ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ದಿನಾಂಕ ಘೋಷಣೆ, ಇವೆ ಕೆಲವು ಬದಲಾವಣೆ
Recommended Video
ಬೆಂಗಳೂರು, ಮಾರ್ಚ್ 14: ಇನ್ನೆರಡು ದಿನಗಳಲ್ಲಿ (ಮಾರ್ಚ್ 16ರಂದು) ರಾಜ್ಯ ಬಿಜೆಪಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಎಲ್ಲಾ 16 ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಕಲಬುರಗಿಯಿಂದ ಉಮೇಶ್ ಜಾಧವ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದನ್ನು ಸಹ ಖಚಿತಪಡಿಸಿದ್ದಾರೆ.
ಲೋಕ ಸಮರ 2019: ಬಿಜೆಪಿ ಅಭ್ಯರ್ಥಿಗಳ ಅಂತಿಮ ಸಂಭಾವ್ಯ ಪಟ್ಟಿ
ಮಾರ್ಚ್ 16ರಂದು 20-22 ಕ್ಷೇತ್ರಗಳಿಗಷ್ಟೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಉಳಿದ ಕ್ಷೇತ್ರಗಳಿಗೆ ಕೆಲವೇ ದಿನಗಳಲ್ಲಿ ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಾಳೆ (ಮಾರ್ಚ್ 15) ರಂದು ರಾಜ್ಯ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿ ಅಂತಿಮ ಪಟ್ಟಿ ತಯಾರು ಮಾಡಲಾಗುತ್ತದೆ. ಮಾರ್ಚ್ 16 ರಂದು ಪಟ್ಟಿಗೆ ಹೈಕಮಾಂಡ್ ಅನುಮೋದನೆ ಪಡೆಯಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಾಗಿ ಹುಡುಕಾಟ
ರಾಯಚೂರು, ಬಳ್ಳಾರಿ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ ಯಡಿಯೂರಪ್ಪ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಅನಂತ್ಕುಮಾರ್ ಅವರ ಸ್ಪರ್ಧೆ ಬಹುತೇಕ ಖಚಿತ ಎಂದರು.
ಮುಖಂಡರ ಅಸಮಾಧಾನ ಶಮನ
ಕ್ಷೇತ್ರದ ಸ್ಥಳೀಯ ಮುಖಂಡರ ನಡುವಿನ ಅಸಮಾಧಾನಗಳನ್ನು ಶಮನ ಮಾಡಿ ಆ ನಂತರ ಪಟ್ಟಿ ಬಿಡುಗಡೆ ಮಾಡುವ ಯೋಚನೆ ಇದ್ದ ಕಾರಣ ಮಾರ್ಚ್ 16 ಕ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದೆರಡು ದಿನ ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆಗಳು ನಡೆದಿವೆ.
ಅಭ್ಯರ್ಥಿಗಳ ಆಯ್ಕೆ ಕಸರತ್ತು, ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆ
20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ
ಯಡಿಯೂರಪ್ಪ ಅವರೇ ಹೆಚ್ಚಿನ ಕಾಳಜಿ ವಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಯಡಿಯೂರಪ್ಪ ಅವರು ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭಾರಿ ಪ್ರಚಾರ ಅಭಿಯಾನವನ್ನೂ ಆಯೋಜಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಮುಕ್ತಾಯವಾಗಿದ್ದು ಅವರೂ ಸಹ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಜೆಡಿಎಸ್ ಈಗಾಗಲೇ ಕೆಲವು ಅಭ್ಯರ್ಥಿಗಳ ಹೆಸರನ್ನು ಅನಧಿಕೃತವಾಗಿ ಘೋಷಿಸಿ ಆಗಿದೆ.