ಗೌರಿ ಹತ್ಯೆ ಹಿಂದೆ ಸಂಘಪರಿವಾರ ಇದೆ ಎಂದಿದ್ದ ಗುಹಾಗೆ ಬಿಜೆಪಿ ನೋಟಿಸ್
ಬೆಂಗಳೂರು, ಸೆಪ್ಟೆಂಬರ್ 11: ಲೇಖಕ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಕಾನೂನು ತೊಡಕಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಸಂಘ ಪರಿವಾರ ಇದೆ ಎಂದು ಹೇಳಿಕೆ ನೀಡಿದ್ದ ಗುಹಾ ವಿರುದ್ಧ ಬಿಜೆಪಿ ಯುವ ಮೋರ್ಚಾದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕರುಣಾಕರ ಖಾಸಲೆ ನೋಟಿಸ್ ಕಳುಹಿಸಿದ್ದಾರೆ.
'ಗೌರಿ ಗತಿಯೇ ನಿಮಗೂ ಬರಲಿದೆ'ಎಂದಿದ್ದ ಹಿಂದು ನಾಯಕಿ ಮೇಲೆ ಕೇಸ್
ಈ ನೋಟಿಸ್ ತಲುಪಿದ ಮೂರು ದಿನದೊಳಗೆ ರಾಮಚಂದ್ರ ಗುಹಾ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ದಾವೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಕ್ರಾಲ್.ಇನ್ ಗೆ ಗುಹಾ ನೀಡಿದ ಸಂದರ್ಶನದಲ್ಲಿ, ದಾಭೋಲ್ಕರ್, ಪನ್ಸಾರೆ ಹಾಗೂ ಕಲ್ಬುರ್ಗಿ ಅವರನ್ನು ಕೊಂದ ಅದೇ ಸಂಘ ಪರಿವಾರದವರೇ ಗೌರಿ ಲಂಕೇಶ್ ಅವರನ್ನೂ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ದ್ವೇಷ ಹಾಗೂ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸಿದೆ. ಇದನ್ನೇ ಕೆಲವು ಟಿವಿ ಚಾನಲ್ ಗಳು ಹಬ್ಬುತ್ತಿವೆ. ಅದರ ವಿರುದ್ಧವಾಗಿ ಧ್ವನಿ ಎತ್ತುವವರನ್ನು ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದರು.
ಕಾಂಗ್ರೆಸ್ ಕತ್ತಲಿಗೆ ನಿತಿಶ್ ಬೆಳಕು ಎಂದ ರಾಮಚಂದ್ರ ಗುಹಾ
ಇದೇ ರೀತಿಯ ಹೇಳಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ನಲ್ಲಿ ಬರೆದ ಲೇಖನದಲ್ಲೂ ಪುನರಾವರ್ತಿಸಿದ್ದಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಬಿಜೆಪಿಯ ವರ್ಚಸ್ಸಿಗೆ, ಗೌರವಕ್ಕೆ ಕುಂದುಂಟು ಮಾಡುವ ಕಾರಣಕ್ಕೆ ರಾಮಚಂದ್ರ ಗುಹಾ ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಗೋವಿಂದ್ ಪನ್ಸಾರೆ, ನರೇಂದ್ರ ಧಾಬೋಲ್ಕರ್, ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯ ತನಿಖೆಯಲ್ಲಿ ರಾಮಚಂದ್ರ ಗುಹಾ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.
ಸೆಪ್ಟೆಂಬರ್ ಐದರಂದು ಬೆಂಗಳೂರಿನ ನಿವಾಸದ ಎದುರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿತ್ತು. ಈ ವಿಚಾರವಾಗಿ ನಕ್ಸಲೀಯರ ಕೈವಾಡ ಹಾಗೂ ಬಲಪಂಥೀಯ ಕಾರ್ಯಕರ್ತರ ಪಾಲ್ಗೊಂಡ ಬಗ್ಗೆ ಗುಮಾನಿಗಳಿದ್ದು, ಎರಡೂ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.