ಒತ್ತಡಕ್ಕೆ ಮಣಿದ ಯಡಿಯೂರಪ್ಪ; ಮತ್ತೆ ಸಚಿವರ ಖಾತೆ ಮರು ಹಂಚಿಕೆ!
ಬೆಂಗಳೂರು, ಜ. 22: ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ 24 ಗಂಟೆಗಳಲ್ಲಿಯೇ ಮತ್ತೊಮ್ಮೆ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ. ನಿನ್ನೆ ಜನವರಿ 21 ರಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಖಾತೆ ಹಂಚಿಕೆ ಮಾಡುವಾಗ ಹಲವು ಸಚಿವರ ಖಾತೆಗಳನ್ನು ಮರು ಹಂಚಿಕೆಯನ್ನೂ ಮಾಡಲಾಗಿತ್ತು. ಅದಕ್ಕೆ ಹಲವು ಸಚಿವರು ನಿನ್ನೆ ನಡೆದಿದ್ದ ಸಚಿವ ಸಂಪುಟ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಡಿಸಿದ್ದರು. ಹೀಗಾಗಿ 24 ಗಂಟೆಗಳಲ್ಲಿ ಮತ್ತೊಮ್ಮೆ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
ಯಡಿಯೂರಪ್ಪ ಅವರ ಆಪ್ತ ಸಚಿವ ಜೆ.ಸಿ. ಮಾಧುಸ್ವಾಮಿ ಅವರಂತೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೆ ಹೋಗಿದ್ದರು ಎನ್ನಲಾಗಿದೆ. ಜೊತೆಗೆ ಸಚಿವರಾದ ಡಾ. ಸುಧಾಕರ್, ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ ಸೇರಿದಂತೆ ಹಲವರು ತಮ್ಮ ಅಸಮಾಧಾನವನ್ನು ಸಿಎಂ ಗಮನಕ್ಕೆ ತಂದಿದ್ದರು. ವಲಸೆ ಹಾಗೂ ಮೂಲ ಬಿಜೆಪಿ ಸಚಿವರು ಒಂದೇ ಸಲಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸಿಎಂ ಯಡಿಯೂರಪ್ಪ ಅವರು, ಒಂದೇ ದಿನದಲ್ಲಿ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ. ಯಾವ ಸಚಿವರ ಯಾವ ಖಾತೆ ಬದಲಾವಣೆ ಆಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಖಾತೆ ಬದಲಾವಣೆ ಮಾಡಿದ ಸಿಎಂ
ಸಂಪುಟ ವಿಸ್ತರಣೆ ಆಗಿ 9 ದಿನಗಳ ಬಳಿಕ ಸಿಎಂ ಯಡಿಯೂರಪ್ಪ ಅವರು ನಿನ್ನೆ (ಜ.21) ಖಾತೆ ಹಂಚಿಕೆ ಮಾಡಿದ್ದರು. ಅದರಿಂದ ಬಹಳಷ್ಟು ಗೊಂದಲಗಳು ಉಂಟಾಗಿದ್ದವು. ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸಿ ನೂತನ ಸಚಿವರಿಗೆ ವಹಿಸಲಾಗಿತ್ತು. ಆದರೆ ನೂತನ ಸಚಿವರು ಕೂಡ ತಮಗೆ ಬೇರೆ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದರು.
ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ? ಸಮಗ್ರ ಪಟ್ಟಿ
ಪ್ರಮುಖವಾಗಿ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ಜೆ.ಸಿ. ಮಾಧುಸ್ವಾಮಿ ಅವರುಗಳು ತಮ್ಮ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇವತ್ತು (ಜ.22) ಮತ್ತೆ ಖಾತೆಗಳನ್ನು ಬದಲಾಯಿಸಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ಒಟ್ಟು 6 ಸಚಿವರ ಖಾತೆ ಬದಲಾಯಿಸಿದ್ದಾರೆ.
ಯಾರಿಗೆ ಯಾವ ಖಾತೆ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 6 ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎಂಬುದು ಇಲ್ಲಿದೆ.
- ಅರವಿಂದ್ ಲಿಂಬಾವಳಿ - ಅರಣ್ಯ, ಕನ್ನಡ ಮತ್ತು ಸಂಸ್ಕೃತಿ
- ಕೆ.ಸಿ. ನಾರಾಯಣ ಗೌಡ - ಯುವಜನ ಸೇವಾ ಕ್ರೀಡಾ ಮತ್ತು ಯೋಜನೆ ಸಾಂಖ್ಯಿಕ ಇಲಾಖೆ
- ಆರ್ ಶಂಕರ್ - ತೋಟಗಾರಿಕೆ ರೇಷ್ಮೆ
- ಜೆ.ಸಿ. ಮಾಧುಸ್ವಾಮಿ - ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ
- ಕೆ. ಗೋಪಾಲಯ್ಯ - ಅಬಕಾರಿ
- ಎಂಟಿಬಿ ನಾಗರಾಜ್ - ಪೌರಾಡಳಿತ, ಸಕ್ಕರೆ
ಬಯಸಿದ ಖಾತೆ ಸಿಕ್ಕಿತಾ?
ತಮ್ಮಲ್ಲಿನ ಪ್ರಮುಖ ಖಾತೆಗಳನ್ನು ಬದಲಾಯಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಯನ್ನು ಯಡಿಯೂರಪ್ಪ ಅವರು ಹೊಸದಾಗಿ ಹಂಚಿಕೆ ಮಾಡಿದ್ದಾರೆ. ಜೆಸಿ ಮಾಧುಸ್ವಾಮಿ ಅವರು ಸಣ್ಣ ನೀರಾವರಿ ಇಲಾಖೆಯನ್ನು ತಮ್ಮಿಂದ ತೆಗೆದುಕೊಂಡಿದ್ದಕ್ಕೆ ಅಸಮಾಧಾನಗೊಂಡು ಸಂಪುಟ ಸಭೆಗೆ ಬಂದಿರಲಿಲ್ಲ.
ಹಾಗೆಯೆ ಸಚಿವ ಅರವಿಂದ್ ಲಿಂಬಾವಳಿ ಅವರೂ ಕೂಡ ಅಸಮಾಧಾನಗೊಂಡಿದ್ದರು. ಅರಣ್ಯ ಇಲಾಖೆ ಜೊತೆಗೆ ಪರಿಸರ ಖಾತೆಯನ್ನು ಸಚಿವ ಲಿಂಬಾವಳಿ ಅವರು ನಿರೀಕ್ಷೆ ಮಾಡಿದ್ದರು. ಆದರೆ ಅವರಿಗೆ ಹೊಸದಾಗಿ ಕನ್ನಡ ಸಂಸ್ಕೃತಿ ಇಲಾಖೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ. ವಸತಿ ಖಾತೆ ನಿರೀಕ್ಷೆ ಮಾಡಿದ್ದ ಎಂಟಿಬಿ ನಾಗರಾಜ್ ಅವರಿಗೆ ವಸತಿ ಖಾತೆ ಬದಲು ಪೌರಾಡಳಿತ ಖಾತೆಯನ್ನು ಸಿಎಂ ನೀಡಿದ್ದಾರೆ.
ಸಚಿವ ಆರ್ ಶಂಕರ್ ಅವರ ಮನವೊಲಿಸಿ ಖಾತೆ ಬದಲಾವಣೆ ಮಾಡಿರುವ ಸಿಎಂ ಅವರಿಗೆ ತೋಟಗಾರಿಕೆ ಖಾತೆ ನೀಡಿದ್ದಾರೆ. ಒತೆಗೆ ಸಕ್ಕರೆ ಖಾತೆ ನಿರೀಕ್ಷೆ ಮಾಡಿದ್ದ ನಾರಾಯಣಗೌಡ ಅವರಿಗೆ ನಿರಾಸೆಯಾಗಿದೆ. ನಾರಾಯಣಗೌಡ ಅವರಿಗೆ ಯೋಜನೆ ಸಾಂಖ್ಯಿಕ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
Recommended Video
ಡಾ. ಸುಧಾಕರ್ ನಿರ್ಲಕ್ಷಿಸಿದ ಸಿಎಂ
ತಮ್ಮಲ್ಲಿನ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯನ್ನು ಹಿಂದಕ್ಕೆ ಪಡೆದಿದ್ದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಅಸಮಾಧಾನಗೊಂಡಿದ್ದರು. ನಿನ್ನೆ ಅವರೂ ಕೂಡ ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ. ಆದರೆ ಸಿಎಂ ಯಡಿಯೂರಪ್ಪ ಅವರು ಸಚಿವ ಡಾ. ಸುಧಾಕರ್ ಅವರ ಬೇಡಿಕೆಗೆ ಸ್ಪಂಧಿಸಿಲ್ಲ.