ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಢ್ಯ ನಿಷೇಧ: ಮಡೆಸ್ನಾನಕ್ಕೆ ನಿಷೇಧ, ಜ್ಯೋತಿಷ್ಯ-ವಾಸ್ತುಗಿಲ್ಲ ಅಡ್ಡಿ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಕರ್ನಾಟಕ ಅಮಾನವೀಯ, ದುಷ್ಟ, ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನ ವಿಧೇಯಕ-2017'ಕ್ಕೆ ಸರ್ವಾನುಮತದ ಅಂಗೀಕಾರ ನೀಡಲಾಗಿದೆ.

ಪ್ರಮುಖವಾಗಿ ಮೌಢ್ಯ ನಿಷೇಧ ಕಾಯ್ದೆಯಲ್ಲಿ ಮಡೆಸ್ನಾನ, ಬೆತ್ತಲೆ ಸೇವೆಗೆ ನಿಷೇಧ ಹೇರಲಾಗಿದೆ. ಆದರೆ ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದ ಜ್ಯೋತಿಷ್ಯ ಮತ್ತು ವಾಸ್ತುವಿಗೆ ಯಾವುದೇ ಅಭ್ಯಂತರವಿಲ್ಲ.

ಮುಂದಿನ ನವೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ನಿರ್ಧರಿಸಿದೆ.

ಮೌಢ್ಯ ನಿಷೇಧ ಕಾಯ್ದೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ,

 ಮಡೆಸ್ನಾನಕ್ಕೆ ನಿಷೇಧ

ಮಡೆಸ್ನಾನಕ್ಕೆ ನಿಷೇಧ

ಬೇರೆಯವರು ಊಟ ಮಾಡಿದ ಎಂಜಲೆಲೆಯ ಮೇಲೆ ಉರುಳುವ ಅಮಾನವೀಯ ಸಂಪ್ರದಾಯ ಮಡೆಸ್ನಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವ ಅನಿಷ್ಠ ಪದ್ಧತಿ ಬೆತ್ತಲೆ ಸೇವೆಗೆ ಅವಕಾಶ ನಿರಾಕರಿಸಲಾಗಿದೆ.

ದೆವ್ವ ಬಿಡಿಸುವುದು ಎಂದು ಹೇಳಿ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಲ್ಲಿ ಅಥವಾ ಕಬ್ಬಿಣದ ಸರಳುಗಳಲ್ಲಿ ಕಟ್ಟಿ ಹಾಕಿ ಬೆತ್ತದಲ್ಲಿ ಅಥವಾ ಛಾಟಿಯಲ್ಲಿ ಹೊಡೆಯುವುದು, ಆ ವ್ಯಕ್ತಿಗೆ ಪಾದರಕ್ಷೆಯನ್ನು ಮುಳುಗಿಸಿದ ನೀರನ್ನು ಕುಡಿಸುವುದು, ಮೇಲ್ಚಾವಣಿಗೆ ನೇತು ಹಾಕಿ ಮೆಣಸಿನಕಾಯಿ ಹೊಗೆ ಹಾಕುವುದು, ಕಬ್ಬಿಣದ ಸಲಾಖೆಯನ್ನು ಕಾಯಿಸಿ ದೇಹದ ಅಂಗಾಗದ ಮೇಲೆ ಬರೆ ಎಳೆಯುವುದನ್ನು ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗಿದೆ.

ಬಲವಂತವಾಗಿ ಹಾಗೂ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರಚೋದಿಸುವುದು ಮತ್ತು ಪ್ರೇರೇಪಿಸುವುದು, ಒತ್ತಾಯಪೂರ್ವಕವಾಗಿ ಮಲವನ್ನು ತಿನ್ನಿಸುವುದು ಅಥವಾ ಮೂತ್ರವನ್ನು ಕುಡಿಸುವತಹ ಅನಿಷ್ಠ ಹಾಗೂ ಕ್ರೂರ ಪದ್ಧತಿಗಳು ಈ ಕಾಯ್ದೆಯಡಿ ಅಪರಾಧಗಳಾಗುತ್ತವೆ.

 ಋತುಮತಿಯಾದ ಯುವತಿಯರನ್ನು ಪ್ರತ್ಯೇಕಿಸುವಂತಿಲ್ಲ

ಋತುಮತಿಯಾದ ಯುವತಿಯರನ್ನು ಪ್ರತ್ಯೇಕಿಸುವಂತಿಲ್ಲ

ಋತುಮತಿಯಾದ ಯುವತಿಯನ್ನು ಅಥವಾ ಗರ್ಭವತಿಯಾದ ಮಹಿಳೆಯನ್ನು ಪ್ರತ್ಯೇಕಿಸುವುದೂ ಕಾಯ್ದೆಯಡಿಯಲ್ಲಿ ಅಪರಾಧವಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಕೈ ಬೆರಳಿನಲ್ಲಿಯೇ ಚಿಕಿತ್ಸೆ ನಡೆಸುವುದಾಗಿ ತಿಳಿಸುವುದು ಅಥವಾ ಸ್ತ್ರೀ ಗರ್ಭದಲ್ಲಿರುವ ಭ್ರೂಣದ ಲಿಂಗ ಬದಲಾವಣೆ ಮಾಡುವುದಾಗಿ ವಂಚಿಸುವುದೂ ಅಪರಾಧವಾಗಿದೆ.

ನಾಯಿ, ಹಾವು ಅಥವಾ ಚೇಳು ಕಡಿತಕ್ಕೆ ಮಂತ್ರ-ತಂತ್ರ ಅಥವಾ ಯಂತ್ರಗಳನ್ನು ಹಾಕಿಸಿಕೊಳ್ಳುವಂತೆ ಸಲಹೆ ನೀಡುವುದನ್ನೂ ವಿಧೇಯಕದಲ್ಲಿ ಅಪರಾಧವಾಗಿ ಪರಿಗಣಿಸಲಾಗಿದೆ. ಇನ್ನು ಪ್ರಾಣಿ ಬಲಿ ನೀಡುವುದಕ್ಕೂ ವಿಧೇಯಕದಲ್ಲಿ ನಿಷೇಧ ಹೇರಲಾಗಿದೆ.

 ವಾಸ್ತು-ಜ್ಯೋತಿಷ್ಯಕ್ಕಿಲ್ಲ ನಿಷೇಧ

ವಾಸ್ತು-ಜ್ಯೋತಿಷ್ಯಕ್ಕಿಲ್ಲ ನಿಷೇಧ

ಮೌಢ್ಯ ನಿಷೇಧ ವಿಧೇಯಕದಲ್ಲಿ ವಾಸ್ತು ಹಾಗೂ ಜ್ಯೋತಿಷ್ಯಗಳಂತಹ ಸಾಂಪ್ರದಾಯಿಕ ಪದ್ಧತಿಗಳ ಆಚರಣೆಗೆ ಯಾವುದೇ ಅಭ್ಯಂತರವಿಲ್ಲ. ಅಂತೆಯೇ, ಕಿವಿ-ಮೂಗು ಚುಚ್ಚುವುದು, ಚೌಲ ಅಥವಾ ಕೇಶ ಮುಂಡನದಂತಹ ಧಾರ್ಮಿಕ ಆಚರಣೆಗಳಿಗೂ ಯಾವುದೇ ನಿರ್ಬಂಧಗಳಿಲ್ಲ. ಹಬ್ಬ-ಜಾತ್ರೆಗಳ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿ ಬೆಂಕಿ ಮೇಲೆ ನಡೆಯುವ ಅಥವಾ ಕೆಂಡ ಹಾಯುವ ಆಚರಣೆಗೂ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ.

 ಪ್ರಾರ್ಥನೆ, ಭಜನೆಗಳಿಗಿಲ್ಲ ಅಡ್ಡಿ

ಪ್ರಾರ್ಥನೆ, ಭಜನೆಗಳಿಗಿಲ್ಲ ಅಡ್ಡಿ

ಇನ್ನು ಮನೆಯಲ್ಲಿ, ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್‍ಗಳಲ್ಲಿ ಹೀಗೆ ಎಲ್ಲಾ ಧರ್ಮಗಳ ಧಾರ್ಮಿಕ ಆಚರಣೆಗಳಾದ ಪ್ರಾರ್ಥನೆ, ಉಪಾಸನೆ, ಹರಿಕಥೆ, ಕೀರ್ತನೆ, ಭಜನೆ, ಪ್ರವಚನಗಳು ಈ ವಿಧೇಯಕದಿಂದ ಅಬಾಧಿತವಾಗಿವೆ.

ಒಟ್ಟಾರೆ ಹಲ್ಲೆ, ಹಿಂಸೆ, ಬಾನಾಮತಿ, ಮಾಯ, ಮಾಟ-ಮಂತ್ರಕ್ಕೆ ಕಡಿವಾಣ ಹಾಕಲಿರುವ ಈ ವಿಧೇಯಕವು ಒಟ್ಟಾರೆ ಕಾನೂನಾತ್ಮಕವಾಗಿ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ. ಸದನವು ಒಪ್ಪಿಗೆ ನೀಡಿದರೆ ಹೊಸ ಅಂಶಗಳನ್ನು ಸೇರ್ಪಡೆ ಮಾಡಲು ಅಥವಾ ಇರುವ ಅಂಶಗಳನ್ನು ಕೈ ಬಿಡಲು ಮುಕ್ತ ಅವಕಾಶವಿದೆ.

English summary
The Karnataka Cabinet cleared the much-awaited The Karnataka Prevention and Eradication of Inhuman Evil Practices and Black Magic Bill, 2017. In this bill practices listed under 16 points for prohibition, include facilitating any person to roll over leaves of leftover food by other persons in any public or religious places or similar practices that violate human dignity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X