ಇನ್ನೂ ಕಾಲ ಮಿಂಚಿಲ್ಲ: 5ಕ್ಷೇತ್ರದಲ್ಲಿ ಬಿಜೆಪಿಗೆ ತುರ್ತಾಗಿ 'ರಾಜಕೀಯ ಚಾಣಕ್ಯ' ಬೇಕಾಗಿದ್ದಾರೆ
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಇನ್ನಿಲ್ಲದ ಭಿನ್ನಮತವನ್ನು ಎದುರಿಸುತ್ತಿದೆ. ಅದು ಸಹಜ ಕೂಡಾ.. ಇದರ ಮುಂದಾಲೋಚನೆ ಮಾಡಿಕೊಂಡೇ, ಆಪರೇಷನ್ ಕಮಲಕ್ಕೆ ಕೈಹಾಕಬೇಕಿತ್ತು ಎನ್ನುವುದು ಕೂಡಾ ಅಷ್ಟೇ ವಾಸ್ತವತೆ.
ಎಲ್ಲಾ ಹದಿನೈದು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿ, ಭಿನ್ನಮತವನ್ನು ಎದುರಿಸುತ್ತಲೇ ಬಂತು. ಆದರೆ, ಒಂದು ಮಟ್ಟಿಗೆ ಎಲ್ಲಾ ಸಮಸ್ಯೆಗೆ ಮದ್ದು ಕಂಡುಕೊಂಡ ಬಿಜೆಪಿಗೆ, ಕೆಲವೊಂದು ಕ್ಷೇತ್ರಗಳು ಕಗ್ಗಂಟಾಗಿಯೇ ಉಳಿದಿದೆ.
ಉಪಚುನಾವಣೆ, ಡಿಸಿಎಂ ಪರಮಾಪ್ತನೇ ಜೆಡಿಎಸ್ ಅಭ್ಯರ್ಥಿ: ಅಕ್ಷರಶಃ ಬೆಚ್ಚಿಬಿದ್ದ ಬಿಜೆಪಿ
ಒಂದೋ ಆಂತರಿಕ ಭಿನ್ನಮತ, ಇಲ್ಲವೋ, ಪಕ್ಷೇತರ /ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಅದೂ ಇಲ್ಲದಿದ್ದರೆ, ಚುನಾವಣಾ ಪ್ರಚಾರದಿಂದ ದೂರ ಸರಿದಿರುವುದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಹಾಗೂಹೀಗೂ, ಹಿರೇಕೆರೂರು ಮತ್ತು ಅಥಣಿಯ ಬಂಡಾಯ ಶಮನವಾದಂತಿದೆ.
ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್
ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಎರಡು ದಿನ ಬಾಕಿಯಿರುವ (ನ 21) ಈ ಹೊತ್ತಿನಲ್ಲಿ, ಬಿಜೆಪಿ, ಚುನಾವಣಾ ತಂತ್ರಗಾರಿಕೆಯನ್ನು ಸರಿಯಾಗಿ ನಿಭಾಯಿಸಿದೇ ಆದಲ್ಲಿ, ಐದು ಕ್ಷೇತ್ರಗಳ ಭಿನ್ನಮತವನ್ನು ಸರಿದಾರಿಗೆ ತರುವುದು ದೊಡ್ಡ ವಿಚಾರವಲ್ಲ. ಐದು ಕ್ಷೇತ್ರಗಳು..
ಗೋಕಾಕ್ ಅಸೆಂಬ್ಲಿ ಕ್ಷೇತ್ರ
ಗೋಕಾಕ್ ಮಲ್ಲಿ ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ಸಿನ ಲಖನ್ ಜಾರಕಿಹೊಳಿ ನಡುವೆ ನೇರ ಸ್ಪರ್ಧೆ. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದ ಅಶೋಕ್ ಪೂಜಾರಿ, ತಮ್ಮ ನಿಯತ್ತನ್ನು ಬದಲಾಯಿಸಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ರಮೇಶ್ ಗೆ ಉತ್ತಮ ಪೈಪೋಟಿ ನೀಡಿದ್ದ ಪೂಜಾರಿ, ಜೆಡಿಎಸ್ಸಿನಿಂದ ಈಗ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಬೀಳುವ ಮತವೆಲ್ಲಾ, ರಮೇಶ್ ಜಾರಕಿಹೊಳಿಗೆ ಪೆಟ್ಟು ಬೀಳುವಂತದ್ದು. ಅಶೋಕ್ ಪೂಜಾರಿಯವರಿಗೆ, ನಾಮಪತ್ರ ಹಿಂಪಡೆಯಲು, ಬಿಜೆಪಿಯಿಂದ ಒತ್ತಡ ಬೀಳುತ್ತಲೇ ಇದೆ.
ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರ
ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಸುಖಾಸುಮ್ಮನೆ ಸಮಸ್ಯೆ ಎದುರಾಕಿಕೊಂಡಿದೆ. ಬಿಜೆಪಿಯ ಕಟ್ಟಾ ಬೆಂಬಲಿಗ ಕವಿರಾಜ್ ಅರಸ್, ಪಕ್ಷೇತರರಾಗಿ ಕಣಕ್ಕಿಳಿದ್ದಿದ್ದಾರೆ. 108 ಲೀಟರ್ ಹಾಲನ್ನು ಅವರ ತಲೆ ಮೇಲೆ ಸುರಿಯುವ ಮೂಲಕ ಅವರ ಬೆಂಬಲಿಗರು, ನಿಮ್ಮ ಹಿಂದೆ ನಾವಿದ್ದೇವೆ ಎಂದು ಸಾರಿದ್ದಾರೆ. ಅರಸ್ ಅವರನ್ನು ಸಮಾಧಾನ ಪಡಿಸುವಲ್ಲಿ ಶ್ರೀರಾಮುಲು ವಿಫಲರಾಗಿದ್ದಾರೆ. ಯಡಿಯೂರಪ್ಪನವರ ಮಾತುಕತೆಯೂ ವಿಫಲವಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಅರಸ್ ಅವರನ್ನು ಸಮಾಧಾನ ಪಡಿಸುವ ವಿಶ್ವಾಸದಲ್ಲಿದ್ದಾರೆ.
ಹುಣಸೂರು ಕ್ಷೇತ್ರ
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಸಮಸ್ಯೆಯಿಲ್ಲ. ಆದರೆ, ಅಲ್ಲಿ ಬಿಜೆಪಿಗಾಗುತ್ತಿರುವ ಹಿನ್ನಡೆಯೆಂದರೆ, ಟೆಕ್ನಿಕಲ್ ಆಗಿ ಜೆಡಿಎಸ್ ನಲ್ಲಿರುವ ಜಿ.ಟಿ.ದೇವೇಗೌಡ ಪ್ರಚಾರದಿಂದ ದೂರವಿರುವುದು. ಅವರ ಮಗ ಹರೀಶ್ ಗೌಡ, ಇಲ್ಲಿಂದ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ತುರ್ತಾಗಿ ಬಿಜೆಪಿ ಮುಖಂಡರ ಇವರ ಮನವೊಲಿಕೆಗೆ ಮುಂದಾಗಿದ್ದಾರೆ.
ಹೊಸಕೋಟೆ ಕ್ಷೇತ್ರ
ಯಾರ ಮಾತಿಗೂ ಬೆಲೆಕೊಡದೇ, ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶರತ್ ಬಚ್ಚೇಗೌಡ ಅವರನ್ನು ಮನವೊಲಿಸಲು ರಾಜ್ಯದ ಯಾವ ಮುಖಂಡರಿಗೂ ಸಾಧ್ಯವಾಗುತ್ತಿಲ್ಲ. ತಂದೆ, ಸಂಸದರಾಗಿರುವುದರಿಂದ, ಕೇಂದ್ರದ ನಾಯಕರು, ಬಚ್ಚೇಗೌಡ ಅವರನ್ನು ಮನವೊಲಿಸಿದರೆ, ಇಲ್ಲಿನ ಬಂಡಾಯ ಶಮನಗೊಳ್ಳಬಹುದು.ಇಲ್ಲಿ, ಇನ್ನೂ ಕಾಲ ಮಿಂಚಿಲ್ಲ.
ಯಲ್ಲಾಪುರ ಕ್ಷೇತ್ರ
ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಯಲ್ಲಾಪುರದಲ್ಲಿ ಬಿಜೆಪಿಗೆ ಸಮಸ್ಯೆ ಉಂಟಾಗಿದೆ. ಮಾಜಿ ಬಿಜೆಪಿ ಶಾಸಕ ವಿ,ಎಸ್,ಪಾಟೀಲ್ ಪುತ್ರ ಬಾಪುಗೌಡ ಪಾಟೀಲ್, ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಆರ್.ವಿ.ದೇಶಪಾಂಡೆ ಸಮ್ಮುಖದಲ್ಲಿ ಶುಕ್ರವಾರ (ನ 22) ಕಾಂಗ್ರೆಸ್ ಸೇರಲಿದ್ದಾರೆ. ಇದರ ನೇರ ಪರಿಣಾಮ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಮೇಲೆ ಬೀಳಲಿದೆ ಎನ್ನುವುದು ಉತ್ತರಕನ್ನಡ ಜಿಲ್ಲೆಯ ಲೆಕ್ಕಾಚಾರ.