ಮಾಸಿಕ ಗೌರವಧನ 1 ಸಾವಿರ ಹೆಚ್ಚಳ: ಆಶಾ ಕಾರ್ಯಕರ್ತೆಯರ ಅಸಮಾಧಾನ
ಬೆಂಗಳೂರು, ಮಾರ್ಚ್ 04: ರಾಜ್ಯ ಹಣಕಾಸು ಸಚಿವರೂ ಆಗಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘಟನೆಯು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನದಲ್ಲಿ ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಈ ಘೋಷಣೆಗೆ ಅಸಮಾಧಾನ ವ್ಯಕ್ತಪಡಿಸಿದ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡೆ ನಮ್ಮ ಬೇಡಿಕೆಯನ್ನು ಸರ್ಕಾರವು ಈಡೇರಿಸಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಬಜೆಟ್: ಸಿಎಂ ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಯಾವುವು?
ಈ ಬಗ್ಗೆ ಮಾತನಾಡಿದ ಸಿಐಟಿಯುಸಿ (CITUC) ಎಸ್ ವರಲಕ್ಷ್ಮಿ, "ಆಶಾ , ಅಂಗನವಾಡಿ, ಬಿಸಿಯೂಟ, , ಗ್ರಾಮಪಂಚಾಯಿತಿ ಸೇರಿದಂತೆ ಹಲವು ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮೂರರಿಂದ ನಾಲ್ಕು ಬಾರಿ ಸಚಿವರ ಬಳಿ ಜಂಟಿ ಸಭೆಗಳು ನಡೆಸಲಾಗಿದೆ. ಆ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದ್ದರು. ಆದರೆ ಈಡೇರಿಕೆ ಮಾಡಿಲ್ಲ," ಎಂದು ತಿಳಿಸಿದ್ದಾರೆ.
"ಸಭೆಗಳಲ್ಲಿ ಅಂಗವವಾಡಿ ಕಾರ್ಯಕರ್ತೆಯರಿಗೆ ಸಾರ್ವಿಸ್ ವೆಂಟೇಜ್ 500 ರಿಂದ 2000 ಸಾವಿರ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಸಹಾಯಕಿ ಅಂಗನವಾಡಿ ಕಾರ್ಯಕರ್ತೆಯರಿಗೆ 1700 ರೂಪಾಯಿ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆದರೆ ಬಜೆಟ್ನಲ್ಲಿ ಯಾವುದೂ ಕೂಡಾ ಕಾಣಿಸುತ್ತಿಲ್ಲ," ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘ (ಎಐಟಿಯುಸಿ) ಕಾರ್ಯದರ್ಶಿ ಡಿ ನಾಗಲಕ್ಷ್ಮೀ, "ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ಸಾಲಿನ ಬಜೆಟ್ ಮಂಡನೆ ವೇಳೆ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ಗೌರವ ಧನವನ್ನು ಹೆಚ್ಚಳ ಮಾಡಿದ್ದಾರೆ. ಇದನ್ನು ನಾವು ನಮ್ಮ ಸಂಘದಿಂದ ಹೃತ್ಪೂರ್ಕವಾಗಿ ಸ್ವಾಗಿಸುತ್ತೇವೆ," ಎಂದಿದ್ದಾರೆ. ಆದರೆ ಈ ಬಗ್ಗೆ ಅಸಮಾಧಾನವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.
ಮಾಸಿಕ ಗೌರವಧನ 1 ಸಾವಿರ ಹೆಚ್ಚಿಸಿದರೂ ಅಸಮಾಧಾನ ಯಾಕೆ?
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಳ ಮಾಡಿದೆ. ಆದರೆ ಈ ಹಿಂದೆ 6 ಸಾವಿರ ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಒಂದು ಸಾವಿರ ರೂಪಾಯಿ ಮಾತ್ರ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆಯು ಸರ್ಕಾರವನ್ನು ಟೀಕೆ ಮಾಡಿದೆ.
"ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಹೋರಾಟ ನಡೆಸಿದ್ದಾರೆ. ಇಂದು ಆರೋಗ್ಯ ಇಲಾಖೆಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇಡೀ ಇಲಾಖೆಗೆ ಆಧಾರಸ್ತಂಭವಾಗಿ ಆಶಾಕಾರ್ಯಕರ್ತೆಯರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈ ಕೆಲಸಕ್ಕೆ ತಕ್ಕುದಾದ ಪ್ರತಿಫಲ, ಗೌರವಧನವನ್ನು ಬಜೆಟ್ನಲ್ಲಿ ನೀಡುವ ನಿರೀಕ್ಷೆಯನ್ನು ನಾವು ಹೊಂದಿದ್ದೆವು. ಆದರೆ ಸರ್ಕಾರ ನಿರೀಕ್ಷೆಯನ್ನು ಹುಸಿಯಾಗಿಸಿದೆ," ಎಂದು ಸಿಐಟಿಯುಸಿ ಅಧ್ಯಕ್ಷೆ ಎಸ್ ವರಲಕ್ಷ್ಮಿ ತಿಳಿಸಿದ್ದಾರೆ.
"ಮೂರು ವರ್ಷಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಹೆಚ್ಚಳ ಮಾಡಿಲ್ಲ. ಈ ಸಂದರ್ಭದಲ್ಲಿ ಆದರೂ ಹೆಚ್ಚಳವನ್ನು ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಎಲ್ಲಾ ಆಶಾಕಾರ್ಯಕರ್ತೆಯರು ಇದ್ದರು. ಆದರೆ ಸರ್ಕಾರ ಕೇವಲ ಒಂದು ಸಾವಿರ ರೂಪಾಯಿಯನ್ನು ಏರಿಕೆ ಮಾಡಿ ಘೋಷಿಸಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಈ ಒಂದು ಸಾವಿರ ರೂಪಾಯಿ ಹೆಚ್ಚಳವು ಖಂಡಿತವಾಗಿಯೂ ಹೆಚ್ಚಲ್ಲ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಹಾಗೂ ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಇನ್ನು ಹೆಚ್ಚು ಸೇವೆಯನ್ನು ನೀಡಲು ಹೆಚ್ಚಿನ ಗೌರವ ಧನ ಅಗತ್ಯವಾಗಿದೆ. ಇದೇ ಬಜೆಟ್ನಲ್ಲಿ ಗೌರವ ಧನ ಹೆಚ್ಚಳ ಮಾಡಬೇಕು," ಎಂದು ಡಿ ರಾಜಲಕ್ಷ್ಮೀ ಆಗ್ರಹ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)