ಬಜೆಟ್ 2020: ಮಠ ಮಾನ್ಯಗಳಿಗೆ ಕೋಟಿ ಕೋಟಿ ಕೊಟ್ಟ ಬಿ.ಎಸ್.ವೈ!
2020-21ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಆಗಿದೆ. ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಸಕ್ತ ಸಾಲಿನ ಆಯವ್ಯಯವನ್ನು ನಿನ್ನೆ ಮಂಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡನೆ ಮಾಡಿರುವ ಬರೋಬ್ಬರಿ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ನಲ್ಲಿ ಮಠ ಮಾನ್ಯಗಳಿಗೆ ಮತ್ತು ನಾಡಿನ ಸಂಸ್ಕೃತಿ ಪರಂಪರೆ ಸಂರಕ್ಷಿಸಲು ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದಾರೆ.
ಇಳಿವಯಸ್ಸಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ದರ್ಶನಕ್ಕೆ ಸರ್ಕಾರದಿಂದ ಹಣ!
ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಲು 500 ಕೋಟಿ ರೂಪಾಯಿ, ಚಿತ್ರದುರ್ಗದ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ನೀಡಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ.
ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ
* ವಿವಿಧ ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರದ ಕ್ರಮ.
* ಭಾರತದ ವಿವಿಧ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಅತಿಥಿ ಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುದಾನ.
* ಹಾವೇರಿ ಜಿಲ್ಲೆಯಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ.
* ರಾಜ್ಯದ 60 ವರ್ಷ ಮೀರಿದ ಬಡವರಿಗೆ ಉಚಿತವಾಗಿ ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ ದರ್ಶನ ಮಾಡಲು 'ಜೀವನ ಚೈತ್ರ ಯಾತ್ರೆ' ಯೋಜನೆ ಜಾರಿ. ಇದಕ್ಕೆ 20 ಕೋಟಿ ರೂಪಾಯಿ ಅನುದಾನ.
* ರಾಜ್ಯದಲ್ಲಿರುವ 25,000ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು, ಸ್ಮಾರಕಗಳ ಪುನರುಜ್ಜೀವನಕ್ಕೆ 'ಸಂರಕ್ಷಣಾ' ಯೋಜನೆ ಜಾರಿ.
ಅನುಭವ ಮಂಟಪ ನಿರ್ಮಾಣ
* ಬಸವಕಲ್ಯಾಣದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ. ಈ ಉದ್ದೇಶಕ್ಕಾಗಿ 2020-21 ಸಾಲಿನಲ್ಲಿ 100 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು.
* ಚಿತ್ರದುರ್ಗ ಜಿಲ್ಲೆಯಲ್ಲಿರುವ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ನೆರವು.
* ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 'ವಿಜ್ಞಾನೇಶ್ವರ ಅಧ್ಯಯನ ಪೀಠ' ಸ್ಥಾಪನೆ.
* ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ವಿವೇಕಾನಂದ ಯುವ ಕೇಂದ್ರ ಸ್ಥಾಪನೆ.
ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!
ಅಮರಶಿಲ್ಪಿ ಜಕಣಾಚಾರಿ ದಿನ ಆಚರಣೆ
* ಸರ್ಕಾರದ ವತಿಯಿಂದ ಜನವರಿ 1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆಗೆ ಕ್ರಮ.
* ಬೆಂಗಳೂರು ನಗರದ ನಾಲ್ಕೂ ದಿಕ್ಕಿನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕಲಾಕ್ಷೇತ್ರಗಳ ನಿರ್ಮಾಣ.
* ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ 66 ಕೋಟಿ ರೂಪಾಯಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ.
* ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಹಾವೇರಿ ಜಿಲ್ಲೆ ಶಿಶುನಾಳ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನ.
ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆ
* ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪನವರ ಚಿತ್ರದುರ್ಗದ ಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನ.
* ಖ್ಯಾತ ಸಾಹಿತಿ ಶ್ರೀ.ಎಸ್.ಎಲ್.ಭೈರಪ್ಪನವರ ಹುಟ್ಟೂರು, ಹಾಸನ ಜಿಲ್ಲೆಯ ಸಂತೆ ಶಿವರ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ
* ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆಗೆ 50 ಲಕ್ಷ ರೂಪಾಯಿ ಅನುದಾನ
* ಚಿತ್ರಸಂತೆ ಕಾರ್ಯಕ್ರಮಕ್ಕೆ ಒಂದು ಕೋಟಿ ರೂಪಾಯಿ ನೆರವು
* ಬೆಂಗಳೂರಿನಲ್ಲಿ ಒಟ್ಟು 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ಸ್ಥಾಪನೆ.
* ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಐದು ಕೋಟಿ ರೂಪಾಯಿ
ಕೃಷಿ ಕ್ಷೇತ್ರಕ್ಕೆ 'ರೈತ ನಾಯಕ' ಯಡಿಯೂರಪ್ಪ ನೀಡಿದ ಕೊಡುಗೆ ಇಷ್ಟು!