ಉಪಚುನಾವಣೆ ಪ್ರಚಾರದ ಅಬ್ಬರ ಹೇಗಿರುತ್ತೆ? ಮೊದಲ ದಿನವೇ ಮುನ್ಸೂಚನೆ ಕೊಟ್ಟ ಆರ್.ಅಶೋಕ್, ಡಿಕೆಶಿ
ಬೆಂಗಳೂರು, ಅ 14: ನವೆಂಬರ್ 3ರಂದು ನಡೆಯಲಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಜರಾಜೇಶ್ವರಿ ನಗರದ ಉಪಚುನಾವಣೆಗೆ, ಮೂರೂ ಪಕ್ಷಗಳ ಅಭ್ಯರ್ಥಿಗಳು ಇಂದು (ಅ 14) ನಾಮಪತ್ರ ಸಲ್ಲಿಸಿದ್ದಾರೆ.
ಕೊರೊನಾ ಆರ್ಭಟದ ನಡುವೆ ನಡೆಯುತ್ತಿರುವ ಈ ಚುನಾವಣೆಯಲ್ಲಿ, ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟು, ಮೂರೂ ಪಕ್ಷಗಳು, ಅಸಂಖ್ಯಾತ ಕಾರ್ಯಕರ್ತರನ್ನು ಸೇರಿಸಿ, ಅಬ್ಬರದಿಂದಲೇ ನಾಮಪತ್ರ ಸಲ್ಲಿಸಿದ್ದಾಗಿದೆ.
ಜ್ಯೋತಿಷ್ಯ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎದುರು ಬಿಜೆಪಿ ಅಭ್ಯರ್ಥಿ ಮುನಿರತ್ನ ಸೋಲು ಖಚಿತ ಯಾಕೆ ಗೊತ್ತಾ?
ಆರ್.ಆರ್.ನಗರದಲ್ಲಿ ಬಿಜೆಪಿಯಿಂದ ಮುನಿರತ್ನ ನಾಯ್ಡು, ಕಾಂಗ್ರೆಸ್ಸಿನಿಂದ ಎಚ್.ಕುಸುಮಾ ಮತ್ತು ಜೆಡಿಎಸ್ಸಿನಿಂದ ವಿ. ಕೃಷ್ಣಮೂರ್ತಿ ಅಭ್ಯರ್ಥಿಗಳಾಗಿದ್ದಾರೆ. ಇನ್ನು ಶಿರಾದಲ್ಲಿ ಬಿಜೆಪಿಯಿಂದ ಡಾ.ರಾಜೇಶ್ ಗೌಡ, ಕಾಂಗ್ರೆಸ್ಸಿನಿಂದ ಟಿ.ಬಿ.ಜಯಚಂದ್ರ ಮತ್ತು ಜೆಡಿಎಸ್ಸಿನಿಂದ ಅಮ್ಮಾಜಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ತಮ್ಮ ಅಭ್ಯರ್ಥಿಗಳ ಜೊತೆ, ಆಯಾಯ ಪಕ್ಷದ ಹಿರಿಯ ಮುಖಂಡರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು. ನಾಮಪತ್ರ ಸಲ್ಲಿಸಿದ ಕೂಡಲೇ, ನಾಯಕರುಗಳ ಮಾತಿನ ವರಸೆ ಆರಂಭವಾಗಿದ್ದು, ಮೊದಲ ದಿನವೇ, ಉಪಚುನಾವಣೆಯಲ್ಲಿ ವಾಕ್ಸಮರ ಹೇಗಿರುತ್ತೆ ಎನ್ನುವುದರ ಮುನ್ಸೂಚನೆಯನ್ನು ನೀಡಿದ್ದಾರೆ.
ಆರ್ ಆರ್ ನಗರ ಉಪಚುವಣೆ: ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ನಳಿನ್ ಕುಮಾರ್ ಕಟೀಲ್ ಅವರಿಂದ ಮುನಿರತ್ನಗೆ ಬಿ-ಫಾರಂ
ಎರಡು ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಶೀಘ್ರವಾಗಿ ಪ್ರಕಟಿಸಿರಲಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಮುನಿರತ್ನ ಪರ ಪ್ರಕಟವಾದ ಬೆನ್ನಲ್ಲೇ, ಬಿಜೆಪಿ ವರಿಷ್ಠರು ರಾಜರಾಜೇಶ್ವರಿ ನಗರ ಕ್ಷೇತ್ರದ ಅಸೆಂಬ್ಲಿ ಚುನಾವಣೆಗೆ, ಮುನಿರತ್ನ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದರ ಜೊತೆಗೆ, ರಾಜೇಶ್ ಗೌಡ ಅವರಿಗೆ ಶಿರಾದ ಟಿಕೆಟ್ ನೀಡಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಮುನಿರತ್ನ, ಮಂಗಳವಾರ ಬಿ-ಫಾರಂ ಪಡೆದುಕೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ಬಿಜೆಪಿಯ ಹಿರಿಯ ಮುಖಂಡ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದರೆ, ಡಿಕೆಶಿ ಅದಕ್ಕೆ ತನ್ನದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಇನ್ನು, ಆರ್.ಆರ್.ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡೂ ಪಕ್ಷವನ್ನು ಲೇವಡಿ ಮಾಡಿದ್ದಾರೆ.
ಬಂಡೆ, ಕಲ್ಲು ಏನಿದ್ದರೂ ಅದು ಕನಕಪುರದಲ್ಲಿಯೇ ಹೊರತು, ಇಲ್ಲಲ್ಲಾ
"ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅಲ್ಲ, ನಾನೇ ಅಭ್ಯರ್ಥಿ. ಈ ಬಾರಿ ಕಾಂಗ್ರೆಸ್ಸಿನವರ ಆಟ ನಡೆಯುವುದಿಲ್ಲ. ಇಲ್ಲಿ ಗೆಲುವು ನಮ್ಮದೇ. ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಟ ನಡೆಯುವುದಿಲ್ಲ. ಬಂಡೆ, ಕಲ್ಲು ಏನಿದ್ದರೂ ಅದು ಕನಕಪುರದಲ್ಲಿಯೇ ಹೊರತು, ಇಲ್ಲಲ್ಲಾ. ಇಲ್ಲಿ ಯಾವ ಬಂಡೆಕಲ್ಲು ಇಲ್ಲ"ಎಂದು ಆರ್.ಅಶೋಕ್, ಡಿಕೆಶಿಗೆ ಮಾತಿನ ಏಟು ನೀಡಿದ್ದರು.
ಬಿಜೆಪಿಯವರು ಯಾರನ್ನು ಬೇಕಾದರೂ ಪುಡಿ ಮಾಡುತ್ತಾರೆ
ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, "ಬಿಜೆಪಿಯವರು ಯಾರನ್ನು ಬೇಕಾದರೂ ಪುಡಿ ಮಾಡುತ್ತಾರೆ. ಯಾರ ಮೇಲಾದರೂ ಕೇಸ್ ಹಾಕುತ್ತಾರೆ. ನಾವು ಅದಕ್ಕೆಲ್ಲಾ ಉತ್ತರ ಕೊಡಲು ಹೋಗುವುದಿಲ್ಲ. ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದಷ್ಟೇ ನಮ್ಮ ಕೆಲಸ" ಎಂದು ಡಿಕೆಶಿ ಹೇಳಿದ್ದಾರೆ.
Recommended Video
ಬಿಜೆಪಿಯವರು ಗೆಲ್ಲುವ ಭ್ರಮೆಯಲ್ಲಿದ್ದಾರೆ
ಇನ್ನು ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ, "ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ. ಕಾಂಗ್ರೆಸ್ ನಾಯಕರಿಂದ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಯಾವ ಮುಖ ಇಟ್ಟಿಕೊಂಡು ಮತ ಕೇಳುತ್ತಾರೆ. ಇನ್ನು, ಕೊರೊನಾ ನಿಯಂತ್ರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿಯವರು ಗೆಲ್ಲುವ ಭ್ರಮೆಯಲ್ಲಿದ್ದಾರೆ"ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.