ಉಪಚುನಾವಣೆ, ಫಲ ನೀಡದ ಸಂಧಾನ: ಬಿಎಸ್ವೈಗೆ ಸುಡುತ್ತಿರುವ 6 ಕ್ಷೇತ್ರಗಳು
ಹಲವು ಸುತ್ತಿನ ಆಪರೇಷನ್ ನಂತರ ಅಧಿಕಾರಕ್ಕೇರಲು ಯಶಸ್ವಿಯಾದ ಯಡಿಯೂರಪ್ಪನವರಿಗೆ, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದು, ದಿನದಿಂದ ದಿನಕ್ಕೆ ಕಷ್ಟವಾಗುತ್ತಾ ಸಾಗುತ್ತಿದೆ.
ಅತೃಪ್ತ ಶಾಸಕರಿಗೆ ಟಿಕೆಟ್ ನೀಡಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿಯಿದೆ. ಆದರೆ, ಆಯಾಯ ಕ್ಷೇತ್ರದ ಬಿಜೆಪಿ ಮುಖಂಡರನ್ನು ಸಮಾಧಾನ ಪಡಿಸುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದುಸ್ತರವಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿ ಸೋಲುಂಡಿದ್ದ ಬಿಜೆಪಿ ಕ್ಯಾಂಡಿಡೇಟ್ ಗಳು ಈ ಬಾರಿಯ ಉಪ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾವ ಸಂಧಾನಕ್ಕೂ ಈ ಮುಖಂಡರು ಜಗ್ಗುತ್ತಿಲ್ಲ.
ಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರಕ್ಕೆ ಸದನ ಅಕ್ಷರಸಃ ತಬ್ಬಿಬ್ಬು
ಕಳೆದ ಚುನಾವಣೆಯಲ್ಲಿ ಅವರ ವಿರುದ್ದ ಜಿದ್ದಾಜಿದ್ದಿನ ಹೋರಾಟ ನಡೆಸಿದ ನಮಗೆ ಅವರನ್ನು ಬೆಂಬಲಿಸುವ ಯಾವ ಅವಶ್ಯಕತೆಯೂ ಇಲ್ಲ. ಅದ್ಯಾವ ಮುಖ ಇಟ್ಟುಕೊಂಡು, ಮತದಾರರ ಬಳಿ ಹೋಗುವುದು ಎಂದು ಈ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಈ ಆರು ಕ್ಷೇತ್ರಗಳು, ಬಿಜೆಪಿಗೆ, ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ. ಆ 6 ಕ್ಷೇತ್ರ, ಆ ಮುಖಂಡರಾರು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
ಹಿರೇಕೆರೂರು ಕ್ಷೇತ್ರ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ 'ಕೌರವ' ಬಿ.ಸಿ.ಪಾಟೀಲ್, ಅತೃಪ್ತರ ಪಟ್ಟಿಯಲ್ಲಿ ಸೇರಿ, ರಾಜೀನಾಮೆ ನೀಡಿದ್ದರು. ಅವರಿಗೆ, ಬಿಜೆಪಿಯ ಮತ್ತು ಯಡಿಯೂರಪ್ಪನವರ ಆಪ್ತ ಯು.ಬಿ.ಬಣಕರ್ ತೀವ್ರ ಪೈಪೋಟಿ ನೀಡಿ, ಕೇವಲ 555 ಮತಗಳ ಅಂತರದಿಂದ ಸೋತಿದ್ದರು. ಉಪಚುನಾವಣೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಬಣಕರ್ ಹಠ ಹಿಡಿದು ಕೂತಿದ್ದಾರೆ.
ಗೋಕಾಕ್ ಕ್ಷೇತ್ರ
ಯಡಿಯೂರಪ್ಪನವರಿಗೆ ತಲೆನೋವಾಗಿರುವ ಇನ್ನೊಂದು ಕ್ಷೇತ್ರ ಗೋಕಾಕ್. ಸಾಹುಕಾರ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವುದರಿಂದ, ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಇದೂ ಒಂದು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ, 14,280 ಮತಗಳ ಅಂತರದಿಂದ ಸೋಲುಂಡಿದ್ದರು. ಪೂಜಾರಿ, ಟಿಕೆಟ್ ನನಗೇ ಬೇಕೆಂದು ಕೂತಿದ್ದಾರೆ.
ಬಿಎಸ್ವೈ ಕಾಲ್ಗುಣ ಸ್ವಲ್ಪ ಜಾಸ್ತಿಯಾಯಿತು: ಸದನದಲ್ಲಿ ಎಚ್ಡಿಕೆ ಕಾಮಿಡಿ ಪಂಚ್
ಕೆ.ಆರ್.ಪುರಂ ಕ್ಷೇತ್ರ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪುರಂ ಕ್ಷೇತ್ರದ, ಒಂದು ಕಾಲದ ಸಿದ್ದರಾಮಯ್ಯ ಆಪ್ತ ಬೈರತಿ ಬಸವರಾಜ್, ಇಲ್ಲಿಂದ ಗೆದ್ದು, ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಹೋದ ವರ್ಷದ ಚುನಾವಣೆಯಲ್ಲಿ ಬೈರತಿ, ಕಟ್ಟಾ ಸಂಘ ಪರಿವಾರದ ಮುಖಂಡರೂ ಆಗಿರುವ ನಂದೀಶ್ ರೆಡ್ಡಿ ಎದುರು, 32,729 ಮತಗಳ ಅಂತರದಿಂದ ಗೆದ್ದಿದ್ದರು. ನಂದೀಶ್ ರೆಡ್ಡಿ ಇಲ್ಲಿನ ಟಿಕೆಟ್ ಆಕಾಂಕ್ಷಿ. ಇವರನ್ನು ಸಮಾಧಾನ ಪಡಿಸಲು, ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ.
ಮಸ್ಕಿ ಕ್ಷೇತ್ರ
ಮತ್ತೊಂದು ಜಿದ್ದಾಜಿದ್ದಿನ ಹಣಾಹಣಿ ಕಂಡಿದ್ದ ಕ್ಷೇತ್ರವೆಂದರೆ ಮಸ್ಕಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪ್ರತಾಪಗೌಡ ಪಾಟೀಲ್, ಬಿಜೆಪಿಯ ಬಸವನಗೌಡ ತುರುವಿಹಾಳ ಅವರನ್ನು ಕೇವಲ 213 ಮತಗಳ ಅಂತರದಿಂದ ಸೋಲಿಸಿದ್ದರು. ಬಸವನಗೌಡ ಟಿಕೆಟ್ ಬೇಡಿಕೆಯಿಂದ ಹಿಂದಕ್ಕೆ ಸರಿಯುತ್ತಿಲ್ಲ.
ಕಾಗವಾಡ ಕ್ಷೇತ್ರ
ರೆಸಾರ್ಟಿನಿಂದ ಎಸ್ಕೇಪ್ ಆಗಿ ಆಸ್ಪತ್ರೆ ದಾಖಲಾಗಿದ್ದ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಕಳೆದ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಭರಮಗೌಡ ಆಲಗೌಡ ಕಾಗೆ ಆಲಿಯಾಸ್ ರಾಜು ಕಾಗೆ, ಪಾಟೀಲ್ ವಿರುದ್ದ 32,942 ಮತಗಳ ಭಾರೀ ಅಂತರದಿಂದ ಸೋಲುಂಡಿದ್ದರು. ಆದರೆ, ಇವರು ಮತ್ತೆ ಬಿಜೆಪಿ ಟಿಕೆಟ್ ಬೇಕೆಂದು ಕೂತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ನಿಗಮ ಮಂಡಳಿ ಸ್ಥಾನಕ್ಕೂ ನೋ ಎಂದಿದ್ದಾರೆ.
ಹೊಸಕೋಟೆ ಕ್ಷೇತ್ರ
ಮುಖ್ಯಮಂತ್ರಿ ತೀವ್ರವಾಗಿ ಕಗ್ಗಂಟಾಗಿರುವ ಕ್ಷೇತ್ರ ಹೊಸಕೋಟೆ. ಈ ಕ್ಷೇತ್ರದಲ್ಲಿ ಎಂ.ಟಿ.ಬಿ ನಾಗರಾಜ್ ಮತ್ತು ಬಚ್ಚೇಗೌಡ್ರ ಕುಟುಂಬದ ನಡುವೆ ಹಿಂದಿನಿಂದಲೂ ಫೈಟ್. ಕಳೆದ ಚುನಾವಣೆಯಲ್ಲಿ ಎಂಟಿಬಿ, ಗೌಡ್ರ ಪುತ್ರ ಶರತ್ ವಿರುದ್ದ 7,597 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎಂಟಿಬಿ ರಾಜೀನಾಮೆ ನೀಡಿದ್ದರಿಂದ, ಅಲ್ಲಿ ಉಪಚುನಾವಣೆ ನಡೆಯಲಿದೆ. ಶರತ್ ನನ್ನ ಮಾತು ಕೇಳುತ್ತಿಲ್ಲ ಎಂದು ಬಚ್ಚೇಗೌಡ್ರು ಹೇಳಿದ ನಂತರ, ಬಿಎಸ್ವೈ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ.