ಸಂಪುಟ ವಿಸ್ತರಣೆ: ಮೌನಕ್ಕೆ ಶರಣಾದ ಯಡಿಯೂರಪ್ಪ, ಒಂದು ಹೆಜ್ಜೆ ಹಿಂದಿಟ್ಟಿದ್ದು ಈ ಕಾರಣಕ್ಕೆ
ಸಂಪುಟ ವಿಸ್ತರಣೆಗೆ ಎಷ್ಟೇ ಕಸರತ್ತು ನಡೆಸಿದರೂ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಮನವಿಗೆ ಸ್ಪಂದಿಸುತ್ತಿಲ್ಲ. ಭರವಸೆ ನೀಡಿ ಹತ್ತು ದಿನದ ಮೇಲಾದರೂ, ಸಂಪುಟ ವಿಸ್ತರಣೆಯ ವಿಚಾರದಲ್ಲಿ ವರಿಷ್ಠರು ಅಂತಿಮ ತೀರ್ಮಾನಕ್ಕೆ ಬರುತ್ತಿಲ್ಲ.
ಆರಂಭದಲ್ಲಿ ಅಗ್ರೆಸ್ಸೀವ್ ಆಗಿದ್ದ ಯಡಿಯೂರಪ್ಪ ಬರಬರುತ್ತಾ ಈ ವಿಚಾರದಲ್ಲಿ ಹೆಚ್ಚಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದಾಗ ಆಗಲಿ ಎನ್ನುವ ಬಾಡಿ ಲಾಂಗ್ವೇಜ್ ಅವರಲ್ಲಿ ಕಾಣಿಸುತ್ತಿದೆ. ದೈನಂದಿನ ಆಡಳಿತಾತ್ಮಕ ಕೆಲಸದಲ್ಲಿ ಬ್ಯೂಸಿಯಾಗಿರುವ ಸಿಎಂ, ಈ ವಿಚಾರದಲ್ಲಿ ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ.
ಮೇಲಿಂದ ಮೇಲೆ ದೆಹಲಿಗೆ ಹೋಗಬೇಕಾಗುತ್ತದೆ: ರಮೇಶ್ ಜಾರಕಿಹೊಳಿ
ಮೂಲ ಮತ್ತು ವಲಸೆ ಬಿಜೆಪಿಗರು ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ರಾದ್ದಾಂತ ಎಬ್ಬಿಸುವ ಸಾಧ್ಯತೆ ಕಾಣಿಸುತ್ತಿರುವ ನಡುವೆ, ಸಚಿವ ಸ್ಥಾನದ ಆಕಾಂಕ್ಷಿಗಳ ಸದ್ದು ದೆಹಲಿ ವರಿಷ್ಠರ ಅಂಗಣದಲ್ಲಿ ಸದ್ದು ಮಾಡಲಾರಂಭಿಸಿದೆ.
ಬಿಜೆಪಿಯ ಎಲ್ಲಾ ಶಾಸಕರ ಒತ್ತಾಸೆಯನ್ನು ಬಹಿರಂಗ ಪಡಿಸಿದ ಎಂ.ಪಿ.ರೇಣುಕಾಚಾರ್ಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೆಹಲಿಗೆ ಹೋಗುವುದಾಗಿ ಹೇಳಿರುವುದು ಮತ್ತು ಸಿ.ಪಿ.ಯೋಗೇಶ್ವರ್ ವಿಚಾರದಲ್ಲಿ ಪಕ್ಷದಲ್ಲಿ ಬಿರುಕು ಕಾಣಿಸಿರುವುದರಿಂದ, ಸಂಪುಟ ವಿಸ್ತರಣೆಯ ವಿಚಾರದಲ್ಲಿ ನನ್ನದೇನೂ ಇಲ್ಲ ಎನ್ನುವ ನಿಲುವಿಗೆ ಸಿಎಂ ಬಂದಂತೆ ಕಾಣುತ್ತಿದೆ.
ವರಿಷ್ಠರನ್ನು ಭೇಟಿಯಾಗಿ ಬಂದಿದ್ದು
ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದು, ಇದಾದ ನಂತರ ಬಿ.ಎಲ್.ಸಂತೋಷ್ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಬೆನ್ನಲ್ಲೇ ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರನ್ನು ಸಿಎಂ ಘೋಷಿಸಿದ್ದರು. ವರಿಷ್ಠರಿಗೆ ಸಂದೇಶ ಕಳುಹಿಸುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿತ್ತು ಎಂದೇ ಹೇಳಲಾಗಿತ್ತು.
ವರಿಷ್ಠರೂ ಬಿಎಸ್ವೈ ವಿರುದ್ದ ಬೇಸರಗೊಂಡಿದ್ದರು ಎನ್ನುವ ಮಾತು
ಆದರೆ, ಸಂಘ ಪರಿವಾರದ ಮತ್ತು ಪಕ್ಷ ಸೂಚಿಸಿದ್ದ ಹಲವು ಮುಖಂಡರ ಹೆಸರನ್ನು ಬಿಎಸ್ವೈ ಪರಿಗಣಿಸಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಈ ವಿಚಾರವನ್ನು ಇಟ್ಟುಕೊಂಡು ದೆಹಲಿ ದೊರೆಗಳಿಗೆ ಯಡಿಯೂರಪ್ಪನವರ ವಿರುದ್ದ ದೂರು ಹೋಗಿತ್ತು. ವರಿಷ್ಠರೂ ಬಿಎಸ್ವೈ ವಿರುದ್ದ ಬೇಸರಗೊಂಡಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು.
ಕೆಲವು ಆಕಾಂಕ್ಷಿಗಳಿಗೆ ಸಂಪುಟ ವಿಸ್ತರಣೆ ವಿಳಂಬವಾಗಬಹುದು ಎನ್ನುವ ಸಂದೇಶ
ಸಚಿವ ಸಂಪುಟ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ವರಿಷ್ಠರಿಗೆ ಎಂದು ಕೈತೊಳೆದು ಸುಮ್ಮನಾದಂತಿರುವ ಯಡಿಯೂರಪ್ಪ ತಾಳ್ಮೆಯಿಂದ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ ಯಡಿಯೂರಪ್ಪನವರು ಒಂದು ಹೆಜ್ಜೆ ಹಿಂದೆ ಇಟ್ಟಂತೆ ಭಾಸವಾಗುತ್ತಿದ್ದು, ಕೆಲವು ಆಕಾಂಕ್ಷಿಗಳಿಗೆ ಸಂಪುಟ ವಿಸ್ತರಣೆ ವಿಳಂಬವಾಗಬಹುದು ಎಂದು ಮೌಕಿಕವಾಗಿ ಹೇಳಿದ್ದಾರೆ ಎನ್ನುವ ಸುದ್ದಿಯಿದೆ.
Recommended Video
ಸಂಪುಟ ವಿಸ್ತರಣೆ: ಮೌನಕ್ಕೆ ಶರಣಾದ ಯಡಿಯೂರಪ್ಪ ಹಿಂದಿನ ಮರ್ಮ
ಸಂಪುಟ ವಿಸ್ತರಣೆ ಇನ್ನೆರಡು ದಿನದಲ್ಲಾಗಲಿದೆ ಎಂದು ಈಗಾಗಲೇ ಬಿಎಸ್ವೈ ಕನಿಷ್ಠ ಮೂರುಬಾರಿ ಹೇಳಿದ್ದಾಗಿದೆ. ರಾಜ್ಯ ರಾಜಕಾರಣದ ವಿದ್ಯಮಾನಗಳು ವರಿಷ್ಠರ ಅಂಗಣದಲ್ಲಿ ಸದ್ದು ಮಾಡುತ್ತಿರುವುದು, ಆಕ್ರಮಣಕಾರಿ ನಿಲುವು ಎಲ್ಲಾ ಸಂದರ್ಭದಲ್ಲೂ ಸಹಾಯಕ್ಕೆ ಬರುವುದಿಲ್ಲ ಎನ್ನುವುದನ್ನು ಅರಿತಿರುವ ಬಿಎಸ್ವೈ ಸದ್ಯ ಸಹನೆ, ತಾಳ್ಮೆಯಿಂದ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಓಡಾಡುತ್ತಿವೆ.