ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ ಸಚಿವರ ವಿದ್ಯಾರ್ಹತೆ ಏನು?
ಬೆಂಗಳೂರು, ಆಗಸ್ಟ್ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಿರಿ ಕಿರಿಯರ ಮಿಶ್ರಣದಂತೆ ಶಿಕ್ಷಣದಲ್ಲೂ ಅದೇ ರೀತಿಯ ಮಿಶ್ರಣವಿದೆ.
ಮುಖ್ಯಮಂತ್ರಿ ಸೇರಿದಂತೆ 18 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದಿದ್ದಾರೆ.
ಚಿತ್ರಗಳು: ಬೊಮ್ಮಾಯಿ ಸಂಪುಟದಲ್ಲಿ ಯಾವ ಜಿಲ್ಲೆಯಿಂದ ಯಾರು ಸಚಿವರು? ಪಟ್ಟಿ ಇಲ್ಲಿದೆ..
ಇವರಲ್ಲಿ ಎಂಟಿಬಿ ನಾಗರಾಜ್ ಅತಿ ಕಡಿಮೆ ಶಿಕ್ಷಣ ಹೊಂದಿದವರಾಗಿದ್ದು, ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಸ್ನಾತಕೋತ್ತರ ಶಿಕ್ಷಣ ಮುಗಿಸಿದವರಲ್ಲಿ ಕೂಡ ಒಬ್ಬರೇ ಇದ್ದು ಅದು ಮಾಧುಸ್ವಾಮಿಯಾಗಿದ್ದಾರೆ.
ಮೂವರು ಎಂಜಿನಿಯರ್ಗಳು: ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮೂವರು ಎಂಜಿನಿಯರಿಂಗ್ ಪದವೀಧರರು ಸಚಿವ ಸಂಪುಟದಲ್ಲಿದ್ದಾರೆ. ಬೊಮ್ಮಾಯಿ, ಬಿಸಿ ನಾಗೇಶ್ ಹಾಗೂ ಮುರುಗೇಶ್ ನಿರಾಣಿ ಎಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸಿದ್ದಾರೆ.
ಇನ್ನು ಅಶ್ವತ್ಥನಾರಾಯಣ ಹಾಗೂ ಸುಧಾಕರ್ ಎಂಬಿಬಿಎಸ್ ಮುಗಿಸಿದ ಇಬ್ಬರು ಸಚಿವರಾಗಿದ್ದಾರೆ. ಬಿಸಿ ಪಾಟೀಲ್, ಸುನಿಲ್ ಕುಮಾರ್, ವಿ ಸೋಮಣ್ಣ, ಶ್ರೀರಾಮುಲು ಕಲಾ ಪದವಿಯನ್ನು ಹೊಂದಿದ್ದಾರೆ. ಮಾಧುಸ್ವಾಮಿ ಎಂಎ ಎಲ್ಎಲ್ಬಿ ಮಾಡಿದ್ದಾರೆ.
ಹಾಲಪ್ಪ ಆಚಾರ್, ಆರ್ ಅಶೋಕ್ ಹಾಗೂ ಗೋಪಾಲಯ್ಯ ವಿಜ್ಞಾನ ಪದವಿ ಹೊಂದಿದ್ದಾರೆ. ಶಿವಮೊಗ್ಗದವರಾದ ಕೆಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ವಾಣಿಜ್ಯ ಪದವಿ ಪಡೆದವರಾಗಿದ್ದಾರೆ. ಇನ್ನು ನಾರಾಯಣಗೌಡ ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ ಮಾಡಿದ್ದಾರೆ.
ಪದವಿ ಶಿಕ್ಷಣ ಹೊಂದದ 12 ಸಚಿವರು: ಬೊಮ್ಮಾಯಿ ಸಂಪುಟದಲ್ಲಿನ 29 ಸಚಿವರಲ್ಲಿ 12 ಜನರು ಪದವಿ ಶಿಕ್ಷಣವನ್ನು ಪೂರೈಸಿಲ್ಲ. ಇವರಲ್ಲಿ 7 ಸಚಿವರು ಎಸ್ಎಸ್ಎಲ್ಸಿ ಮುಗಿಸಿದ್ದರೆ, ಮೂವರು ಪಿಯುಸಿ ಮುಗಿಸಿದ್ದಾರೆ. ಇನ್ನಿಬ್ಬರು ಎಸ್ಎಸ್ಎಲ್ಸಿ ಕೂಡಾ ಮುಗಿಸಿಲ್ಲ.
ಶಂಕರಪ್ಪ, ಪ್ರಭು ಚೌಹಾಣ್, ಆನಂದ್ ಸಿಂಗ್ ಇವರು ಪಿಯುಸಿ ಮುಗಿಸಿದವರಾಗಿದ್ದಾರೆ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶಿವರಾಮ್ ಹೆಬ್ಬಾರ್, ಗೋವಿಂದ ಕಾರಜೋಳ, ಸಿಸಿ ಪಾಟೀಲ್, ಮುನಿರತ್ನ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಎಸ್ಎಸ್ಎಲ್ಸಿ ಮುಗಿಸಿದ್ದಾರೆ.
ಅಂಗಾರ 9 ನೇ ತರಗತಿವರೆಗೆ ಓದಿದ್ದರೆ, ಎಂಟಿಬಿ ನಾಗರಾಜ್ ಎಂಟನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟ ರಚನೆಯಾಗಿದ್ದು ಮೊದಲಿಗೆ 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು.
ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ, ಆರ್. ಅಶೋಕ್- ಪದ್ಮನಾಭ ನಗರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ, ಉಮೇಶ್ ಕತ್ತಿ- ಹುಕ್ಕೇರಿ, ಎಸ್.ಟಿ.ಸೋಮಶೇಖರ್- ಯಶವಂತಪುರ, ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ, ಬೈರತಿ ಬಸವರಾಜ - ಕೆ ಆರ್ ಪುರಂ, ಮುರುಗೇಶ್ ನಿರಾಣಿ - ಬಿಳಿಗಿ, ಶಿವರಾಂ ಹೆಬ್ಬಾರ್- ಯಲ್ಲಾಪುರ, ಶಶಿಕಲಾ ಜೊಲ್ಲೆ- ನಿಪ್ಪಾಣಿ, ಕೆಸಿ ನಾರಾಯಣ್ ಗೌಡ - ಕೆಆರ್ ಪೇಟೆ, ಸುನೀಲ್ ಕುಮಾರ್ - ಕಾರ್ಕಳ, ಅರಗ ಜ್ಞಾನೇಂದ್ರ - ತೀರ್ಥಹಳ್ಳಿ, ಗೋವಿಂದ ಕಾರಜೋಳ-ಮುಧೋಳ.
ಮುನಿರತ್ನ- ಆರ್ ಆರ್ ನಗರ, ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ, ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್, ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ, ಹಾಲಪ್ಪ ಆಚಾರ್ - ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ, ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ, ಪ್ರಭು ಚೌವ್ಹಾಣ್ - ಔರಾದ್, ವಿ ಸೋಮಣ್ಣ - ಗೋವಿಂದರಾಜನಗರ, ಎಸ್ ಅಂಗಾರ-ಸುಳ್ಯ, ಆನಂದ್ ಸಿಂಗ್ - ಹೊಸಪೇಟೆ, ಸಿ ಸಿ ಪಾಟೀಲ್ - ನರಗುಂದ, ಬಿಸಿ ನಾಗೇಶ್ - ತಿಪಟೂರು ಮತ್ತು ಬಿ.ಶ್ರೀ ರಾಮುಲು- ಮೊಳಕಾಲ್ಮೂರು, ಬಿ.ಸಿ. ಪಾಟೀಲ್- ಹಿರೇಕೆರೂರು ಕ್ಷೇತ್ರದವರಾಗಿದ್ದು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿಪಿ ಯೋಗೇಶ್ವರ್, ಶಂಕರ್, ಶ್ರೀಮಂತ್ ಪಾಟೀಲ್ ರನ್ನು ಸಂಪುಟದಿಂದ ಕೈಬಿಡಲಾಗಿದೆ.
13 ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯವಿಲ್ಲ - ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಈ ಬಾರಿ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯವಿಲ್ಲ, ಬೆಂಗಳೂರು ನಗರಕ್ಕೆ 7 ಸಚಿವ ಭಾಗ್ಯ ಸಿಕ್ಕಿದೆ.
Recommended Video