ಎಸ್ಸಿ/ಎಸ್ಟಿ ಮುಂಬಡ್ತಿ ಮೀಸಲಾತಿ ವಿಧೇಯಕಕ್ಕೆ ಒಪ್ಪಿಗೆ
ಬೆಂಗಳೂರು, ಜನವರಿ 30 : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಮುಂಬಡ್ತಿ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬುಧವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಎಸ್ಸಿ, ಎಸ್ಟಿ ಮುಂಬಡ್ತಿ ಮೀಸಲಾತಿ ವಿಧೇಯಕದ ಬಗ್ಗೆ ಚರ್ಚೆ ನಡೆಯಿತು.
ಬಡ್ತಿಯಲ್ಲಿ ಮೀಸಲಾತಿ ಆದೇಶ: ಕರ್ನಾಟಕದ ಹಾದಿ ಸುಗಮವೇ?
ಸುಪ್ರೀಂಕೋರ್ಟ್ನಲ್ಲಿ ಮೀಸಲಾತಿ ಕುರಿತ ವಿಚಾರಣೆ ಇನ್ನೂ ಬಾಕಿ ಇದ್ದರೂ ವಿಧೇಯಕವನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ವಿಧಾನಸೌಧದಲ್ಲಿ ಎಸ್ಸಿ, ಎಸ್ಟಿ ನೌಕರರು ಸಿಹಿ ಹಂಚಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾದ ಮೀಸಲು ವಿವಾದ
ಏನಿದು ವಿವಾದ? : ಕರ್ನಾಟಕ ಸರ್ಕಾರದ ಬಡ್ತಿ ಮೀಸಲು ಕಾಯ್ದೆ 2002 ಅನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ 2017ರ ಫೆ.9ರಂದು ತೀರ್ಪು ನೀಡಿತ್ತು. ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ. ಎಸ್ಸಿ/ಎಸ್ಟಿ ಪಂಗಡದ ಉದ್ಯೋಗಿಗಳಿಗೆ ಉತ್ತೇಜನ ನೀಡಲು ಯಾವುದೇ ಬಡ್ತಿ ಮೀಸಲು ಇಲ್ಲ ಎಂದು ಕೋರ್ಟ್ ಹೇಳಿತ್ತು.
ಒಳಮೀಸಲಾತಿ ನೀಡಲು ತಯಾರು, ಸ್ವಲ್ಪ ಕಾಲಾವಕಾಶ ಕೊಡಿ: ಕುಮಾರಸ್ವಾಮಿ
ಕರ್ನಾಟಕದಲ್ಲಿ 7.30 ಲಕ್ಷ ಸರ್ಕಾರಿ ನೌಕರರು ಇದ್ದಾರೆ. ಇವರಲ್ಲಿ 20 ಸಾವಿರಕ್ಕೂ ಅಧಿಕ ಎಸ್ಸಿ/ಎಸ್ಟಿ ಸಮುದಾಯದವರು. ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಇವರು ಆತಂಕ ಎದುರಿಸುತ್ತಿದ್ದರು.
ಸುಪ್ರೀಂಕೋರ್ಟ್ ನೀಡಿದ್ದ ಆದೇಶಕ್ಕೆ ವ್ಯಾಪಕ ವಿರೋಧ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಹಿಂದಿನ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಒಪ್ಪಿಗೆ ಪಡೆದಿತ್ತು. ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗಿದೆ.
ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾದ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿದೆ. ಆದರೆ, 'ಸುಪ್ರೀಂಕೋರ್ಟ್ ನೀಡುವ ಅಂತಿಮ ಆದೇಶಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.