ಸಂಪುಟ ವಿಸ್ತರಣೆ: ಆಕಾಂಕ್ಷಿಗಳ ಗೂಟದ ಕಾರು ಏರುವ ಕನಸು ಮತ್ತೆ ಭಗ್ನ
ಪಿತೃಪಕ್ಷ ಮುಗಿದು, ನವರಾತ್ರಿಯ ಮೊದಲ ದಿನ ಅಂದರೆ ಅಕ್ಟೋಬರ್ ಹತ್ತರಂದು ಸಚಿವ ಸಂಪುಟ ವಿಸ್ತರಣೆ ಪಕ್ಕಾ ಎನ್ನುವ ಸುದ್ದಿಯಿತ್ತು. ಅದನ್ನು ನಂಬಿ, ಅದೆಷ್ಟು ಸಚಿವ ಸ್ಥಾನದ ಆಕಾಂಕ್ಷಿಗಳು ಹೊಸ ಕೋಟು, ಹೊಸ ಪಂಚೆ ಖರೀದಿಸಿದ್ರೋ ಏನೋ?
ಉಪಚುನಾವಣೆಯ ದಿನಾಂಕ ಘೋಷಣೆಯಾಗಬಹುದು ಎನ್ನುವ ಮುನ್ಸೂಚನೆ ಅರಿತಿದ್ದ ಜೆಡಿಎಸ್ ವರಿಷ್ಠ ದೇವೇಗೌಡ್ರು, ಸಚಿವ ಸಂಪುಟ ವಿಸ್ತರಣೆ ಈಗ ಬೇಡ ಎಂದು ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರ ಬಳಿ ಚರ್ಚಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದರಿಂದ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಗೆ ಭಾರೀ ನಿರಾಸೆಯಾಗಿತ್ತು.
ಉಪಚುನಾವಣೆಯ ನೆಪವೊಡ್ಡಿ ಸಂಪುಟ ವಿಸ್ತರಣೆಗೆ ಬ್ರೇಕ್ ಬೀಳುವ ಎಲ್ಲಾ ಸಾಧ್ಯತೆಗಳಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ದಂಗೆ ಏಳಲಿದ್ದಾರಾ ಅಥವಾ ಪಕ್ಷದ ಹಿರಿಯ ಮುಖಂಡರು ಇವರನ್ನು ಮತ್ತೊಂದು ರೌಂಡ್ ಸಮಾಧಾನ ಪಡಿಸಲಿದ್ದಾರಾ ಎನ್ನುವ ಕುತೂಹಲ ಮನೆಮಾಡಿದೆ.
ಉಪಚುನಾವಣೆಗೆ ಚುನಾವಣಾ ಆಯೋಗ ನವೆಂಬರ್ ಮೂರರ ದಿನ ನಿಗದಿ ಪಡಿಸಿದೆ, ಇದಾದ ನಂತರ ಬೆಳಗಾವಿ ಅಧಿವೇಶನ ಆರಂಭವಾಗುವುದರಿಂದ, ಆಕಾಂಕ್ಷಿಗಳಿಗೆ ಸಮ್ಮಿಶ್ರ ಸರಕಾರದಲ್ಲಿ ಸಚಿವಸ್ಥಾನ ಸದ್ಯದ ಮಟ್ಟಿಗೆ ಗಗನಕುಸುಮವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ಬೇಕು: ಎಚ್ಎಂ ರೇವಣ್ಣ ಪಟ್ಟು
ಒಂದು ವೇಳೆ, ಉಪಚುನಾವಣೆ ಮುಗಿದ ಕೂಡಲೇ, ಸಂಪುಟ ವಿಸ್ತರಣೆ ಮಾಡಿದ್ದೇ ಆದಲ್ಲಿ, ಸಚಿವ ಸ್ಥಾನದ ಆಕಾಂಕ್ಷಿಗಳು ತುಂಬಾ ಜನ ಇರುವುದರಿಂದ, ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಾಗದೇ ಇರುವುದರಿಂದ, ಸಚಿವ ಸ್ಥಾನ ವಂಚಿತರಿಂದ ಸರಕಾರ ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಬರಬಹುದು.
ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿಯಾದ ಗೌಡ್ರು
ದೇವೇಗೌಡರು ದೆಹಲಿಯಲ್ಲಿ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದರೆ, ಸಮ್ಮಿಶ್ರ ಸರಕಾರ ಬಿದ್ದೇ ಹೋಗುವ ಸಾಧ್ಯತೆಯಿದೆ. ಮುಂಬರುವ ಲೋಕಸಭಾ ಚುನಾವಣೆಯವರೆಗೆ, ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಬಾರದೆಂದು ಹೇಳಿದ್ದಾರೆ ಎನ್ನುವ ಮಾಹಿತಿಯಿದೆ. ಹಾಗೋಹೀಗೋ ಯಥಾಸ್ಥಿತಿ ಕಾಪಾಡಿಕೊಂಡು ಹೋಗೋಣ ಎಂದು ಗೌಡ್ರು, ವೇಣುಗೋಪಾಲ್ ಅವರಿಗೆ ಹೇಳಿದ್ದಾರೆ ಎನ್ನುವ ಮಾಹಿತಿಯಿದೆ.
ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್-ದೇವೇಗೌಡ ಭೇಟಿ, ಮಹತ್ವದ ಮಾತುಕತೆ
ಸಿದ್ದರಾಮಯ್ಯನವರನ್ನು ಭೇಟಿಯಾದ ಆಕಾಂಕ್ಷಿಗಳು
ಗೌಡ್ರು - ವೇಣುಗೋಪಾಲ್ ದೆಹಲಿಯಲ್ಲಿ ಭೇಟಿಯಾದ ಬೆನ್ನಲ್ಲೇ ಸಚಿವ ಸಂಪುಟದ ಆಕಾಂಕ್ಷಿಗಳು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ. ಆರು ಸ್ಥಾನಗಳು ಕಾಂಗ್ರೆಸ್ ಕೋಟಾದಡಿ ಭರ್ತಿ ಮಾಡಬಹುದು. ಅದು ನಮ್ಮ ಪಕ್ಷದ ನಿರ್ಧಾರ, ದೇವೇಗೌಡ್ರು ಇದರಲ್ಲಿ ಯಾಕೆ ತಲೆಹಾಕಬೇಕು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ಡಾ. ಸುಧಾಕರ್, ತುಕಾರಾಂ ಮತ್ತು ಮಾಜಿ ಸಾರಿಗೆ ಸಚಿವ ಎಚ್ ಎಂ ರೇವಣ್ಣ, ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದರು.
ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್ಪಿಯ ಎನ್.ಮಹೇಶ್?
ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಪಾರ್ಲಿಮೆಂಟ್ ಉಪಚುನಾವಣೆ
ರಾಮನಗರ, ಜಮಖಂಡಿ ಅಸೆಂಬ್ಲಿ ಮತ್ತು ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಪಾರ್ಲಿಮೆಂಟ್ ಉಪಚುನಾವಣೆಗೆ ದಿನ ನಿಗದಿಯಾಗಿರುವುದರಿಂದ, ನವೆಂಬರ್ 3ರವರೆಗೆ ಸಂಪುಟ ವಿಸ್ತರಣೆ ಖಂಡಿತ ಸಾಧ್ಯವಿಲ್ಲ ಎನ್ನುವ ಬಿಸಿಬಿಸಿ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ. ಗೌಡರು, ವೇಣುಗೋಪಾಲ್ ಅವರಿಗೆ ನೀಡಿದ ಸಲಹೆ, ಕಾಂಗ್ರೆಸ್ಸಿಗೆ ಸರಿ ಎನಿಸಿದೆ ಎನ್ನುವ ಮಾಹಿತಿಯಿದೆ.
ಖಾತೆ ಬದಲಾಯಿಸಿ, ನನ್ನ ದಾರಿ ನನಗೆ : ಸಚಿವ ವೆಂಕಟರಮಣಪ್ಪ
ಶಾಸಕರ ಮೂಗಿಗೆ ತುಪ್ಪ ಸವರುವ ಕೆಲಸ
ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕನಸಿನ ಮಾತು. ಶಾಸಕರ ಮೂಗಿಗೆ ತುಪ್ಪ ಸವರುವ ಕೆಲಸ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿದೆ ಎಂದು ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ. ಪಿತೃಪಕ್ಷ , ನವರಾತ್ರಿ, ಉಪಚುನಾವಣೆ ಎನ್ನುವ ಕಾರಣವನ್ನು ನೀಡಿ ಸಂಪುಟ ವಿಸ್ತರಣೆ ಮತ್ತೆ ಮುಂದೂಡಲಾಗುತ್ತದೆ. ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಭಿನ್ನಮತ ಭುಗಿಲೇಳುತ್ತದೆ ಎಂಬ ಕಾರಣಕ್ಕಾಗಿಯೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಬಿಎಸ್ವೈ ದೂರಿದ್ದಾರೆ.
ಸಂಪುಟ ವಿಸ್ತಣೆ ನಾಳೆ ಬಾ..ನಾಳೆ ಬಾ ಎನ್ನುವ ರೀತಿಯಲ್ಲಿ ಮುಂದಕ್ಕೆ ಹೋಗುತ್ತಲೇ ಇದೆ
ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ಹೇಳುವ ಹಾಗೆ, ಸಂಪುಟ ವಿಸ್ತಣೆ ನಾಳೆ ಬಾ..ನಾಳೆ ಬಾ ಎನ್ನುವ ರೀತಿಯಲ್ಲಿ ಮುಂದಕ್ಕೆ ಹೋಗುತ್ತಲೇ ಇದೆ. ಆದರೆ, ಈ ಬಾರಿ ಅಂದರೆ ನವರಾತ್ರಿಯ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಭಾರೀ ಕನಸು ಕಟ್ಟಿಕೊಂಡಿದ್ದವರಿಗೆ, ಶಾಕ್ ಕಾದಿದೆ ಎನ್ನುವ ಮಾಹಿತಿಯಿದೆ. ಕಾಂಗ್ರೆಸ್ ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.