ಕನ್ನಡ ಮಾಧ್ಯಮ ಮಸೂದೆಗೆ ರಾಜ್ಯ ಕ್ಯಾಬಿನೆಟ್ ಒಪ್ಪಿಗೆ
ಬೆಂಗಳೂರು, ಮಾ. 20: 1 ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜತೆಗೆ ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲೂ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಬಗೆಗಿನ ವಿಧೇಯಕ ಮಂಡನೆಗೂ ಸಿದ್ಧತೆ ನಡೆದಿದೆ.
ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು 1ರಿಂದ 10ನೇ ತರಗತಿವರೆಗೂ ಒಂದು ಭಾಷೆಯಾಗಿ ಎಲ್ಲ ಶಾಲೆಗಳಲ್ಲೂ ಕಲಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ. ಅದರ ಪ್ರಕಾರ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಲು ಮಸೂದೆ ಮಂಡನೆ ಮಾಡಲಾಗುತ್ತಿದೆ.[ಕನ್ನಡ ಕಡ್ಡಾಯವಲ್ಲ: ಸರ್ಕಾರದ ಕೊನೆ ಸುತ್ತಿನ ಹೋರಾಟ]
ಮಾ. 31ರಂದು ಸುಪ್ರೀಂಕೋರ್ಟ್ನಲ್ಲಿ ಭಾಷಾ ನೀತಿ ಕುರಿತ ರಾಜ್ಯದ ಅರ್ಜಿ ವಿಚಾರಣೆಯಿದೆ. ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ರಾಜ್ಯ ವಿಧಾನಸಭೆಯ ತೀರ್ಮಾನವನ್ನು ನ್ಯಾಯಾಲಯಕ್ಕೆ ತಿಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.[ಆಂಗ್ಲ ಶಾಲೆಗಳಿಗೆ ಅನುಮತಿ ನೀಡಲು ಹೈಕೋರ್ಟ್ ಆದೇಶ]
ಮಕ್ಕಳಿಗೆ ಶಿಕ್ಷಣ ನೀಡುವ ಮಾಧ್ಯಮವನ್ನು ಗುರುತಿಸುವುದು ಪಾಲಕರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು ಮಾ. 31 ಕ್ಕೆ ಅದರ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭಾಷಾ ಮಾಧ್ಯಮ ಮಸೂದೆ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ.