ಯಾರು ಯಾರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?
ಬೆಂಗಳೂರು, ಜೂನ್ 07: ಗೊಂದಲದ ನಡುವೆ ಆರಂಭವಾದ ಮೈತ್ರಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯೂ ಗೊಂದಲದಲ್ಲೇ ಮುಗಿದಿದೆ. ಬುಧವಾರದಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.
ರಾಜ್ಯಪಾಲ ವಜೂಬಾಯಿ ವಾಲ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಂಗ್ರೆಸ್ಸಿನಿಂದ 15, ಕಾಂಗ್ರೆಸ್ ಬೆಂಬಲಿಸಿದ ಕೆಪಿಜೆಪಿಯ 1 ಮತ್ತು ಜೆಡಿಎಸ್ನ 08, ಜೆಡಿಎಸ್ ಬೆಂಬಲಿತ ಬಿಎಸ್ಪಿಯ ಒಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್-ಮೈತ್ರಿ ಸರ್ಕಾರ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ
ಈ ಪ್ರಮಾಣ ವಚನ ಸ್ವೀಕರ ಸಂದರ್ಭದಲ್ಲಿ ಪ್ರಮಾಣ ವಚನ, ಪ್ರತಿಜ್ಞಾ ವಿಧಿ, ಗೌಪ್ಯತೆಯ ಪತ್ರ ನೂತನ ಸಚಿವರು ಸಹಿ ಮಾಡಬೇಕಾಗುತ್ತದೆ. ಅಲ್ಲದೆ, ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು, ನಿರಾಕರಿಸಿದರೆ, ಲೋಪ ಮಾಡಿದರೆ ಪ್ರಶ್ನಿಸಬಹುದಾಗಿದೆ. ಸಹಜವಾಗಿ ಪ್ರಮಾಣ ವಚನ ಸ್ವೀಕರಿಸುವವರು ತಮ್ಮ ಇಷ್ಟದ, ಮನೆ, ಊರು ದೇವರ ಹೆಸರು ಅಥವಾ ಕಾಮನ್ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ನಿನ್ನೆ ನಡೆದ ಸಮಾರಂಭ ಕನ್ಯಾ ಲಗ್ನ 2 ಗಂಟೆ 12 ನಿಮಿಷಕ್ಕೆ ನಡೆಯಲಿ ಎಂದು ಮನವಿ ಮಾಡಿಕೊಂಡಿದ್ದ ಎಚ್ ಡಿ ರೇವಣ್ಣ ಅವರು ಪ್ರಮಾಣ ವಚನ ಪದ್ಧತಿ ಬದಲಾವಣೆಗೂ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ನಾಲ್ಕೈದು ಮಂದಿ ಸಾಲಾಗಿ ನಿಂತು, ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಈ ಬಾರಿ ಪ್ರತ್ಯೇಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ
2 ಗಂಟೆ 21ನಿಮಿಷಕ್ಕೆ ಮೊದಲಿಗೆ ವೇದಿಕೆ ಏರಿದ ಎಚ್ ಡಿ ರೇವಣ್ಣ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಸಹಿ ಹಾಕುವ ಜಾಗಕ್ಕೆ ಬಂದು ಕುರ್ಚಿ ಮೇಜನ್ನು ಉತ್ತರ ದಿಕ್ಕಿಗೆ ಕೊಂಚ ತಿರುಗಿಸಿ, ಕುಳಿತುಕೊಂಡು ಸಹಿ ಹಾಕಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಇನ್ನು ಜಮೀಹ್ ಅಹ್ಮದ್ ಖಾನ್ ಅವರು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಪುಟ್ಟರಂಗಶೆಟ್ಟಿ ಅವರು ನಿಂತುಕೊಂಡೇ ಪತ್ರಗಳಿಗೆ ಸಹಿ ಹಾಕಿದ್ದು ವಿಶೇಷ.
ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳ ಜಿಲ್ಲಾವಾರು ಪಟ್ಟಿ
ಮಿಕ್ಕಂತೆ ಯಾರು ಯಾರು ಯಾರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?
- ಎಚ್ ಡಿ ರೇವಣ್ಣ (ಜೆಡಿಎಸ್) : ದೇವರು
- ಬಂಡೆಪ್ಪ ಕಾಶೆಂಪುರ (ಜೆಡಿಎಸ್): ದೇವರು
- ಜಿ.ಟಿ. ದೇವೇಗೌಡ (ಜೆಡಿಎಸ್): ದೇವರು ಮತ್ತು ತಾಯಿ ಚಾಮುಂಡೇಶ್ವರಿ
- ಡಿ.ಸಿ. ತಮ್ಮಣ್ಣ (ಜೆಡಿಎಸ್): ದೇವರು
- ಸಾ ರ ಮಹೇಶ್ (ಜೆಡಿಎಸ್): ದೇವರು
- ಎಸ್ ಆರ್ ಶ್ರೀನಿವಾಸ್ (ಜೆಡಿಎಸ್): ದೇವರು
- ವೆಂಕಟರಾವ್ ನಾಡಗೌಡ (ಜೆಡಿಎಸ್): ದೇವರು
- ಸಿ.ಎಸ್. ಪುಟ್ಟರಾಜು (ಜೆಡಿಎಸ್): ತಾಯಿ ಜಗನ್ಮಾತೆ ತ್ರಿಪುರ ಸುಂದರಿ
- ಎನ್ ಮಹೇಶ್ (ಬಿಎಸ್ಪಿ): ಬುದ್ಧ, ಬಸವ, ಅಂಬೇಡ್ಕರ್
- ಆರ್ ವಿ ದೇಶಪಾಂಡೆ (ಕಾಂಗ್ರೆಸ್): ದೇವರು
- ಡಿ.ಕೆ. ಶಿವಕುಮಾರ್ (ಕಾಂಗ್ರೆಸ್): ಅಜ್ಜಯ್ಯ ಮತ್ತು ದೇವರು
- ಕೆ.ಜೆ. ಜಾರ್ಜ್ (ಕಾಂಗ್ರೆಸ್): ದೇವರು
- ಕೃಷ್ಣ ಭೈರೇಗೌಡ (ಕಾಂಗ್ರೆಸ್): ಯಾವ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ
- ಎಂ.ಸಿ. ಮನಗೂಳಿ (ಕಾಂಗ್ರೆಸ್): ಮನೆ ದೇವರು
- ಎನ್. ಎಚ್. ಶಿವಶಂಕರ್ ರೆಡ್ಡಿ (ಕಾಂಗ್ರೆಸ್): ದೇವರು
- ರಮೇಶ್ ಜಾರಕಿಹೊಳಿ (ಕಾಂಗ್ರೆಸ್): ಲಕ್ಷ್ಮಿದೇವಿ
- ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್): ದೇವರು
- ಯು ಟಿ ಖಾದರ್ (ಕಾಂಗ್ರೆಸ್): ದೇವರು
- ಜಮೀರ್ ಅಹ್ಮದ್ ಖಾನ್ (ಕಾಂಗ್ರೆಸ್): ತಾಯಿ ಮತ್ತು ಅಲ್ಲಾ
- ಶಿವಾನಂದ ಪಾಟೀಲ್ (ಕಾಂಗ್ರೆಸ್): ಬಸವಣ್ಣ
- ವೆಂಕಟರಮಣಪ್ಪ (ಕಾಂಗ್ರೆಸ್) : ದೇವರು
- ರಾಜಶೇಖರ್ ಬಸವರಾಜ್ ಪಾಟೀಲ್ (ಕಾಂಗ್ರೆಸ್): ವೀರಭದ್ರೇಶ್ವರ
- ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್): ದೇವರು
- ಶಾಸಕ ಆರ್.ಶಂಕರ್ (ಕೆಪಿಜೆಪಿ): ಮೈಲಾರಲಿಂಗೇಶ್ವರ
- ಎಂಎಲ್ಸಿ ಡಾ. ಜಯಮಾಲಾ (ಕಾಂಗ್ರೆಸ್): ದೇವರು