ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ 'ಆಪರೇಷನ್ ಕಮಲ' ಕೇಕೆ ಹಾಕಿದಾಗ..
ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ, ಬಿಜೆಪಿ ಹನ್ನೆರಡು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಎರಡರಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಮೂಲ ಬಿಜೆಪಿಗ ಶರತ್ ಬಚ್ಚೇಗೌಡ ಜಯಸಾಧಿಸಿದ್ದಾರೆ. ಜೆಡಿಎಸ್ ನದ್ದು ಶೂನ್ಯ ಸಂಪಾದನೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಹದಿನಾಲ್ಕು (ಆರ್. ಶಂಕರ್ ಸೇರಿ) ಕಾಂಗ್ರೆಸ್ ಶಾಸಕರು ಮತ್ತು ಮೂವರು ಜೆಡಿಎಸ್ ಶಾಸಕರು, ಆಪರೇಷನ್ ಕಮಲಕ್ಕೊಳಗಾಗಿ, ಗೆದ್ದುಬಂದ ಪಕ್ಷದ ವಿರುದ್ದ ನಿಯತ್ತು ತೋರಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸಿದ್ದರಾಮಯ್ಯ ರಾಜೀನಾಮೆ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?
ಸ್ಪೀಕರ್ ಇವರನ್ನೆಲ್ಲಾ ಅನರ್ಹರು ಎಂದು ತೀರ್ಪು ನೀಡಿದ್ದರು, ಇವರ ತೀರ್ಪನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತ್ತು. ಅನರ್ಹ ಪಟ್ಟಿಯನ್ನು ಹೊತ್ತವರಲ್ಲಿ (ಕಣದಲ್ಲಿರುವವರು) ಇಬ್ಬರನ್ನು ಹೊರತು ಪಡಿಸಿ, ಮಿಕ್ಕವರೆಲ್ಲಾ ಚುನಾವಣೆಯಲ್ಲಿ ಈಗ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಸೋಲು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿಯೋ ಲಾಬಿ!
ಜನತಾ ನ್ಯಾಯಾಲಯದಲ್ಲಿ ಇವರೆಲ್ಲಾ 'ಅರ್ಹರು' ಎನ್ನುವ ತೀರ್ಪು ಬಂದಿದೆ. ಒಂದರ್ಥದಲ್ಲಿ ಆಪರೇಷನ್ ಕಮಲಕ್ಕೆ, ಮತದಾರ ಅಧಿಕೃತ ಮುದ್ರೆ ಒತ್ತಿದ್ದಾನೆ ಎನ್ನುವಂತೆ ಜನಾದೇಶ ಬಂದಿದೆ. ಸ್ವಹಿತಾಶಕ್ತಿಗಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಚಾಳಿಯನ್ನು ತಪ್ಪಿಸಲು, ಪಕ್ಷಾಂತರ ನಿಷೇಧ ಮಸೂದೆಯನ್ನು ಸುಮಾರು ಮೂರು ದಶಕಗಳ ಕೆಳಗೆ ಜಾರಿಗೆ ತರಲಾಗಿತ್ತು.
ರಾಜೀವ್ ಗಾಂಧಿ, ಪ್ರಧಾನಿಯಾಗಿದ್ದ ವೇಳೆ
30.01.1985ರಂದು, ಪಕ್ಷಾಂತರ ನಿಷೇಧ ಕಾಯಿದೆ 52ನೇ ಸಂವಿಧಾನಿಕ ತಿದ್ದುಪಡಿಯ ಮೂಲಕ ಜಾರಿಗೆ ಬಂದಿತ್ತು. ಈ ಕಾಯಿದೆಯನ್ನು ಸಂವಿಧಾನದ 10ನೇ ಅನುಸೂಚಿಯಲ್ಲಿ ಸೇರಿಸಲಾಗಿತ್ತು. ಈ ಅನುಸೂಚಿ, ಶಾಸಕಾಂಗ ಮತ್ತು ರಾಜ್ಯ ವಿಧಾನಸಭಾ ಸದಸ್ಯರನ್ನು ಪಕ್ಷಾಂತರ ಕಾರಣಕ್ಕಾಗಿ ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿತ್ತು. ರಾಜೀವ್ ಗಾಂಧಿ, ಪ್ರಧಾನಿಯಾಗಿದ್ದ ವೇಳೆ, ಜಾರಿಗೆ ಬಂದ ಮಸೂದೆ ಇದಾಗಿತ್ತು.
ಕರ್ನಾಟಕ ಸ್ಪೀಕರ್ ರಮೇಶ್ ಕುಮಾರ್
ಒಂದು ಪಕ್ಷದ ಚಿಹ್ನೆಯಿಂದ ಆಯ್ಕೆಯಾದ ಸದಸ್ಯನು ಪಕ್ಷಾಂತರ ಮಾಡಿದ್ದಾನೋ ಇಲ್ಲವೇ ಎಂಬ ನಿರ್ಣಯವನ್ನು ಸಭಾಪತಿಗಳು ಸದನಕ್ಕನುಗುಣವಾಗಿ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ ಎನ್ನುವುದು ಮಸೂದೆಯ ಪ್ರಮುಖಾಂಶ. ಇದನ್ನು, ಆಧರಿಸಿ, ಕರ್ನಾಟಕ ಸ್ಪೀಕರ್ ರಮೇಶ್ ಕುಮಾರ್ ಇವರನ್ನೆಲ್ಲಾ ಅನರ್ಹರು ಎಂದು ತೀರ್ಪನ್ನು ನೀಡಿದ್ದರು.
ಸ್ಪೀಕರ್ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದರೂ, ಸ್ಪರ್ಧಿಸಲು ಅವಕಾಶ
ಸ್ಪೀಕರ್ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದರೂ, ಸ್ಪರ್ಧಿಸಲು ಅವಕಾಶ ನೀಡಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಬಿಜೆಪಿಯ ಎಲ್ಲಾ ಅಭ್ಯರ್ಥಿಗಳನ್ನು ಅನರ್ಹರು, ಮಾತೃಪಕ್ಷಕ್ಕೆ ದ್ರೋಹ ಬಗೆದವರು ಎಂದೆಲ್ಲಾ ಪ್ರಚಾರದ ವೇಳೆ ಟೀಕಿಸಿದರು. ಅವರೆಲ್ಲಾ ಮುಂಬೈನ ಐಷಾರಾಮಿ ಹೊಟೇಲ್ ನಲ್ಲಿ ಕಳೆದ ಅದ್ದೂರಿ ಜೀವನದ ಬಗ್ಗೆಯೂ ಮತದಾರರಿಗೆ ವಿವರಿಸಿದರು.
ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ ಬಹುತೇಕರು ಭರ್ಜರಿ ಜಯಸಾಧಿಸಿದರು
ತಮಿಳುನಾಡಿನಲ್ಲಿ ಹದಿನೆಂಟು ಮತ್ತು ಮಹಾರಾಷ್ಟ್ರದಲ್ಲಿ ಹದಿನೇಳು ಪಕ್ಷಾಂತರಿಗಳನ್ನು ಉಪಚುನಾವಣೆಯಲ್ಲಿ ಮತದಾರ ಸೋಲಿಸಿ ಪಾಠ ಕಲಿಸಿದ್ದ. ಎಚ್.ವಿಶ್ವನಾಥ್ ಕೋಟಿ ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎಂದು ಜೆಡಿಎಸ್ ಮುಖಂಡರು ಡಂಗುರ ಸಾರಿದರು. #RejectDisqualifiedMLAs ಎನ್ನುವ ಹ್ಯಾಷ್ ಟ್ಯಾಗ್ ನ್ಯಾಷನಲ್ ಟ್ರೆಂಡ್ ಆಗಿತ್ತು. ಆದರೆ, ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ ಬಹುತೇಕರು ಭರ್ಜರಿ ಜಯಸಾಧಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕವಾಡಲು ಸ್ಪೂರ್ತಿ ಪಡೆಯದಿದ್ದರೆ ಸಾಕು
ಉಪಚುನಾವಣೆಯಲ್ಲಿನ ಬಿಜೆಪಿ ಜಯ, ಯಡಿಯೂರಪ್ಪನವರ ಮುಖ ನೋಡಿಯೋ ಅಥವಾ ಸುಭದ್ರ ಸರಕಾರ ಇರಲಿ ಎನ್ನುವ ಕಾರಣಕ್ಕಾಗಿಯೋ ಜನಾದೇಶ ಬಂದಿರಬಹುದು. ಆದರೆ, ಆಪರೇಷನ್ ಕಮಲ ಅಥವಾ ರಿವರ್ಸ್ ಆಪರೇಷನ್ ಎನ್ನುವ ರಾಜಕೀಯ ಪಿಡುಗಿಗೆ, ಉಪಚುನಾವಣೆಯ ಫಲಿತಾಂಶ ಪಾಠವಾಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದು, ಮತ್ತೆ ಮತ್ತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕವಾಡಲು ಸ್ಪೂರ್ತಿ ಪಡೆಯದಿದ್ದರೆ ಸಾಕು...