ಬಜೆಟ್ 2016 : ಕುಡುಕರ ಜೇಬಿಗೆ ಕತ್ತರಿ ಗ್ಯಾರಂಟಿ
ಬೆಂಗಳೂರು, ಮಾರ್ಚ್ 18 : ಅಬಕಾರಿ ಇಲಾಖೆಗೆ 16,510 ಕೋಟಿ ರು.ಗಳ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಂಡು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ, ಮಾರ್ಚ್ 18ರಂದು ಬಜೆಟ್ ಮಂಡಿಸಿದ್ದಾರೆ.
ಮದ್ಯ, ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದರಿಂದ ಕುಡುಕರ ಜೇಬಿಗೆ ಕತ್ತರಿ ಬೀಳುವುದು ಖಚಿತ. ಅಬಕಾರಿ ಇಲಾಖೆಯಿಂದ ಯಾವ ರೀತಿ ಸಂಪನ್ಮೂಲ ಕ್ರೋಢೀಕರಣ ಮಾಡುತ್ತಿದ್ದಾರೆ, ಮದ್ಯ ತಯಾರಿಕಾ ಸಂಸ್ಥೆಗಳಿಗೆ, ದ್ರಾಕ್ಷಿ ಬೆಳೆಗಾರರಿಗೆ ಯಾವ ರೀತಿಯ ಉತ್ತೇಜನ ನೀಡಲಾಗಿದೆ ಎಂಬುದರ ವಿವರ ಕೆಳಗಿದೆ. [ಕರ್ನಾಟಕ ಬಜೆಟ್ 2016 : ಮುಖ್ಯಾಂಶಗಳು]
ಅಧಿಕ ಸಂಪನ್ಮೂಲ ಕ್ರೋಢೀಕರಣ ಕ್ರಮಗಳು:
* ಮದ್ಯದ ಮೇಲಿನ ಅಬಕಾರಿ ಸುಂಕ ಹಾಲಿ ಇರುವ ರು.45ರಿಂದ ರು.50ಕ್ಕೆ ಹೆಚ್ಚಳ.
* ಬಿಯರ್ ಮೇಲಿನ ಅಬಕಾರಿ ಸುಂಕ ಹಾಲಿ ಇರುವ ರು.5ರಿಂದ ರು.10ಕ್ಕೆ ಹೆಚ್ಚಳ.
* ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳಲ್ಲಿ ಶೇ.4ರಿಂದ ಶೇ.12ರವರೆಗೆ ವಿವಿಧ 17 ಸ್ಲ್ಯಾಬ್ಗಳ ಮೇಲೆ ಏರಿಕೆ. [ಯಾವುದೇ ಏರಿಕೆ, ಯಾವುದು ಇಳಿಕೆ]
* ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.135ರಿಂದ ಶೇ.150ಕ್ಕೆ ಏರಿಕೆ.
* ಸ್ಪಿರಿಟ್ (ಎಥನಾಲ್ ಹೊರತುಪಡಿಸಿ) ರಫ್ತಿನ ಮೇಲೆ ಪ್ರತಿ ಲೀಟರ್ಗೆ ರು.2ರಂತೆ ಮತ್ತು ಆಮದಿನ ಮೇಲೆ ಪ್ರತಿ ಲೀಟರ್ಗೆ ರು.1ರಂತೆ ಆಡಳಿತಾತ್ಮಕ ಶುಲ್ಕ.
* ಮದ್ಯ ಮಾರಾಟದ ಸನ್ನದು ಶುಲ್ಕಗಳ ಅಂತರಗಳನ್ನು ಕಡಿಮೆಗೊಳಿಸಿ ಅದನ್ನು ಶೇ.25ರಷ್ಟು ಹೆಚ್ಚಳ.
ಸುಧಾರಣಾ ಕ್ರಮಗಳು
* ದ್ರಾಕ್ಷಿ ಬೆಳೆಗಾರರ ಕ್ಷೇಮಾಭಿವೃದ್ಧಿ ಮತ್ತು ದ್ರಾಕ್ಷಿರಸ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ಗ್ರೇಪ್ ಸ್ಪಿರಿಟ್ ಅಥವಾ ಪರಿಶುದ್ಧ ಹಣ್ಣಿನ ಬ್ರಾಂಡಿ ಮಾತ್ರ ಬಳಸಿ ವೈನ್ fortificationಗೊಳಿಸಲು ಅವಕಾಶ.
* ಮದ್ಯ ಉತ್ಪಾದಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜವಾಬ್ದಾರಿಯುತ ಮದ್ಯಸೇವನೆ ಪರಿಕಲ್ಪನೆಯನ್ನು ವ್ಯಾಪಕವಾಗಿ ಪ್ರಚಾರಗೊಳಿಸುವ ಸಲುವಾಗಿ 10 ಕೋಟಿ ರು.ಗಳ ಅನುದಾನ.
ಪರಿಹಾರ
* ಜುಲೈ 1ರಿಂದ ಜಾರಿಗೆ ಬರುವಂತೆ ಮದ್ಯದ ಎಲ್ಲಾ 17 ಸ್ಲ್ಯಾಬ್ಗಳ ಘೋಷಿತ ಬೆಲೆಯಲ್ಲಿ ತಲಾ ರು.35ರಂತೆ ಹೆಚ್ಚಳ.