ಸಚಿವ ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್: ಯಾರಾಗಲಿದ್ದಾರೆ ಸಚಿವರು?
Recommended Video
ಬೆಂಗಳೂರು, ಜೂನ್ 08: ಮುಂದೂಡಿಕೆ ಆಗುತ್ತಲೇ ಬಂದಿದ್ದ ಸಚಿವ ಸಂಪುಟ ವಿಸ್ತರಣೆ ಕಾರ್ಯ ಅಂತೂ ನಿಗದಿ ಆಗಿದೆ. ಬುಧವಾರ ಜೂನ್ 12 ರಂದು ಸಂಪುಟ ವಿಸ್ತರಣೆಗೆ ಅಂತಿಮ ಸಮಯ ನಿಗದಿ ಮಾಡಲಾಗಿದೆ.
ಇಂದು ರಾಜಭವನಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸಮಯ ಕೇಳಿದ್ದು, ಬುಧವಾರ ಬೆಳಿಗ್ಗೆ 11:30ಕ್ಕೆ ಸಂಪುಟ ವಿಸ್ತರಣೆ ಆಗಲಿದ್ದು, ಮೂವರು ಶಾಸಕರಿಗೆ ರಾಜಭವನದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ.
ಮೂವರು ಸಚಿವರು ಯಾರು ಎಂದು ಗೌಪ್ಯತೆ ಕಾಪಾಡಿಕೊಳ್ಳಲಾಗಿದ್ದು, ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಸಚಿವರಾಗುವ ಸಾಧ್ಯತೆ ಹೆಚ್ಚಿದೆ.
ಮೂವರು ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಪಕ್ಕಾ
ಈ ಬುಧವಾರ (ಜೂನ್ 05) ರಂದೇ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು, ಆದರೆ ರಾಜಕೀಯ ಕಾರಣಗಳಿಗಾಗಿ ಈ ಬುಧವಾರದಂದು ಸಂಪುಟ ವಿಸ್ತರಣೆ ಆಗಲಿಲ್ಲ.
ಮೂರು ಸಚಿವ ಸ್ಥಾನ ಖಾಲಿ ಇದೆ
ಮೂರು ಸಚಿವ ಸ್ಥಾನಗಳು ಸದ್ಯಕ್ಕೆ ಖಾಲಿ ಇದ್ದು, ಅವುಗಳ ಜೊತೆಗೆ ಈಗಿರುವ ಕೆಲವರನ್ನು ರಾಜೀನಾಮೆ ಕೊಡಿಸಿ ಆ ಸ್ಥಾನಕ್ಕೆ ಅತೃಪ್ತರನ್ನು ಸಾಹಸ ಕೂಡ ನಡೆಸಲಾಗಿತ್ತು. ಹಾಗಾಗಿ ಯಾವ ಅತೃಪ್ತರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದು ಬುಧವಾರದಂದು ಗೊತ್ತಾಗಲಿದೆ.
ಸಂಪುಟ ವಿಸ್ತರಣೆ : ಕಾಂಗ್ರೆಸ್ಗೆ ಷರತ್ತು ಹಾಕಿದ ದೇವೇಗೌಡರು!
ಜೆಡಿಎಸ್ ಯಾರನ್ನು ಸಚಿವರನ್ನಾಗಿಸುತ್ತದೆ?
ಜೆಡಿಎಸ್ ಪಕ್ಷವು ತನ್ನ ಬಳಿ ಉಳಿದಿರುವ ಒಂದು ಸಚಿವ ಸ್ಥಾನವನ್ನು ಭರ್ತಿ ಮಾಡಬೇಕಾಗಿದ್ದು, ಆ ಸ್ಥಾನಕ್ಕೆ ಯಾರನ್ನು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನವನ್ನು ಜೆಡಿಎಸ್ ನೀಡುತ್ತದೆ ಅಥವಾ ಉತ್ತರ ಕರ್ನಾಟಕದ ಶಾಸಕರಿಗೆ ಸಚಿವ ಸ್ಥಾನ ನೀಡುತ್ತದೆ ಎಂಬ ಸುದ್ದಿ ಇದೆ.
ಅತೃಪ್ತರು ಏನು ಮಾಡುತ್ತಾರೆ?
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯು ಭಾರಿ ಕುತೂಹಲ ಕೆರಳಿಸಿದ್ದು, ಅತೃಪ್ತರಿಗೆ ಕಾಂಗ್ರೆಸ್ ಮಣೆ ಹಾಕುತ್ತದೆಯಾ? ಅಥವಾ ಸಂಪುಟದಲ್ಲಿ ಸ್ಥಾನ ಸಿಗದ ಅತೃಪ್ತರು ಮೈತ್ರಿ ಸರ್ಕಾರಕ್ಕೆ ಹಳ್ಳ ತೋಡುತ್ತಾರೆಯೇ ಎಂಬುದು ಭಾರಿ ಕುತೂಹಲ ಕೆರಳಿಸಿದೆ.
ರಾಮಲಿಂಗಾ ರೆಡ್ಡಿ ಸಿಟ್ಟಿಗೆ ಕರಗಿದ ಕಾಂಗ್ರೆಸ್, ಸಚಿವ ಸ್ಥಾನ ಪಕ್ಕಾ
ಪಕ್ಷೇತರ ಶಾಸಕರಿಗೆ ಮಣೆ?
ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಮುಳಬಾಗಿಲಿನ ನಾಗೇಶ್ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವುದೆಂಬ ನಿರೀಕ್ಷೆ ಇದೆ. ಆರ್.ಶಂಕರ್ ಅವರಿಗೆ ಈ ಮೊದಲು ಸಚಿವ ಸ್ಥಾನ ನೀಡಲಾಗಿತ್ತು. ಆ ನಂತರ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆರ್.ಶಂಕರ್ ಮತ್ತು ನಾಗೇಶ್ ಅವರು ಕೆಲವು ತಿಂಗಳ ಹಿಂದೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಆ ನಂತರ ನಾಗೇಶ್ ಮತ್ತೆ ಕಾಂಗ್ರೆಸ್ಗೆ ಬೆಂಬಲ ನೀಡಿದರು.