ಠೇವಣಿ ಕಳೆದುಕೊಂಡ ಜೆಡಿಎಸ್: ಎಚ್ಡಿಕೆ ಮಹತ್ವದ ಹೇಳಿಕೆ
ಬೆಂಗಳೂರು/ರಾಮನಗರ, ನ 2: "ಜೆಡಿಎಸ್ ಪಕ್ಷವು ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಪಕ್ಷದ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರವಾಗಿದೆ" ಎಂದು ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸ್ಫರ್ಧೆ ಮಾಡಿತ್ತು ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಸಿಕ್ಕಿರುವ ಮತಗಳೇ ಉತ್ತರ ನೀಡಿವೆ. ಸ್ಥಳೀಯ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಲಾಯಿತು" ಎಂದು ಹೇಳಿದರು.
ಉಪ ಚುನಾವಣೆ: ದೊಡ್ಡಗೌಡ್ರು ಠಿಕಾಣಿ ಹೂಡಿದ್ರೂ, ಜೆಡಿಎಸ್ಸಿಗೆ ಠೇವಣಿ ಲಾಸ್
"ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹೇಳಿರುವಂತೆ ನಾನು ಉಪ ಚುನಾವಣೆ ಫಲಿತಾಂಶಕ್ಕೆ ಮಹತ್ವ ನೀಡುವುದಿಲ್ಲ. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ. ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ನಮ್ಮ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಪ್ರಚಾರದ ವೇಳೆ ನಾನು ಐವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಜನರ ಸ್ಪಂದನೆ ಉತ್ತಮವಾಗಿತ್ತು" ಎಂದು ಕುಮಾರಸ್ವಾಮಿ ಹೇಳಿದರು.
ಸಿಂದಗಿ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಗೆಲುವಿಗೆ, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?
"ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನೀಡಿದ್ದ ನೀರಾವರಿ ಯೋಜನೆಗಳ ಬಗ್ಗೆ, ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಕಾರ್ಯಕ್ರಮಗಳು ಹಾಗೂ ಸಾಲ ಮನ್ನಾ ಬಗ್ಗೆ ಪ್ರತಿ ಹಳ್ಳಿಯಲ್ಲೂ ಜನ ಮಾತನಾಡಿದ್ದರು. ಸ್ವತಃ ಜನರೇ ನನ್ನ ಬಳಿಗೆ ಬಂದು ಈ ಬಗ್ಗೆ ಮಾತನಾಡುತ್ತಿದ್ದರು" ಎಂದು ಕುಮಾರಸ್ವಾಮಿ ಸೋಲಿನ ಬಗ್ಗೆ ವ್ಯಾಖ್ಯಾನಿಸಿದರು.
ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿತು
"ಮಾಜಿ ಸಚಿವ ಎಂ.ಸಿ.ಮನಗೂಳಿ ಮರಣದ ನಂತರ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿತು. ಜೊತೆಗೆ, ನಮ್ಮ ಸಂಘಟನೆಯನ್ನೂ ದುರ್ಬಲ ಮಾಡಲಾಗಿತ್ತು. ಇದು ನನ್ನ ಗಮನದಲ್ಲಿತ್ತು. ಮತಗಟ್ಟೆಗಳಲ್ಲಿ ಕಾರ್ಯಕರ್ತರನ್ನು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಈ ಕಾರಣಕ್ಕೆ ನಮಗೆ ಹಿನ್ನಡೆ ಉಂಟಾಯಿತು. ಆದರೂ ಈ ಫಲಿತಾಂಶದಿಂದ ನಾನು ಅಧೀರನೂ ಆಗಿಲ್ಲ, ನನಗೆ ಆತಂಕವೂ ಇಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಯಾವಾಗಲೂ ಇಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇರುತ್ತಿತ್ತು
"ಹಾನಗಲ್ ನಲ್ಲಿ ನಮಗೆ ನೆಲೆ ಇರಲಿಲ್ಲ. ಆದರೆ, ಸಿಂಧಗಿಯಲ್ಲಿ ನಮ್ಮವರೇ ಶಾಸಕರಿದ್ದರು. ಯಾವ ಚುನಾವಣೆಯಲ್ಲೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇರುತ್ತಿತ್ತು . ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತೆ ಉಪ ಚುನಾವಣೆಗಳು ನಡೆಯುವ ಬಗೆಯೇ ಬೇರೆ, ಸಾರ್ವತ್ರಿಕ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ನಮ್ಮ ಪಕ್ಷ 2023ನೇ ವಿಧಾನಸಭೆ ಚುನಾವಣೆ ಮೇಲೆ ಪೂರ್ಣ ಗಮನ ಕೇಂದ್ರೀಕರಿಸಿದೆ" ಎಂದು ಕುಮಾರಸ್ವಾಮಿ ಹೇಳಿದರು.
ಬಿಡದಿಯಲ್ಲಿ ಸಂಘಟನಾ ಕಾರ್ಯಗಾರವನ್ನೂ ನಡೆಸಲಾಯಿತು, ಕುಮಾರಸ್ವಾಮಿ
"ಬಿಡದಿಯಲ್ಲಿ ಸಂಘಟನಾ ಕಾರ್ಯಗಾರವನ್ನೂ ನಡೆಸಲಾಯಿತು. ಈಗ ಪಕ್ಷದ ಸಂಘಟನೆಯತ್ತಲೇ ನಾವು ಗಮನ ಇರಿಸಿದ್ದೇವೆ. ಉಪ ಚುನಾವಣೆಗಳು ನಡೆಯುವುದು ಹಣಬಲದಿಂದಲೇ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಸಿಂಧಗಿಯಲ್ಲಿ ಕೊನೆ ಆಟ ಎಂದಿದ್ದ ಸಚಿವರೊಬ್ಬರ ಹೇಳಿಕೆಯನ್ನು ಮಾಧ್ಯಮಗಳೇ ವರದಿ ಮಾಡಿವೆ. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ ಎನ್ನುವುದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿವೆ. ಬಿಜೆಪಿ- ಕಾಂಗ್ರೆಸ್ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಇದೇ ಆಗಿದೆ" ಎಂದು ಕುಮಾರಸ್ವಾಮಿ ಸೋಲಿನ ವಿವರಣೆಯನ್ನು ನೀಡಿದರು.
ಠೇವಣಿ ಕಳೆದುಕೊಂಡ ಜೆಡಿಎಸ್: ಎಚ್ಡಿಕೆ ಮಹತ್ವದ ಹೇಳಿಕೆ
"ಸಿದ್ದರಾಮಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳ ಕಥೆ ಏನೂ ಎನ್ನುವುದು ತಿಳಿದ ವಿಷಯವೇ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಾರೆ. ಇದೇ ನವೆಂಬರ್ 8ರಿಂದ 16ರವರೆಗೆ ಪಕ್ಷದ ಕಚೇರಿಯಲ್ಲಿ ಪ್ರತಿ ಜಿಲ್ಲಾವಾರು ಸಭೆಗಳನ್ನು ಕರೆಯಲಾಗಿದೆ. ಪ್ರತಿದಿನ ನಾಲ್ಕು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದರು.