ಬಜೆಟ್ ಜಂಟಿ ಅಧಿವೇಶನಕ್ಕೆ ಎಷ್ಟು ಮಂದಿ ಶಾಸಕರು ಗೈರು ಹಾಜರಿ?
Recommended Video
ಬೆಂಗಳೂರು, ಫೆಬ್ರವರಿ 06: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗಿದೆ. ಒಂದು ಕಡೆ ಬಿಜೆಪಿ ತನ್ನ ಅಧಿವೇಶನವನ್ನು ಹಾಳುಗೆಡವಲು ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ಸಿಗರಿಗೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸವಾಗಿದೆ.
ಕಾಂಗ್ರೆಸ್ನ ಅತೃಪ್ತ ಶಾಸಕರು ಕೈ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿಯಿದೆ. ಕಾಂಗ್ರೆಸ್ಸಿನ ಆರು ಮಂದಿ ಅತೃಪ್ತ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗಬಹುದು ಎಂಬ ಸುಳಿವು ಸಿಕ್ಕಿದ್ದರಿಂದ ತನ್ನ ಎಲ್ಲಾ ಶಾಸಕರಿಗೂ ವ್ಹಿಪ್ ಜಾರಿಗೊಳಿಸಿತ್ತು.
ಬಜೆಟ್ ಅಧಿವೇಶನ LIVE:ಕಾಂಗ್ರೆಸ್ ನ 4,ಬಿಜೆಪಿಯ 2 ಶಾಸಕರು ಗೈರು
ಕೆಪಿಸಿಸಿಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದರು. ಆದರೂ, ಇಂದು ಸದನದ ಕಲಾಪಕ್ಕೆ ಕಾಂಗ್ರೆಸ್ ಶಾಸಕರು ಗೈರು ಹಾಜರಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೈ ಶಾಕರಿಗೆ ವಿಪ್ ಜಾರಿಗೊಳಿಸಿ ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಸೂಚಿಸಿ, ಬುಧವಾರ ಬೆಳಗ್ಗೆ ಅತೃಪ್ತ ಶಾಸಕರ ಕೊಠಡಿಯ ಬಾಗಿಲಿಗೆ ವಿಪ್ ನೋಟಿಸ್ ಅಂಟಿಸಲಾಗಿದೆ. ಪಿ.ಆರ್. ರಮೇಶ್, ಪ್ರಕಾಶ್ ರಾಥೋಡ್ ಮತ್ತು ಗಣೇಶ್ ಹುಕ್ಕೇರಿ, ವಿಧಾನಸೌಧದಲ್ಲಿ ಶಾಸಕರ ಕೊಠಡಿಗೆ ನೋಟಿಸ್ ಅಂಟಿಸಿದ್ದಾರೆ.
ಆದರೆ, ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ. ನಾಗೇಂದ್ರ ಮತ್ತು ಉಮೇಶ್ ಜಾಧವ್ ಅವರು ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಈ ನಡುವೆ ವಿಧಾನ ಮಂಡಲ ಜಂಟಿ ಅಧಿವೇಶನಕ್ಕೆ ಶಾಸಕ ಆನಂದ್ ಸಿಂಗ್ ಹಾಜರಾಗಿದ್ದಾರೆ. ಅತೃಪ್ತರ ಪೈಕಿ ಗುರುತಿಸಿಕೊಂಡಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಕೂಡಾ ಸದನದಲ್ಲಿ ಕಾಣಿಸಿಕೊಂಡಿದ್ದಾರೆ.
ಸುಮಾರು 12ಕ್ಕೂ ಅಧಿಕ ಶಾಸಕರು ಗೈರಾಗುವ ನಿರೀಕ್ಷೆಯಲ್ಲಿ ಬಿಜೆಪಿಗೆ ಸರಿಯಾದ ಸಂಖ್ಯಾಬಲ ಸಿಕ್ಕಿಲ್ಲ. ಹೆಚ್ಚಿನ ಶಾಸಕರ ಬಲ ಸಿಕ್ಕರೆ, ಜೆಡಿಎಸ್ -ಕಾಂಗ್ರೆಸ್ ಪಕ್ಷದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾದಿದ್ದಾರೆ.
ಇಂದು ಆರಂಭವಾದ ಬಜೆಟ್ ಅಧಿವೇಶನದ ಆರಂಭದಲ್ಲೇ ಬಿಜೆಪಿ ಸದಸ್ಯರ ಗದ್ದಲದಿಂದ ರಾಜ್ಯಪಾಲ ವಜುಭಾಯಿ ವಾಲ ಭಾಷಣ ಮೊಟಕುಗೊಳಿಸಬೇಕಾಯಿತು. 22 ಪುಟಗಳ ಭಾಷಣದಲ್ಲಿ 2 ಪುಟ ಮಾತ್ರ ಓದಿದ ರಾಜ್ಯಪಾಲ ವಜುಭಾಯಿ ವಾಲ ಅವರು 5 ನಿಮಿಷ ಕಾಲ ಸದನದಲ್ಲಿದ್ದು, ಹೊರ ನಡೆದರು. ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಬಾವಿಗಿಳಿದು ಪ್ರತಿಭಟಿಸಿದ ಬಿಜೆಪಿಯ ಮೊದಲ ಹಂತದ ರಣತಂತ್ರ ಸದ್ಯಕ್ಕೆ ಫಲಿಸಿದೆ.
ಗೈರು ಹಾಜರಾದವರು: ನಿರೀಕ್ಷೆಯಂತೆ ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರು ಸೇರಿದಂತೆ ಒಟ್ಟು ಐದು ಮಂದಿ ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ಶಾಸಕರುಗಳಾದ ರಮೇಶ್ ಜಾರಕಿಹೊಳಿ(ಗೋಕಾಕ), ಮಹೇಶ್ ಕುಮಟಳ್ಳಿ(ಅಥಣಿ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್(ಚಿಂಚೋಳಿ) ಹಾಗೂ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಬಂಧನ ಭೀತಿ ಎದುರಿಸುತ್ತಿರುವ ಜೆ.ಎನ್. ಗಣೇಶ್(ಕಂಪ್ಲಿ), ಡಾ ಸುಧಾಕರ್ (ಚಿಕ್ಕಬಳ್ಳಾಪುರ), ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ಸದನಕ್ಕೆ ಗೈರು ಹಾಜರಾಗಿದ್ದಾರೆ. ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ, ಅಶ್ವಥ ನಾರಾಯಣ್(ಮಲ್ಲೇಶ್ವರ) ಅವರು ಸದ್ಯ ಮುಂಬೈನಲ್ಲಿರುವುದರಿಂದ ಸದನಕ್ಕೆ ಹಾಜರಾಗಿಲ್ಲ.
ಈ ಪೈಕಿ ರಮೇಶ್ ಜಾರಕಿಹೊಳಿ ತಾವು ಮುಂಬೈನಲ್ಲಿದ್ದು, ಸದನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ಅವರಿಗೆ ಪತ್ರ ರವಾನಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಉಳಿದಂತೆ ಬಿಸಿ ಪಾಟೀಲ್(ಹಿರೇಕೆರೂರು), ಬಸನಗೌಡ ದದ್ದೌಲ್, ಪ್ರತಾಪ್ ಗೌಡ ಪಾಟೀಲ್ ಮುಂತಾದ ಶಾಸಕರು ಇನ್ನೂ ಹಾಜರಾತಿ ಪ್ರತಿಯಲ್ಲಿ ಸಹಿ ಹಾಕಿಲ್ಲ. ಒಟ್ಟಾರೆಯಾಗಿ 12 ಮಂದಿ ಕಾಂಗ್ರೆಸ್ ಶಾಸಕರು, 1 ಜೆಡಿಎಸ್, 3 ಬಿಜೆಪಿ ಶಾಸಕರು ಹಾಗೂ ಇಬ್ಬರು ಪಕ್ಷೇತರರು ಇಂದು ಗೈರಾಗಿದ್ದಾರೆ.