ಪಕ್ಷದಲ್ಲಿ ಯಡಿಯೂರಪ್ಪ ಪ್ರಭಾವ ಕುಗ್ಗಿಸಲು ಕಟೀಲ್ ತಂತ್ರ?
ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ಬಿಜೆಪಿಯ ಉಪಾಧ್ಯಕ್ಷರನ್ನಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಮತ್ತು ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಅವರನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಆದರೆ ಈ ನೇಮಕ ಬಿಜೆಪಿಯಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಿರ್ಮಲ್ ಕುಮಾರ್ ಸುರಾನಾ ಮತ್ತು ಭಾನುಪ್ರಕಾಶ್ ಇಬ್ಬರೂ ಉಪಾಧ್ಯಕ್ಷರಾಗಿದ್ದರು. ಪಕ್ಷದ ಕೆಲವು ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರನ್ನು ಬದಲಿಸುವ ವಿಚಾರದಲ್ಲಿ ವಿಳಂಬ ಆಗುತ್ತಿದೆ ಎಂದು ಇಬ್ಬರೂ ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. 2017ರಲ್ಲಿ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು. ಬಳಿಕ ಉಪಾಧ್ಯಕ್ಷ ಸ್ಥಾನ ಮರಳಿ ನೀಡಿದರೂ ಅದನ್ನು ಭಾನುಪ್ರಕಾಶ್ ಒಪ್ಪಿಕೊಂಡಿರಲಿಲ್ಲ.
ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!
ಆಗಿನ ಘಟನೆ ಪಕ್ಷದಲ್ಲಿನ ಆಂತರಿಕ ಕಿತ್ತಾಟ ಜೋರಾಗಲು ಕಾರಣವಾಗಿತ್ತು. ಯಡಿಯೂರಪ್ಪ ಅವರ ಬಣದಲ್ಲಿದ್ದ ರೇಣುಕಾಚಾರ್ಯ ಮತ್ತು ಗೋ. ಮಧುಸೂದನ್ ಅವರನ್ನು ವಕ್ತಾರ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಆಗ ಯಡಿಯೂರಪ್ಪ ಬಣ ಮತ್ತು ಬಿಎಲ್ ಸಂತೋಷ್ ಬಣಗಳ ಸಂಘರ್ಷ ತಾರಕಕ್ಕೇರಿತ್ತು. ರಾಮ್ಲಾಲ್ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದರು.
ಯಡಿಯೂರಪ್ಪ ವಿರುದ್ಧ ಬಣ ಬಲ
ಈಗ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದ ಇಬ್ಬರು ನಾಯಕರನ್ನು ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಉಪಾಧ್ಯಕ್ಷರನ್ನಾಗಿ ಪುನಃ ನೇಮಿಸಿದ್ದಾರೆ. ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಸಮಿತಿ ನೇಮಿಸಿದ್ದರ ವಿರುದ್ಧ ಕಟೀಲ್ ಅವರು ಹೇಳಿಕೆ ನೀಡಿದ್ದರು. ಈ ನಡೆಗಳು ಪಕ್ಷದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬಣವನ್ನು ಬಲಪಡಿಸಲಾಗುತ್ತಿದೆ ಎಂಬ ಅಭಿಪ್ರಾಯ ಹುಟ್ಟುಹಾಕಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಬೆಂಬಲಿಗರು ಕಟೀಲ್ ಅವರ ನಿರ್ಧಾರವನ್ನು ಖಂಡಿಸಿದ್ದಾರೆ.
ಬಿಎಲ್ ಸಂತೋಷ್ ಮೇಲುಗೈ
ಯಡಿಯೂರಪ್ಪ ಮತ್ತು ಕಟೀಲ್ ಅವರ ನಡುವೆ ಉತ್ತಮ ಬಾಂಧವ್ಯ ಇಲ್ಲವೆನ್ನುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಯಡಿಯೂರಪ್ಪ ಬಯಸಿದ್ದರು. ಆದರೆ, ಬಿಎಲ್ ಸಂತೋಷ್ ಅವರ ಪ್ರಭಾವದಿಂದ ಕಟೀಲ್ ಅವರನ್ನು ನೇಮಿಸಲಾಗಿದೆ ಎನ್ನಲಾಗಿತ್ತು. ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನ ಬಿಎಲ್ ಸಂತೋಷ್ ಅವರ ಬಣದ ಕಟೀಲ್, ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನ ಸೇರಿದಂತೆ 30 ಮುಖಂಡರು ಅಂಡಮಾನ್ ಪ್ರವಾಸಕ್ಕೆ ತೆರಳಿದ್ದರು.
ಯಡಿಯೂರಪ್ಪ ಮುಂದೆ 'ಪವರ್' ತೋರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್
ಉತ್ತರ ಕರ್ನಾಟಕದಲ್ಲಿ ಪಕ್ಷ ಉಳಿಯೊಲ್ಲ!
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಅವರು ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಅವರನ್ನು ಹೀಗೆ ನಿರ್ಲಕ್ಷಿಸಿದರೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಎಚ್ಚರಿಕೆ ನೀಡಿರುವ ಅವರು, ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಆಡಳಿತಾತ್ಮಕ ವಿಚಾರಗಳಲ್ಲಿ ಕಡೆಗಣಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಅವರಿಂದಾಗಿ ಬಿಜೆಪಿ
ನಳಿನ್ ಕುಮಾರ್ ಕಟೀಲ್ ಅವರೇ, ಎಂಥ ಮೋದಿ, ಅಮಿತ್ ಶಾ ಇದ್ದರೂ ದಕ್ಷಿಣ ಭಾರತದಲ್ಲಿ ಇವತ್ತಿಗೂ ಠೇವಣಿ ಸಿಗದಂತಹ ಪರಿಸ್ಥಿತಿಯಲ್ಲಿದೆ ಬಿಜೆಪಿ. ಆದರೆ ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ಬಲಿಷ್ಠವಾಗಿದೆ ಅಂದ್ರೆ ಅದಕ್ಕೆ ಮೂಲ ಕಾರಣ ಬಿಎಸ್ ಯಡಿಯೂರಪ್ಪ. ಬಿಎಲ್ ಸಂತೋಷ್ ಅವರ ಮಾತು ಕೇಳಿ ಪಕ್ಷವನ್ನು ನಿರ್ನಾಮ ಮಾಡುವ ಕೆಲಸವನ್ನು ಆದಷ್ಟು ಬೇಗ ಬಿಟ್ಟುಬಿಡಿ- ದಿನಕರ್ ಶೆಟ್ಟಿ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ ಸಂದರ್ಭ ಇಬ್ಬರು ಶಾಸಕರ ಗೈರು; ಬಿಜೆಪಿ ಭಿನ್ನಮತ ಸ್ಫೋಟ
ಚುನಾವಣೆ ಫಲಿತಾಂಶ ನೆನಪಿಸಿಕೊಳ್ಳಿ
ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್ ಅವರೇ ನಿಮ್ಮ ಕುತೂಹಲ ಕುಟಿಲ ತಂತ್ರಗಳನ್ನು ಮಾಡಿ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಲು ಹೋದರೇ ಇದರ ಫಲ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತದೆ. ಸುಮ್ಮನೆ 2013 ಚುನಾವಣೆಯಲ್ಲಿನ ಫಲಿತಾಂಶ ಏನಾಗಿತ್ತೆಂದು ತಿಳಿಯುವುದು ಉತ್ತಮ- ಬಸವರಾಜ್ ಎಂ ಸಜ್ಜನ್
ಆರಾಮ ಕುರ್ಚಿ ನಾಯಕರು
ಆರಾಮಕುರ್ಚಿ ನಾಯಕರಿಗೆ ಪದವಿ ಕೊಟ್ಟರೆ ಪಕ್ಷ ಬೆಳೆಯುವುದಿಲ್ಲ. ಕಷ್ಟ ಪಟ್ಟು ಪಕ್ಷವನ್ನು ಬೆಳೆಸುವ ಯುವ ನಾಯಕರಾದ ಹರೀಶ್ ಪೂಂಜಾ, ಪ್ರೀತಂ ಗೌಡ ತರಹದವರನ್ನು ಮುನ್ನೆಲೆಗೆ ತನ್ನಿ. ಯಾರೋ ದೆಹಲಿಯ ನಾಯಕರನ್ನು ಮೆಚ್ಚಿಸಲು ಪಕ್ಷವನ್ನು ಬಲಿ ಕೊಡಬಾರದು. ಸಹಸ್ರಾರು ಕಾರ್ಯಕರ್ತರ ತ್ಯಾಗ ಬಲಿದಾನದ ಮೂಲಕ ಪಕ್ಷ ಕಟ್ಟಲ್ಪಟ್ಟಿದೆ- ಪ್ರಶಾಂತ್ ಜಿ.ವಿ