ಬಜೆಟ್ 2020: ಪ್ರವಾಸೋದ್ಯಮ ಬೆಳವಣಿಗೆಗೆ ಯಡಿಯೂರಪ್ಪ ಮಾಸ್ಟರ್ ಪ್ಲಾನ್
ಪ್ರವಾಸಿ ಸ್ನೇಹಿ ಯೋಜನೆಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2020-21ನೇ ಸಾಲಿನಲ್ಲಿ ಜಾರಿಗೆ ತಂದಿದೆ.
2020-21ನೇ ಸಾಲಿನ ಕರ್ನಾಟಕ ಬಜೆಟ್ ನ ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಮಂಡಿಸಿದರು. ಬರೋಬ್ಬರಿ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಬಿ.ಎಸ್.ಯಡಿಯೂರಪ್ಪ ರೂಪಿಸಿದ್ದಾರೆ.
ಇಳಿವಯಸ್ಸಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ದರ್ಶನಕ್ಕೆ ಸರ್ಕಾರದಿಂದ ಹಣ!
ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿಯ ಸಮಗ್ರ ಅಭಿವೃದ್ಧಿಗಾಗಿ 25 ಕೋಟಿ ರೂಪಾಯಿ, ರಾಜ್ಯಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು 100 ಕೋಟಿ ರೂಪಾಯಿಗಳನ್ನು ನೀಡಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ.
ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ 20 ಕೋಟಿ ರೂಪಾಯಿ
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳವಾಗಿದ್ದು, ಶ್ರೀ ಆಂಜನೇಯ ಸ್ವಾಮಿ ಜನಿಸಿದ ಸ್ಥಳವೆಂದೇ ಪ್ರಸಿದ್ಧಿ ಪಡೆದಿದೆ. ಈ ಬೆಟ್ಟದಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ.
* ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವರ ನೆನಪಿಸುವ ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಕ್ರಮ.
* ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುದಾನ.
ಕರ್ನಾಟಕ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್
* ಕರ್ನಾಟಕ ರಾಜ್ಯದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪದ್ಮಶ್ರೀ ಪುರಸ್ಕೃತ ಸುಧಾ ಮೂರ್ತಿ ನೇತೃತ್ವದಲ್ಲಿ 'ಕರ್ನಾಟಕ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್' ಸ್ಥಾಪಿಸಿದೆ. ಇದರ ಶಿಫಾರಸ್ಸಿನಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ.
* ರಾಜ್ಯಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಜಾಹೀರಾತು ಮತ್ತು ಇತರ ಚಟುವಟಿಕೆಗಳಿಗೆ 100 ಕೋಟಿ ರೂಪಾಯಿ ಹಾಗೂ ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಅನುದಾನ.
* ಪ್ರವಾಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು 'ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ' (Global Tourism Investors Meet) ಆಯೋಜನೆ.
ಕರ್ನಾಟಕ ಬಜೆಟ್ 2020: ಮಹಿಳಾ ಮೀನುಗಾರರಿಗೆ 'ಸ್ಕೂಟರ್' ಭಾಗ್ಯ!
ಟೂರಿಸಂ ಸರ್ಕ್ಯೂಟ್ ಅಭಿವೃದ್ಧಿ
* ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಒದಗಿಸಿ, ಟೂರಿಸಂ ಸರ್ಕ್ಯೂಟ್ ಅಭಿವೃದ್ಧಿಗೆ ಕ್ರಮ.
* ರಾಜ್ಯದಲ್ಲಿರುವ ಶೋಲಾ ಅರಣ್ಯಗಳ ಸರ್ವೇಕ್ಷಣೆ, ಜೀವ ವೈವಿಧ್ಯ ಸಂರಕ್ಷಣೆಗೆ ಐದು ಕೋಟಿ ರೂಪಾಯಿ ಅನುದಾನ.
* ಶಿವಮೊಗ್ಗ ನಗರದ ಹೊರವಲಯದಲ್ಲಿ ಇರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಮಿನಿ ಮೃಗಾಲಯ ಉನ್ನತೀಕರಿಸಲು ಐದು ಕೋಟಿ ರೂಪಾಯಿಗಳ ಅನುದಾನ
ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ
* ರಾಮನಗರ ಜಿಲ್ಲೆಯ ರಣಹದ್ದು ಧಾಮದಲ್ಲಿ ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ.
* ಮಂಗಗಳ ಪುನರ್ವಸತಿಗಾಗಿ ಐದು ವರ್ಷಗಳಿಗೆ ಒಟ್ಟಾರೆ 6.25 ಕೋಟಿ ರೂ. ಅನುದಾನ. 2020-21ನೇ ಸಾಲಿನಲ್ಲಿ 1.25 ಕೋಟಿ ರೂಪಾಯಿ ನೆರವು.
* ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಮೊದಲ ಕಡಲಧಾಮ (Marine Eco Park) ಸ್ಥಾಪನೆ.