ರಾಮನಗರದಲ್ಲಿ ನಾವು ಸೋತಿಲ್ಲ, ಉಪಚುನಾವಣೆ ಸೋಲಿಗೆ ಎದೆಗುಂದಿಲ್ಲ: ಬಿಎಸ್ ವೈ
'ರಾಮನಗರದಲ್ಲಿ ನಾವು ಸೋತಿಲ್ಲ, ಬಳ್ಳಾರಿಯಲ್ಲಿ ಸೋತಿದ್ದೇವೆ. ರಾಮನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಕುತಂತ್ರದಿಂದ ನಮಗೆ ಸೋಲಾಗಿದೆ. ಉಪಚುನಾವಣೆ ಫಲಿತಾಂಶದಿಂದ ನಾವು ಮತ್ತು ನಮ್ಮ ಪಕ್ಷ ಎದೆಗುಂದಿಲ್ಲ' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ಹೊರಬಿದ್ದ ಎರಡು ವಿಧಾನಸಭಾ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಮತದಾರರಿಗೂ ತಮ್ಮ ಅಭಿನಂದನೆ ಸಲ್ಲಿಸಿದರು.
ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಉಪಚುನಾವಣೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ಜಯಗಳಿಸಿದೆ. ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್ ಮತ್ತು ಮಂಡ್ಯ, ರಾಮನಗರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ.
ಜಮಖಂಡಿಯಲ್ಲಿ ಕಾಂಗ್ರೆಸ್ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗ
ಈ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ಹಣ ಹೆಂಡದ ಪಾತ್ರ ಬಹಳವಿದೆ!
"ಮೊದಲಿಗೆ ರಾಜ್ಯದ ಜನತೆಗೆ ನನ್ನ ಮತ್ತು ಪಕ್ಷದ ವತಿಯಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೆಯೇ 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ನನ್ನ ಅಭಿನಂದನೆ ಮತ್ತು ವಂದನೆಗಳು. 5 ಕ್ಷೇತ್ರಗಳ ಮತದಾರರ ತೀರ್ಪನ್ನು ನಾನು ಮತ್ತು ನಮ್ಮ ಪಕ್ಷ ಸ್ವೀಕರಿಸುತ್ತದೆ. ಸತ್ಯಸಂಗತಿ ಎಂದರೆ ಈ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಬಹಳಷ್ಟಿದೆ. ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆಯನ್ನು ಗೆದ್ದಿವೆ" -ಬಿ ಎಸ್ ಯಡಿಯೂರಪ್ಪ.
ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?
ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿತ್ತು
"ಬಳ್ಳಾರಿ ಮತ್ತು ಜಮಖಂಡಿಯಲ್ಲಿ ನಾವು ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಶಿವಮೊಗ್ಗದಲ್ಲಿ ಕೂಡ ನಾವು ಬಹಳಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ಜೆಡಿಎಸ್ ಹಣದ ಹೊಳೆ ಹರಿಸಿದೆ, ನಾವು ಅದರಲ್ಲಿ ಈಜಿಕೊಂಡು ದಡ ಸೇರಿದ್ದೇವೆ. 52,500 ಅಂತರದಿಂದ ಗೆದ್ದಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಕೂಡ ಇಷ್ಟು ಅಂತರ ಸಾಧಿಸಿದ್ದು ಒಂದು ಸಾಹಸವೇ. ಇದರ ಜೊತೆಗೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ 2 ಲಕ್ಷ 44 ಸಾವಿರದಷ್ಟು ಮತಗಳನ್ನು ಪಡೆದದ್ದು ನಮಗೆ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಇದು ಸಹಕಾರಿಯಾಗುತ್ತದೆ"- ಬಿ ಎಸ್ ಯಡಿಯೂರಪ್ಪ.
ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!
ರಾಮನಗರದಲ್ಲಿ ನಾವು ಸೋತಿಲ್ಲ!
"ಜೆಡಿಎಸ್ ಮತ್ತು ಕಾಂಗ್ರೆಸ್ ನವರು ರಾಜಕೀಯ ಕುತಂತ್ರ ಮಾಡುವಲ್ಲಿ ನಿಸ್ಸೀಮರು. ಇದನ್ನು ಈ ಉಪಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಜೆಡಿಎಸ್ ನ ಪ್ರಜಾಪ್ರಭುತ್ವವಿರೋಧಿ ನಡೆ ರಾಮನಗರದಲ್ಲಿ ಬಯಲಿಗೆ ಬಂತು. ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕೀಯ ಕುತಂತ್ರಗಳ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ. ನಮ್ಮ ಪಕ್ಷ ಸೋತಿದೆ ಎಂದು ಕೈಕಟ್ಟಿ ಕೂರುವುದಿಲ್ಲ, ನಾವು ಸೋತದ್ದು ಬಳ್ಳಾರಿ ಮಾತ್ರ. ನಮ್ಮ ಸೋಲನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ 2019ರ ಚುನಾವಣೆಯನ್ನು ಗೆಲ್ಲುವತ್ತ ನಮ್ಮ ದೃಷ್ಟಿಯನ್ನು ಹರಿಸುತ್ತೇವೆ"- ಬಿ ಎಸ್ ಯಡಿಯೂರಪ್ಪ.
2019 ರಲ್ಲಿ ನಮ್ಮದೇ ಗೆಲುವು
"2019ರ ಚುನಾವಣೆಯಲ್ಲಿ ಮೋದಿಯವರ ಸಾಧನೆ ಮತ್ತು ಜನಪ್ರಿಯತೆ ನಮ್ಮ ಪಕ್ಷದ ಸಂಘಟನೆಯನ್ನು ಒಟ್ಟುಗೂಡಿಸಿ ನಾವು ಚುನಾವಣೆಯನ್ನು ಎದುರಿಸುತ್ತೇವೆ. ಯಾವುದೇ ಸಂದೇಹವಿಲ್ಲದೆ 22-23 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಆದಷ್ಟು ಬೇಗ ನಾನು ಪಕ್ಷ ಸಂಘಟನೆಯ ಜೊತೆಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಇದೇ ಸಮಯದಲ್ಲಿ ಈ ದೋಸ್ತಿ ಸರ್ಕಾರದ ಅಧಿಕಾರ ದಾಹವನ್ನು ಜನರ ಮುಂದಿಡುತ್ತೇವೆ. ಒಂದು ಬಲಿಷ್ಠ ವಿರೋಧ ಪಕ್ಷವಾಗಿ ನಮಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಎದುರಿಸುವ ಶಕ್ತಿ ಇದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇವೆ. ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಗೆ ತಾಜಾ ಉದಾಹರಣೆ ಎಂದರೆ ನಿನ್ನೆ ಹೈ-ಕೋರ್ಟ್ ಸರ್ಕಾರಕ್ಕೆ ವರ್ಗಾವಣೆ ದಂಧೆ ಬಗ್ಗೆ ಛೀಮಾರಿ ಹಾಕಿರುವುದೇ ಸಾಕು"- ಬಿ ಎಸ್ ಯಡಿಯೂರಪ್ಪ.