬೇಕಿದೆ.
ಹೊಸದಾಗಿ ಆಯ್ಕೆಯಾದ ಶಾಸಕರ ಒತ್ತಡ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಹೊಸದಾಗಿ ಆಯ್ಕೆಗೊಂಡಿರುವ ಶಾಸಕರು ಬೆದರಿಕೆ ಮತ್ತು ಒತ್ತಡವನ್ನು ತುಂಬಾ ಸಾಫ್ಟ್ ಆಗಿ ಹೇರಲಾರಂಭಿಸಿದ್ದಾರೆ. ಹೀಗಾಗಿ, ದಾವೋಸ್ ಭೇಟಿ ನಂತರ ಬಿಡುವಿಲ್ಲದೆ ದೆಹಲಿ ಪ್ರವಾಸಕ್ಕಾಗಿ, ಹೈಕಮಾಂಡ್ ನಾಯಕರ ಭೇಟಿಗಾಗಿ ಬಿಎಸ್ ಯಡಿಯೂರಪ್ಪ ಕಾದಿದ್ದಾರೆ. ಅಸಮಾಧಾನಗೊಂಡ ಈ ಶಾಸಕರು ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಸದ್ಯಕ್ಕೆ ಸಂಪುಟ ವಿಸರಣೆ ಮಾಡುವುದು ಬೇಕಿಲ್ಲ. ಮತ್ತಷ್ಟು ದಿನಗಳ ಕಾಲ ವಿವಿಧ ಇಲಾಖೆಗಳನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳಲು ಮುಖ್ಯಮಂತ್ರಿಯವರೇ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಮೂಲ ಬಿಜೆಪಿ ಶಾಸಕರ ಒತ್ತಡ
ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿದಂತೆ ಕೆಲವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪನವರೇ ಜನವರಿ 27 ರಂದು ಮಂತ್ರಿಮಂಡಲ ವಿಸರಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಹೇಳಿ ಕಳುಹಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಚಿವ ಮತ್ತು ವಿಧಾನಸಭೆಗೆ ರಾಜೀನಾಮೆ ನೀಡಿ, ಹೊರ ಬಂದು ನಾನು ಮುಖ್ಯಮಂತ್ರಿಯಾಗಲು ಕಾರಣಕರ್ತರಾ ದವರು ಬಹುಮಂದಿ ಮತ್ತೆ ಪಕ್ಷದ ವತಿಯಿಂದ ಆಯ್ಕೆಗೊಂಡಿರುವುದು ವಿಶೇಷ ಹಾಗೂ ಸಂಕಟಕ್ಕೆ ಕಾರಣವಾಗಿರುವ ಅಂಶ.
ಸೋತವರಿಗೆ ಮಂತ್ರಿ ಸ್ಥಾನವಿಲ್ಲ
ಸೋತವರಿಗೆ ಮಂತ್ರಿ ಸ್ಥಾನವಿಲ್ಲ ಎಂದು ಅಂದು ಅಮಿತ್ ಶಾ ನೀಡಿದ್ದ ಸೂತ್ರದಂತೆ ಯಡಿಯೂರಪ್ಪ ಇಂದು ನುಡಿದಿದ್ದಾರೆ. ಹೀಗಾಗಿ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹೊಸಕೋಟೆ ಕ್ಷೇತ್ರದ ಮಾಜಿ ಶಾಸಕ ಎಂಟಿಬಿ ನಾಗರಾಜ್ಗೆ ಹಿನ್ನಡೆಯಾಗಿದೆ. ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಎಚ್. ಪಿ. ಮಂಜುನಾಥ್ ವಿರುದ್ಧ ಸೋತಿರುವ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸದ್ಯಕ್ಕಂತೂ ಇಲ್ಲ.