ಕನ್ನಡ ದಿನಪತ್ರಿಕೆಗಳು ಕಂಡಂತೆ ಕುಮಾರಸ್ವಾಮಿ ಬಜೆಟ್
Recommended Video
ಬೆಂಗಳೂರು, ಫೆಬ್ರವರಿ 09: ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇಂದಿನ ಎಲ್ಲ ದಿನಪತ್ರಿಕೆಗಳಲ್ಲೂ ಅದೇ ಆದ್ಯ ವಿಷಯ.
ರಾಜ್ಯದ ದಿನಪತ್ರಿಕೆಗಳು ಬಜೆಟ್ ಅನ್ನು ಹೇಗೆ ನೋಡಿವೆ. ಯಾವ ರೀತಿ ವಿಶ್ಲೇಷಿಸಿವೆ ಎಂಬುದು ಕುತೂಹಲಕರ, ಮತ್ತು ಗಮನಿಸಬೇಕಾದ ಅಂಶವೂ ಹೌದು.
ಬಹುತೇಕ ಎಲ್ಲ ಕನ್ನಡ ದಿನಪತ್ರಿಕೆಗಳಲ್ಲೂ ರಾಜ್ಯ ಬಜೆಟ್ಗೆ ಮೊದಲ ಆದ್ಯತೆ. ಎಲ್ಲ ದಿನಪತ್ರಿಕೆಗಳು ಬಜೆಟ್ ಅನ್ನು ಸಾಧ್ಯವಾದಷ್ಟು ವಿವರವಾಗಿ ಪ್ರಕಟಿಸಿವೆ. ಬಜೆಟ್ ಜೊತೆಗೆ ಕುಮಾರಸ್ವಾಮಿ-ಯಡಿಯೂರಪ್ಪ ನಡುವಿನ ಆಡಿಯೋ ಕ್ಲಿಫ್ ಗುದ್ದಾಟಕ್ಕೂ ಮಹತ್ವ ನೀಡಲಾಗಿದೆ.
ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ
ಚಿತ್ರಗಳು, ಗ್ರಾಫಿಕ್ಸ್, ಇನ್ಫೋಗ್ರಾಫಿಕ್ಸ್ಗಳು, ವ್ಯಂಗ್ಯ ಚಿತ್ರಗಳು, ಸಂಪಾದಕೀಯ ಹೀಗೆ ಎಲ್ಲವೂ ಬಜೆಟ್ ಮಯವಾಗಿವೆ. ಯಾವ ದಿನಪತ್ರಿಕೆ ಬಜೆಟ್ ಅನ್ನು ಹೇಗೆ ಕವರ್ ಮಾಡಿದೆ ಎಂಬುದನ್ನು ಮುಂದೆ ಓದಿ.
'ಸರ್ವರಿಗೂ ನೈವೇದ್ಯ'
'ಸರ್ವರಿಗೂ ನೈವೇದ್ಯ' ತಲೆಬರಹದಡಿ ವಿಜಯಕರ್ನಾಟಕವು ಬಜೆಟ್ ವರದಿಗಳನ್ನು ಪ್ರಕಟಿಸಿದೆ. ಎಲ್ಲರಿಗೂ ಇಷ್ಟಿಷ್ಟು ಎಂಬ ಭಾವ ತಲೆಬರಹದಲ್ಲಿ ಕಾಣುತ್ತಿದೆ. 'ಸೀತಾರಾಮ ಕಲ್ಯಾಣ' ಸಿನಿಮಾದ ಚಿತ್ರವನ್ನು ಬಳಸಿ ಅದಕ್ಕೆ ಕುಮಾರಸ್ವಾಮಿ ಮುಖ ಇಟ್ಟಿರುವುದು ನಗು ತರಿಸುತ್ತದೆ. ವಿಕೆಯು ಬಜೆಟ್ಗಾಗಿ ಮೊದಲ ಪುಟ ಸೇರಿ ಆರು ಪುಟವನ್ನು ಮೀಸಲಿಟ್ಟಿದೆ.
ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ
'ಮತಫಲಸಿಗೆ ಕುಮಾರ ಬಿತ್ತನೆ'
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದಾರೆ ಎಂಬರ್ಥ ಧ್ವನಿಸುವ 'ಮತಫಸಲಿಗೆ ಕುಮಾರ ಬಿತ್ತನೆ' ಎಂಬ ತಲೆಬರಹ ನೀಡಿ ಬಜೆಟ್ ಕುರಿತು ವಿಸ್ತೃತ ವರದಿ ಪ್ರಕಟಿಸಿದೆ 'ಪ್ರಜಾವಾಣಿ'. ಮುಖಪುಟ ಸೇರಿ ಏಳು ಪುಟಗಳಲ್ಲಿ ಬಜೆಟ್ ನ ಪೂರ್ಣ ಮಾಹಿತಿಯನ್ನು ನೀಡಿದೆ. ಇನ್ಫೋಗ್ರಾಫಿಕ್ಸ್, ಜನಾಭಿಪ್ರಾಯ, ಸೂಕ್ತ ಚಿತ್ರಗಳು ಗಮನ ಸೆಳೆಯುತ್ತಿವೆ.
ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ?
'ನೇಗಿಲ ಯೋಗಿಗೆ ಮೊದಲ ಬೋಗಿ'
ಕುಮಾರಸ್ವಾಮಿ ಬಜೆಟ್ನಲ್ಲಿ ರೈತರಿಗೆ ಮೊದಲ ಆದ್ಯತೆ ಎಂಬುದನ್ನು ಒತ್ತಿ ಹೇಳುತ್ತಿದೆ, ವಿಜಯವಾಣಿಯ 'ನೇಗಿಲ ಯೋಗಿಗೆ ಮೊದಲ ಬೋಗಿ' ತಲೆ ಬರಹ. ಮೊದಲ ಪುಟದಲ್ಲಿ ಬಳಸಿರುವ ಕುಟುಕು ವ್ಯಂಗ್ಯ ಚಿತ್ರ ಚೆನ್ನಾಗಿದೆ. ಮೊದಲ ಪುಟದಲ್ಲಿ ಸಣ್ಣ-ಸಣ್ಣ ಪಾಯಿಂಟ್ ಮೂಲಕ ಬಜೆಟ್ನ ಅಂಕಿ-ಅಂಶ ತೆರೆದಿಡಲಾಗಿದೆ. ಮೊದಲ ಪುಟದ ಹೊರತಾಗಿ ನಾಲ್ಕು ಪುಟಗಳನ್ನು ಬಜೆಟ್ ಸುದ್ದಿಗಳಿಗೆ ಮೀಸಲಿಡಲಾಗಿದೆ.
'ಬಣ್ಣದ ತಗಡಿನ ತುತ್ತೂರಿ'
ಜನಪ್ರಿಯ ಯೋಜನೆಗಳೇ ತುಂಬಿದ ನಿರ್ದಿಷ್ಟ ಗುರಿ ಇಲ್ಲದ ಬಜೆಟ್ ಎಂಬರ್ಥ ಧ್ವನಿಸುತ್ತಿರುವ 'ಬಣ್ಣದ ತಗಡಿನ ತುತ್ತೂರಿ' ಎಂಬ ಸುಂದರ ತಲೆಬರಹ ನೀಡಿದೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ. ಮೊದಲ ಪುಟದಲ್ಲಿ ದೊಡ್ಡ ಕಾರ್ಟೂನು ಪುಟಕ್ಕೆ ಅಂದ ನೀಡಿದೆ. ಮೊದಲ ಪುಟದ ಹೊರತಾಗಿ ಮೂರು ಪುಟಗಳನ್ನುನ ಬಜೆಟ್ಗೆ ಮೀಸಲಿಟ್ಟಿದೆ.
ಕನ್ನಡ ಪ್ರಭದ ಉತ್ತಮ ಮುಖಪುಟ
ಕನ್ನಡ ಪ್ರಭ ದಿನಪತ್ರಿಕೆ ಅಂದವಾದ ಮುಖಪುಟ ಮಾಡಿದೆ. 'ಮೋದಿ ಲೆಕ್ಕಕ್ಕೆ ಕು'ಮಾರುತ್ತರ' ಎಂಬ ಶೀರ್ಷಿಕೆ ನೀಡಿ ರಾಜ್ಯ ಬಜೆಟ್ ಅನ್ನು ಕೇಂದ್ರ ಬಜೆಟ್ನೊಂದಿಗೆ ಹೋಲಿಸಿ ನೋಡಿದೆ. ಹೆಚ್ಚು ಅಕ್ಷರಗಳಿಲ್ಲದೆ ಕೇವಲ ಪಾಯಿಂಟ್ಸ್ ಮಾತ್ರವನ್ನು ಮೊದಲ ಪುಟದಲ್ಲಿ ನೀಡಿರುವುದು ಪುಟದ ಅಂದ ಹೆಚ್ಚಿಸಿದೆ. ದೊಡ್ಡ ಕಾರ್ಟೂನು ಇಡೀಯ ಬಜೆಟ್ ನ ಕತೆ ಹೇಳುತ್ತಿದೆ.
'ಸಂಸತ್ತಿಗೆ ಸವಾಲ್'
ಉದಯವಾಣಿ ದಿನಪತ್ರಿಕೆ ಸಹ ರಾಜ್ಯ ಬಜೆಟ್ ಅನ್ನು ಕೇಂದ್ರದೊಂದಿಗೆ ಹೋಲಿಸಿ ನೋಡಿ 'ಸಂಸತ್ತಿಗೆ ಸವಾಲ್' ಎಂಬ ವ್ಯಂಗ್ಯ ತಲೆಬರಹ ನೀಡಿದೆ. ಮೊದಲ ಪುಟದಲ್ಲಿ ಬಿಗ್ ಕಾರ್ಟೂನು ಪ್ರಕಟಿಸಿದೆ. ಒಟ್ಟು 11 ಪುಟಗಳನ್ನು ಬಜೆಟ್ಗಾಗಿ ಮೀಸಲಿಟ್ಟಿದ್ದು ಪ್ರತ ಪುಟದಲ್ಲೂ ಆಕರ್ಷಕ ತಲೆ ಬರಹ ನೀಡಿರುವುದು ಗಮನ ಸೆಳೆಯುತ್ತದೆ. ಚಿತ್ರಗಳು, ಕಾರ್ಟೂನುಗಳು ಚೆನ್ನಾಗಿವೆ. ವಿವರ ವರದಿಗೆ ಉದಯವಾಣಿ ಆದ್ಯತೆ ನೀಡಿದೆ.
ಕೃಷಿ ಕುಮಾರ: ಹೊಸದಿಗಂತ
ಹೊಸದಿಗಂತ ಪತ್ರಿಕೆಯು 'ಕೃಷಿ ಕುಮಾರ' ತಲೆ ಬರಹ ನೀಡಿ, ಬಜೆಟ್ನಲ್ಲಿ ಕೃಷಿಗೆ ಪ್ರಥಮ ಆದ್ಯತೆ ನೀಡಿರುವುದನ್ನು ಒತ್ತಿ ಹೇಳುತ್ತಿದೆ. ಹಸಿರು ಬಣ್ಣದ ಕುಮಾರಸ್ವಾಮಿ ಚಿತ್ರ ಪ್ರಕಟಿಸಿ, ನೀಡಿರುವ ಇನ್ಫೋಗ್ರಾಫಿಕ್ಸ್ ಸೆಳೆಯುತ್ತದೆ. ಒಟ್ಟು ಐದು ಪುಟಗಳನ್ನು ಬಜೆಟ್ಗಾಗಿ ಹೊಸ ದಿಗಂತ ಮೀಸಲಿಟ್ಟಿದೆ.
ರೈತರಿಗೆ ಹನಿ ನೀರಾವರಿ, ಇತರರಿಗೆ ಥರಾವರಿ
'ರೈತರಿಗೆ ಹನಿ ನೀರಾವರಿ, ಇತರರಿಗೆ ಥರಾವರಿ' ಎಂದು ವಿಶ್ವವಾಣಿ ತಲೆ ಬರಹ ನೀಡಿದೆ. ರೈತರಿಗೆ ಕಡಿಮೆ ಧಕ್ಕಿದೆ ಎಂಬ ಅರ್ಥ ತಲೆ ಬರಹದಲ್ಲಿ ಧ್ವನಿಸುತ್ತಿದೆ. ಆದರೆ ವಾಸ್ತವವಾಗಿ ರೈತರಿಗೆ ಹೆಚ್ಚು ಸಿಕ್ಕಿದೆ. ಹಲವು ಪುಟಗಳನ್ನು ಬಜೆಟ್ಗಾಗಿ ವಿಶ್ವವಾಣಿ ಮೀಸಲಿಟ್ಟಿದೆ. ಗ್ರಾಫಿಕ್ಸ್ಗೆ ಹೆಚ್ಚಿನ ಆದ್ಯತೆ ನೀಡಿದೆ.