ಉಪಚುನಾವಣೆ: ಐದರಿಂದ ನಾಲ್ಕು ಕ್ಷೇತ್ರಗಳಿಗೆ ಇಳಿದ ಜೆಡಿಎಸ್ ಟಾರ್ಗೆಟ್, ಕಾರಣ ಇಲ್ಲಿದೆ!
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ನಿರ್ಣಾಯಕವಾಗಿರುವ ಉಪಚುನಾವಣೆಯಲ್ಲಿ ಜೆಡಿಎಸ್ ತನ್ನ ಕಾರ್ಯತಂತ್ರವನ್ನು ಬದಲಿಸುತ್ತಾ ಸಾಗುತ್ತಿದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಗೆದ್ದು, ನಂತರ, ತಮ್ಮ ಪಕ್ಷಕ್ಕೇ ದ್ರೋಹ ಬಗೆದವರಿಗೆ ಸರಿಯಾದ ಪಾಠವನ್ನು ಕಲಿಸಲು, ದೇವೇಗೌಡ್ರು ಭಾರೀ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ಉಪಚುನಾವಣೆ: ಐದು ಕ್ಷೇತ್ರಗಳ ಮೇಲಷ್ಟೆ ಜೆಡಿಎಸ್ ಕಣ್ಣು
ಹದಿನೈದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ, ಜೆಡಿಎಸ್ ಸೀಮಿತ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಫೈಟ್ ನೀಡಲು ನಿರ್ಧರಿಸಿದಂತಿದೆ. ಹಾಗಾಗಿ, ಕೇವಲ ನಾಲ್ಕು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು, ಸಂಬಂಧಪಟ್ಟ ಕ್ಷೇತ್ರದ ಮುಖಂಡರ, ಕಾರ್ಯಕರ್ತರ ಸಭೆಯನ್ನು ಗೌಡ್ರು ನಡೆಸುತ್ತಿದ್ದಾರೆ.
ಒಂದೊಮ್ಮೆ ನನ್ನ ಮೇಲೆ ಐಟಿ ದಾಳಿಯಾದರೆ ದೇವೇಗೌಡರೇ ಕಾರಣ: ರಾಜಣ್ಣ
ಮೊದಲು ಐದು ಕ್ಷೇತ್ರಗಳ ಮೇಲೆ ವಿಶೇಷ ಗಮನವಿಡಲು ಜೆಡಿಎಸ್ ನಿರ್ಧರಿಸಿತ್ತು. ಈಗ ನಾಲ್ಕು ಕ್ಷೇತ್ರಗಳನ್ನು ಗೆಲ್ಲಲೇಬೇಕು ಎನ್ನುವ ಹಠಕ್ಕೆ ಗೌಡ್ರು ಬಿದ್ದಿದ್ದಾರೆ. ಆ ಕ್ಷೇತ್ರಗಳು, ಯಾವುವು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
ಚಿಕ್ಕಬಳ್ಳಾಪುರ ಕ್ಷೇತ್ರ
ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿತ್ತು. ಕಾರಣ, ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಕೆ. ಸುಧಾಕರ್ ಅವರಿಗೆ ಒಂದು ಹಂತಕ್ಕೆ ಫೈಟ್ ನೀಡಿದ್ದರು. ಅಲ್ಲಿ, ಜೆಡಿಎಸ್ಸಿಗೆ ಈಗಲೂ ಉತ್ತಮ ಎನ್ನಬಹುದಾದ ನೆಲೆಯಿದೆ. ಆದರೆ, ಆಯ್ದ ನಾಲ್ಕು ಕ್ಷೇತ್ರಗಳ ನಂತರ ಈ ಕ್ಷೇತ್ರದ ಬಗ್ಗೆ ಗಮನಕೊಡಲು ಗೌಡ್ರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಹುಣಸೂರು ಕ್ಷೇತ್ರ
ಜೆಡಿಎಸ್ಸಿಗೆ ತೀವ್ರ ಮುಜುಗರ ತಂದದ್ದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್. ವಿಶ್ವನಾಥ್ ಪಕ್ಷ ತೊರೆದು, ಬಿಜೆಪಿಗೆ ನಿಷ್ಠೆ ತೋರಿದ್ದು. ಕಳೆದ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಶ್ವನಾಥ್, ಕಾಂಗ್ರೆಸ್ಸಿನ ಎಚ್.ಪಿ.ಮಂಜುನಾಥ್ ಅವರನ್ನು 8,575 ಮತಗಳ ಅಂತರದಿಂದ ಸೋಲಿಸಿದ್ದರು. ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಸಚಿವಸ್ಥಾನ ಬಯಸಿದ್ದ ವಿಶ್ವನಾಥ್ ಗೆ ಅದು ಲಭಿಸಿರಲಿಲ್ಲ. ವಿಶ್ವನಾಥ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಪಾಠ ಕಲಿಸಲು, ಗೌಡ್ರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ
ಜೆಡಿಎಸ್ಸಿಗೆ ಮತ್ತೊಂದು ಮುಖಭಂಗವಾಗಿದ್ದು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕರಾಗಿದ್ದ ಗೋಪಾಲಯ್ಯ ರಾಜೀನಾಮೆ ನೀಡಿದ್ದು. ಗೋಪಾಲಯ್ಯ, ಗೌಡ್ರಿಗೆ ಅತ್ಯಂತ ಆಪ್ತರಾಗಿದ್ದವರು. ಜೊತೆಗೆ, ಅವರ ಪತ್ನಿ, ಜೆಡಿಎಸ್ಸಿನಿಂದ ಉಪಮೇಯರ್ ಕೂಡಾ ಆಗಿದ್ದರು. ಆದರೂ, ಗೋಪಾಲಯ್ಯ ಆಪರೇಷನ್ ಕಮಲಕ್ಕೆ ಒಳಗಾದರು. ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಇದೂ ಒಂದು. ಗೌಡ್ರ ಟಾರ್ಗೆಟ್ ಇರುವ ಕ್ಷೇತ್ರವಿದು.
ಕೆ.ಆರ್.ಪೇಟೆ ಕ್ಷೇತ್ರ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾರಾಯಣ ಗೌಡ ಕೂಡಾ ಆಪರೇಷನ್ ಕಮಲಕ್ಕೆ ಒಳಗಾದರು. ಗೌಡ್ರ ಕುಟುಂಬದ ಹೆಣ್ಣುಮಕ್ಕಳ ಹಸ್ತಕ್ಷೇಪದಿಂದ ರಾಜೀನಾಮೆ ನೀಡಿರುವುದು ಎಂದು ನಾರಾಯಣ ಗೌಡ್ರು ರಾಜೀನಾಮೆಗೆ ಕೊಟ್ಟಿದ್ದ ಕಾರಣ. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಗೌಡ್ರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಯಶವಂತಪುರ ಕ್ಷೇತ್ರ
ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎಸ್.ಟಿ.ಸೋಮಶೇಖರ್ ಕೂಡಾ ರಾಜೀನಾಮೆ ನೀಡಿದವರಲ್ಲಿ ಒಬ್ಬರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ಸಿನ ಜವರಾಯೇಗೌಡ ಉತ್ತಮ ಪೈಪೋಟೀಯನ್ನು ನೀಡಿ 10,711 ಮತಗಳಿಂದ ಸೋಲು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ಸಿಗೆ ಉತ್ತಮ ನೆಲೆಯಿದೆ. ಗೌಡ್ರು ಕಣ್ಣಿಟ್ಟಿರುವ ಈ ಕ್ಷೇತ್ರಗಳಲ್ಲಿ ಇದೂ ಒಂದು.