ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆಯ ಸುದ್ದಿಗೆ ತೆರೆ ಎಳೆದ ಬಿಜೆಪಿ ವರಿಷ್ಠರು
ಬೆಂಗಳೂರು, ಫೆ 5: ಪಕ್ಷಕ್ಕೆ ಬೇರಿಲ್ಲದ ಕೆ.ಆರ್.ಪೇಟೆ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಪಕ್ಷದಲ್ಲಿ ಬೈಎಲೆಕ್ಷನ್ ಸ್ಪೆಷಲಿಸ್ಟ್ ಎಂದೇ ಹೆಸರು ಪಡೆದಿದ್ದ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ವಿಜಯೇಂದ್ರ ಮತ್ತು ಖುದ್ದು ಸಿಎಂ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದರೂ, ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಬೆಳವಣಿಗೆಯಿಂದಾಗಿ ಮತ್ತೆಮತ್ತೆ ಆ ಸುದ್ದಿ ಮುನ್ನಲೆಗೆ ಬರುತ್ತಿತ್ತು.
ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಉಸ್ತುವಾರಿಗಳ ನೇಮಕ
ಉಪಚುನಾವಣೆಯ ನಂತರ ವಿಜಯೇಂದ್ರ ರಾಜಕೀಯವಾಗಿ ಬೆಳೆಯುತ್ತಿದ್ದ ರೀತಿ ಬಿಜೆಪಿಯವರಿಗೇ ಹೊಟ್ಟೆ ಉರಿಸುವಂತಿತ್ತು. ಜೊತೆಗೆ, ಸರಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ದೂರು ವರಿಷ್ಠರ ಬಳಿಗೆ ಹೋಗಿತ್ತು.
ಬಸವಕಲ್ಯಾಣದಲ್ಲಿ ಕಾರ್ಯಕರ್ತರ ಮತ್ತು ಸ್ಥಳೀಯ ಮುಖಂಡರ ಸಭೆಯನ್ನು ವಿಜಯೇಂದ್ರ ನಡೆಸಿದ್ದರು. ಇದರಿಂದಾಗಿ, ಅವರು ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿತ್ತು. ಈಗ ವರಿಷ್ಠರು ಆ ಸುದ್ದಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ ರಾವ್
ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ ರಾವ್ ನಿಧನದ ನಂತರ ತೆರವಾಗಿರುವ ಬಸವಕಲ್ಯಾಣ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. ಇಲ್ಲಿ ಇದುವರೆಗೆ ಬಿಜೆಪಿ ಗೆದ್ದದ್ದು ಒಂದೇ ಬಾರಿ. ಮರಾಠಿ ಪ್ರಾಬಲ್ಯವಿರುವ ಕ್ಷೇತ್ರವಾಗಿರುವುದರಿಂದ ಮರಾಠ ಅಭಿವೃದ್ದಿ ನಿಗಮವನ್ನು ಬಿಎಸ್ವೈ ಘೋಷಿಸಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು.
ಬೆಳಗಾವಿ ಲೋಕಸಭಾ ಉಪಚುನಾವಣೆ
ಇತ್ತೀಚೆಗೆ ಹಲವು ಬಾರಿ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದರು. ಇದು, ಉಪಚುನಾವಣೆಯಲ್ಲಿ ಇವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿತ್ತು. ಈಗ, ಉಪಚುನಾವಣೆ ನಡೆಯುತ್ತಿರುವ ಮಸ್ಕಿ, ಬಸವಕಲ್ಯಾಣ ಅಸೆಂಬ್ಲಿ ಮತ್ತು ಬೆಳಗಾವಿ ಲೋಕಸಭಾ ಚುನಾವಣೆಯ ಪೈಕಿ, ಒಂದು ಕ್ಷೇತ್ರಕ್ಕೆ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಮಸ್ಕಿ ವಿಧಾನಸಭಾ ಉಪಚುನಾವಣೆಗೆ ವಿಜಯೇಂದ್ರ ಉಸ್ತುವಾರಿ
ಬಿಜೆಪಿ ವರಿಷ್ಠರು ಮಸ್ಕಿ ವಿಧಾನಸಭಾ ಉಪಚುನಾವಣೆಗೆ ವಿಜಯೇಂದ್ರ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಆ ಮೂಲಕ, ಬಸವಕಲ್ಯಾಣದಿಂದ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಎಲ್ಲಾ ಸುದ್ದಿಗೆ ತೆರೆಬಿದ್ದಂತಾಗಿದೆ. ಇವರ ಜೊತೆಗೆ, ಶ್ರೀರಾಮುಲು, ರವಿಕುಮಾರ್, ನೇಮಿರಾಜ್ ನಾಯಕ್, ರಾಜೂ ಗೌಡ ಮತ್ತು ಶಿವರಾಜ್ ಪಾಟೀಲ್ ಅವರನ್ನೂ ಮಸ್ಕಿಗೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
Recommended Video
ಬಸವಕಲ್ಯಾಣಕ್ಕೆ ಬೇರೆ ಉಸ್ತುವಾರಿ
ಬಸವಕಲ್ಯಾಣದಲ್ಲಿ ಪಕ್ಷದ ಜಯಕ್ಕೆ ಗ್ರೌಂಡ್ ವರ್ಕ್ ಮಾಡುತ್ತಿದ್ದ ವಿಜಯೇಂದ್ರಗೆ ಅಲ್ಲಿನ ಉಸ್ತುವಾರಿಯನ್ನೂ ನೀಡದಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಬಸವಕಲ್ಯಾಣಕ್ಕೆ ಡಿಸಿಎಂ ಲಕ್ಷ್ಮಣ ಸವದಿ, ಸೋಮಣ್ಣ, ಬಸವರಾಜ ಬೊಮ್ಮಾಯಿ ಮುಂತಾದವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.