143 ಕಾನೂನುಗಳ ರದ್ದಿಗೆ ಕರ್ನಾಟಕ ಸರಕಾರ ನಿರ್ಧಾರ
ಬೆಂಗಳೂರು, ಸೆಪ್ಟೆಂಬರ್ 4: ಬಳಕೆಯೇ ಆಗದ 143 ಕಾನೂನುಗಳನ್ನು ರದ್ದುಗೊಳಿಸಲು ಕರ್ನಾಟಕ ಸರಕಾರ ತೀರ್ಮಾನಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಮುಖ್ಯ ನಿರ್ಧಾರಗಳು
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, "ಇಂದು ನಡೆದ ಸಂಪುಟ ಸಭೆಯಲ್ಲಿ, ಕಳೆದ ಹಲವಾರು ವರ್ಷಗಳಿಂದ ಬಳಕೆಯಾಗದ, ಜಾರಿ ಮಾಡಲು ಸಾಧ್ಯವೇ ಇಲ್ಲದ, ರಾಜ್ಯದ 135 ಕಾನೂನುಗಳು ಹಾಗೂ ಕೇಂದ್ರ ಸರ್ಕಾರದ 8 ಕಾನೂನುಗಳನ್ನು ರದ್ದುಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ," ಎಂದು ತಿಳಿಸಿದರು.
ಇದರ ಜತೆಗೆ ಇನ್ನೂ ಹಲವು ತೀರ್ಮಾನಗಳನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅವುಗಳು ಈ ಕೆಳಗಿನಂತಿವೆ.
ತೋಟಗಾರಿಕೆ ಇಲಾಖೆಗೂ 'ಕೃಷಿ ಭಾಗ್ಯ'
ಈ ಹಿಂದೆ ಬಜೆಟ್ ನಲ್ಲಿ ಮಂಡಿಸಿದಂತೆ ತೋಟಗಾರಿಕಾ ಇಲಾಖೆಯಲ್ಲೂ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯ ಮಾದರಿಯಲ್ಲಿಯೇ ಈ ಯೋಜನೆಯೂ ಇರಲಿದೆ.
ಇದರಂತೆ ತೋಟಗಾರಿಕಾ ಇಲಾಖೆಯು ರಾಜ್ಯದ 25 ಜಿಲ್ಲೆಗಳ 128 ತಾಲ್ಲೂಕುಗಳಲ್ಲಿ ತೋಟಗಾರಿಕಾ ಬೆಳೆಗಳಾದ ಹಣ್ಣು ಮತ್ತು ತರಕಾರಿಗಳನ್ನು ಪಾಲಿ ಹೌಸ್ಗಳಲ್ಲಿ ಬೆಳೆಸಲು ಸಹಾಯಾಧನ ನೀಡಲಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಪಾಲಿ ಹೌಸ್ ನಿರ್ಮಿಸಿದರೆ ಶೇಕಡಾ 90 ರಷ್ಟು ಧನ ಸಹಾಯ ಹಾಗೂ ಇತರೆ ವರ್ಗದವರಿಗೆ ಶೇಕಡಾ 50 ರಷ್ಟು ಧನ ಸಹಾಯ ನೀಡುವ ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ ಅನುದಾನವನ್ನು ಮೀಸಲಿರಿಸಲು ಸಂಪುಟ ನಿರ್ಧರಿಸಿದೆ.
ನಮ್ಮ ಮೆಟ್ರೋ ಗೆ 6293 ಕೋಟಿ ರೂ.
ನಮ್ಮ ಮೆಟ್ರೋ ಎರಡನೇ ಹಂತ ಯೋಜನೆಯ ಭೂ ಸ್ವಾಧೀನಕ್ಕೆ ಹೆಚ್ಚುವರಿಯಾಗಿ 2187.46 ಕೋಟಿ ಸೇರಿದಂತೆ ಒಟ್ಟಾರೆ 6293 ಕೋಟಿ ರೂ. ಹಣ ಮಂಜೂರಾತಿ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರಿನಲ್ಲಿ ಕಾಮಗಾರಿಗೆ 300 ಕೋಟಿ
ಬಜೆಟ್ ನಲ್ಲಿ ಪ್ರಕಟಿಸಿದಂತೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಯೋಜನೆಯಡಿ ನೀರುಗಾಲುವೆ ಕಾಮಗಾರಿಗಳು ಹಾಗೂ ತುರ್ತು ಕಾಮಗಾರಿಗಳಿಗೆ ಸಂಪುಟವು ಅನುಮೋದನೆ ನೀಡಿದೆ.
ಈ ಯೋಜನೆಯಡಿ ಬೆಂಗಳೂರು ಮಹಾ ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿರುವ 842 ಕಿ.ಮೀ ಪ್ರದೇಶದಲ್ಲಿ ಕಾಮಗಾರಿಗಳ ಅನುಷ್ಠಾನಕ್ಕೆ 300 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕೃಷಿ ಯಂತ್ರ ಧಾರೆಗೆ ವಿಶೇಷ ಸವಲತ್ತು
ರಾಜ್ಯದ 743 ಹೋಬಳಿಗಳ ಪೈಕಿ ಈಗಾಗಲೇ ಸುಮಾರು 500 ಹೋಬಳಿಗಳಲ್ಲಿ ಕೃಷಿ ಯಂತ್ರ ಧಾರೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಉಳಿದ ಸುಮಾರು 250 ಹೋಬಳಿಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗುವ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವ 'ಕೃಷಿ ಯಂತ್ರ ಧಾರೆ' ಯೋಜನೆಗೆ ವಿಶೇಷ ಸವಲತ್ತುಗಳನ್ನು ನೀಡಲು ಸಂಪುಟ ಸಮ್ಮತಿಸಿದೆ.
10 ಲಕ್ಷ ರೂ. ಮೇಲಿನ ವಾರ್ಷಿಕ ವಹಿವಾಟು ನಡೆಸುವ ಘಟಕಕ್ಕೆ ಸರ್ಕಾರದಿಂದ 5 ಲಕ್ಷ ರೂ. ಸಹಾಯ ಧನ ಹಾಗೂ ಹೊಸದಾಗಿ ಯಂತ್ರೋಪಕರಗಳನ್ನು ಖರೀಸಲೂ ಅಗತ್ಯ ಆರ್ಥಿಕ ನೆರವು, ಹಾಗೂ 10 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ವಾರ್ಷಿಕ ವಹಿವಾಟು ನಡೆಸಿದ ಘಟಕಕ್ಕೆ 2.5 ಲಕ್ಷ ರೂ. ಸಹಾಯಧನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಒಟ್ಟು 122 ಕೋಟಿ ರೂ. ಎತ್ತಿಡಲಾಗಿದೆ.
ಕರಾವಳಿಗೆ ಪ್ರತ್ಯೇಕ ಮರಳು ನೀತಿ
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಈ ಪ್ರದೇಶದಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಜತೆಗೆ ಕರಾವಳಿ ನಿಯಂತ್ರಣೇತರ ವಲಯದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರವನ್ನು ತಹಸೀಲ್ದಾರ್ ಅವರಿಗೆ ನೀಡಲು ಸಂಪುಟ ನಿರ್ಧರಿಸಿದೆ.
ಸುಗ್ರೀವಾಜ್ಞೆಗೆ ಅಂಕಿತದ ನಿರೀಕ್ಷೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಕುರಿತ ರಾಜ್ಯ ಸಚಿವ ಸಂಪುಟದ ಶಿಫಾರಸ್ಸಿನ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯಪಾಲರು ಸುಗ್ರೀವಾಜ್ಞೆಗೆ ಶೀಘ್ರದಲ್ಲೇ ಅಂಕಿತ ಹಾಕುವ ವಿಶ್ವಾಸವಿದೆ ಎಂದು ಜಯಚಂದ್ರ ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ಸುಪ್ರಿಂ ಕೋರ್ಟ್ ನಲ್ಲಿ ಕಾಲಾವಧಿ ವಿಸ್ತರಣೆ ಹಾಗೂ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು ಜಯಚಂದ್ರ ಹೇಳಿದರು.