ಯಾರಾಗಲಿದ್ದಾರೆ ಕರ್ನಾಟಕದ ಮುಂದಿನ ಗೃಹ ಸಚಿವ?
ಬೆಂಗಳೂರು, ಮೇ 22: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಯಾರಾಗಲಿದ್ದಾರೆ? ಎಂಬ ಕುತೂಹಲದ ಜತೆಗೆ ಗೃಹಖಾತೆಗೆ ಯಾರಿಗೆ ಸಿಗಲಿದೆ ಎಂಬ ಕುತೂಹಲವೂ ಮೂಡಿದೆ. ಗೃಹ, ಕಂದಾಯ, ಅಬಕಾರಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಮುಂತಾದ ಪ್ರಮುಖ ಖಾತೆಗಳು ಕಾಂಗ್ರೆಸ್ ನಾಯಕರ ಪಾಲಾಗಲಿದ್ದು, ಇದಕ್ಕಾಗಿ ಲಾಬಿ ಆರಂಭವಾಗಿದೆ.
ಡಿಸಿಎಂ ಸ್ಥಾನಕ್ಕೆ ಜಿ ಪರಮೇಶ್ವರ, ಎಂಬಿ ಪಾಟೀಲ, ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬಂದಿದೆ. ಇದೇ ರೀತಿ ಗೃಹಖಾತೆಗೆ ರಾಮಲಿಂಗಾರೆಡ್ಡಿ, ಪರಮೇಶ್ವರ್ ಹಾಗೂ ಡಿಕೆ ಶಿವಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಈ ಪಟ್ಟಿಗೆ ಕೆಜೆ ಜಾರ್ಜ್ ಹೆಸರು ಕೇಳಿ ಬಂದರೂ, ಪ್ರತಿರೋಧದ ಹಿನ್ನೆಲೆಯಲ್ಲಿ ಹೆಸರು ಕೈಬಿಡಲಾಗಿದೆ. ಈ ಮೂವರ ಪೈಕಿ ಒಬ್ಬರು ಮುಂದಿನ ಗೃಹ ಸಚಿವರಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರಿಗೆ ಬಹುತೇಕ ಡಿಸಿಎಂ ಹುದ್ದೆ ಲಭ್ಯವಾಗುವ ಸಾಧ್ಯತೆಯಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆ ಶಿವಕುಮಾರ್ ಅವರನ್ನು ನೇಮಿಸಿದರೆ, ಪರಮೇಶ್ವರ ಅವರಿಗೆ ಗೃಹ ಖಾತೆ ಒಲಿಯಲಿದೆ ಎಂಬ ಮಾತು ಕೇಳಿ ಬಂದಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಖಾತೆ ಹೊಂದಿದ್ದ ರಾಮಲಿಂಗಾರೆಡ್ಡಿ ಅವರು ಈಗನ ಸಮ್ಮಿಶ್ರ ಸರ್ಕಾರದಲ್ಲೂ ಅದೇ ಖಾತೆ ಬಯಸಿದ್ದಾರೆ. ಆದರೆ, ಈ ಕುರಿತಂತೆ ಯಾವುದೇ ಲಾಬಿ ನಡೆಸಿಲ್ಲ.
ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ ಡಿಕೆ ಶಿವಕುಮಾರ್ ಅವರು ಡಿಸಿಎಂ ಹಾಗೂ ಗೃಹಖಾತೆ ಎರಡರ ಮೇಲೂ ಕಣ್ಣಿಟ್ಟಿದ್ದಾರೆ. ಆದರೆ, ಶಾಸಕರನ್ನು ಹಿಡಿದಿಡುವ ಡಿಕೆಶಿ ಅವರಿಗೆ ಅವರ ಸಾಹಸವೇ ಮುಳುವಾಗಬಹುದು.
ಪಕ್ಷ ಸಂಘಟನೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಅವರ ಪ್ರವೃತ್ತಿಯನ್ನು ಮನಗಂಡು ಅವರನ್ನು ಸಚಿವ ಸ್ಥಾನದ ಬದಲು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿಸುವ ಎಲ್ಲಾ ಸಾಧ್ಯತೆಗಳು ಇವೆ.
ಮುಂದಿನ ಲೋಕಸಭಾ ಚುನಾವಣೆ 2018 ಮೇಲೆ ಗಮನವಿರಿಸಿರುವ ಕಾಂಗ್ರೆಸ್, ಸಚಿವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದೆ.