ರಮೇಶ್ ಜಾರಕಿಹೊಳಿ ಹೆಗಲ ಮೇಲೆ ಬಿಜೆಪಿ ಬಂದೂಕು, ಮೈತ್ರಿಗೆ ಗುರಿ
ಕರ್ನಾಟಕ ಬಿಜೆಪಿ ಮುಂಚಿನಂತಿಲ್ಲ, ಬಿಜೆಪಿ ನಾಯಕರು ಮುಂಚಿನಂತೆ ಅಧಿಕಾರಕ್ಕೆ ಆತುರ ತೋರುತ್ತಿಲ್ಲ ಆದರೆ ಬತ್ತಳಿಕೆಯಲ್ಲಿ 105 ಶಾಸಕರಿದ್ದರೂ ಸಹ ಸಾವಧಾನದಿಂದ ಹೆಜ್ಜೆ ಇಡುತ್ತಿದ್ದಾರೆ. ಅವರ ಸಾವಧಾನ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ.
ಚುನಾವಣೆ ಮುಗಿದು ಫಲಿತಾಂಶ ಬಂದಾಗ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಸರ್ಕಾರ ರಚಿಸಿಯೇ ತೀರಿಬಿಡಬೇಕೆಂದು ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು, ಸ್ವತಃ ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ಕಾಂಗ್ರೆಸ್ನ ಕೆಲವು ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದರು. ಯಡಿಯೂರಪ್ಪ ಅವರು ಸಹ ಇದೇ ಕಾರ್ಯ ಮಾಡಿದ್ದರು. ಆ ನಂತರ ಕಾಂಗ್ರೆಸ್ನವರು ಆಡಿಯೋ ಲೀಕ್ ಮಾಡಿ ಬಿಜೆಪಿಯ ಮಾನಹಾನಿಗೆ ಯತ್ನಿಸಿದ್ದರು.
ರಿವರ್ಸ್ ಆಪರೇಷನ್ ಮಾಡೋದಾದರೆ ಮಾಡಲಿ: ಯಡಿಯೂರಪ್ಪ ಸವಾಲು
ಆ ನಂತರವೂ ರಾಜ್ಯ ಬಿಜೆಪಿ ನಾಯಕರು ವಿಶೇಷವಾಗಿ ಯಡಿಯೂರಪ್ಪ ಅವರೇ ಸುಮ್ಮನೆ ಕೂರಲಿಲ್ಲ, ಅವರ ಬೆನ್ನಿಗಿದ್ದ ಶಾಸಕರ ಸಂಖ್ಯೆ ಮತ್ತು ಕೇಂದ್ರದಲ್ಲಿನ ತಮ್ಮದೇ ಸರ್ಕಾರದ ಬಲ ಅವರನ್ನು ಸುಮ್ಮನೆ ಕೂರುವಂತೆ ಮಾಡಲಿಲ್ಲ. ಅವರೇ ಖುದ್ದಾಗಿ ಶಾಸಕರನ್ನು ಭೇಟಿಯಾಗುವ ಯತ್ನ ನಡೆಸಿದರು ಆದರೆ ಕುಮಾರಸ್ವಾಮಿ ಅವರು ತೋಡಿದ್ದ ಖೆಡ್ಡಕ್ಕೆ ಬಿದ್ದು ರಾಷ್ಟ್ರಮಟ್ಟದಲ್ಲಿ ಅವಮಾನ ಎದುರಿಸಬೇಕಾಯಿತು.
ಪೂರ್ಣ ಬದಲಾದ ಯಡಿಯೂರಪ್ಪ ವರಸೆ
ಆದರೆ ಇದೆಲ್ಲದರ ನಂತರ ರಾಜ್ಯ ಬಿಜೆಪಿ ತನ್ನ ವಿಧಾನವನ್ನು ಬದಲಾಯಿಸಿಕೊಂಡಿತು, ಕೆಲವು ತಿಂಗಳ ಹಿಂದೆ ದೆಹಲಿಗೆ ಹೋಗಿ ಬಂದ ಬಿಜೆಪಿ ನಾಯಕ ಯಡಿಯೂರಪ್ಪ ವಿಮಾನ ನಿಲ್ದಾಣದಲ್ಲಿಯೇ ಸ್ಪಷ್ಟ ಮಾಡಿಬಿಟ್ಟರು, ನಾವು ಸರ್ಕಾರ ಬೀಳಿಸುವ ಸಣ್ಣ ಪ್ರಯತ್ನಕ್ಕೂ ಕೈ ಹಾಕುವುದಿಲ್ಲವೆಂದು, ರಾಜ್ಯ ಬಿಜೆಪಿಯ ಕುದಿಬಿಂದು ಈಶ್ವರಪ್ಪ ಅವರಂತಹವರೇ ಈ ನಾವು ಸರ್ಕಾರ ಬೀಳಿಸಲ್ಲ ಎಂದು ಕೂತುಬಿಟ್ಟರು.
'ಸನ್ಯಾಸಿಗಳಲ್ಲ' ಎಂದಿದ್ದ ಯಡಿಯೂರಪ್ಪ
ಆದರೆ ಹಾಗೆಂದು ಬಿಜೆಪಿ ಸುಮ್ಮನೇ ಕೂತಿಲ್ಲ, ಯಡಿಯೂರಪ್ಪ ಅವರೇ ಹೇಳಿರುವಂತೆ ಅವರೇನು 'ಸನ್ಯಾಸಿಗಳಲ್ಲ' ಆದರೆ ಈ ಬಾರಿ ಬಿಜೆಪಿಯು ಅತ್ಯಂತ ಚಾಲಾಕಿಯಿಂದ ಹೆಜ್ಜೆ ಇಟ್ಟಿದೆ, ಹಾವು ಸಾಯಿಸಲು ಕೋಲನ್ನು ಬೇರೆಯವರ ಕೈಗೆ ಕೊಟ್ಟಿದೆ. ಬಿಜೆಪಿ ಪಾಲಿಗೆ ಹಾವು ಸಾಯುತ್ತದೆಯಾದರೂ ದೋಷ ಅವರಿಗೆ ಅವರಿಗೆ ಬರುವುದಿಲ್ಲ! ಹೌದು, ಈ ಕೆಲಸವನ್ನು ಮಾಡಲು ಬಿಜೆಪಿ ಯ್ದುಕೊಂಡಿರುವುದು ರಮೇಶ್ ಜಾರಕಿಹೊಳಿ ಅವರನ್ನು.
ರಮೇಶ್ ಜಾರಕಿಹೊಳಿ ದೆಹಲಿಗೆ, ರಾಜ್ಯ ರಾಜಕಾರಣ ಕ್ಲೈಮ್ಯಾಕ್ಸ್ಗೆ?
ರಮೇಶ್ ಹೆಗಲ ಮೇಲೆ ಬಿಜೆಪಿ ಬಂದೂಕು
ರಮೇಶ್ ಜಾರಕಿಹೊಳಿ ಅವರ ಹೆಗಲ ಮೇಲೆ ಬಂದೂಕು ಇರಿಸಿರುವ ಬಿಜೆಪಿ ಮೈತ್ರಿ ಸರ್ಕಾರದತ್ತ ಗುರಿ ಇಟ್ಟಿದೆ. ಬಿಜೆಪಿ ಹೊರಿಸಿರುವ ಜವಾಬ್ದಾರಿಯನ್ನು ರಮೇಶ್ ಜಾರಕಿಹೊಳಿ ಸಹ ನಯ ನಾಜೂಕಿನಿಂದ ಮುಗಿಸುತ್ತಿದ್ದಾರೆ. ಹೇಳಲಾಗುತ್ತಿರುವಂತೆ ರಮೇಶ್ ಜಾರಕಿಹೊಳಿಗೆ ದೆಹಲಿಯ ಕೇಸರಿ ನಾಯಕರ ನೇರ ಸಂಪರ್ಕವೂ ಪ್ರಾಪ್ತಿಯಾಗಿದೆಯಂತೆ. ಅವರಿಗೆ ವರದಿಗಳನ್ನು ನೀಡುತ್ತಿದ್ದಾರಂತೆ ರಮೇಶ್ ಜಾರಕಿಹೊಳಿ.
ಮುಂಬೈಗೆ ಕರೆದುಕೊಂಡು ಹೋಗಿದ್ದ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಒಮ್ಮೆ ಕೆಲವು ಆಪ್ತ ಶಾಸಕರನ್ನು ಕರೆದುಕೊಂಡು ಹೋಗಿ ಮುಂಬೈನಲ್ಲಿ ಬಿಜೆಪಿಯ ಸಖ್ಯದಲ್ಲಿ ಕೆಲ ದಿನ ಇದ್ದರು, ಆದರೆ ಆ ಬಾರಿಯ ಆಪರೇಷನ್ ಕಮಲ ಸೂಕ್ತ ರೀತಿಯಲ್ಲಿ ಆಗಲಿಲ್ಲವಾದ್ದರಿಂದ ರಮೇಶ್ ಜಾರಕಿಹೊಳಿ ಅವರ ಮೊದಲ ಪ್ರಯತ್ನ ವಿಫಲವಾಗಿತ್ತು. ಆದರೆ ಈ ಬಾರಿ ಹೆಚ್ಚು ಜಾಗರೂಕತೆಯಿಂದ ರಮೇಶ್ ಮತ್ತು ಬಿಜೆಪಿ ಹೆಜ್ಜೆ ಇಟ್ಟಿದೆ.
ಒಬ್ಬೊಬ್ಬರೇ ಶಾಸಕರು ರಾಜೀನಾಮೆ ನೀಡುತ್ತಾರೆ?
ಮೂಲಗಳ ಪ್ರಕಾರ, ರಮೇಶ್ ಆಪ್ತ ಶಾಸಕರು ಒಬ್ಬೊಬ್ಬರಾಗಿ ಪ್ರತ್ಯೇಕವಾಗಿ ರಾಜೀನಾಮೆ ನೀಡುತ್ತಾರಂತೆ. ಹೇಗೋ ಮೈತ್ರಿಯಲ್ಲಿನ ಗೊಂದಲವನ್ನು ರಾಜೀನಾಮೆಗೆ ಕಾರಣವಾಗಿ ಬಳಸಿಕೊಂಡು, ಬಿಜೆಪಿ ಮೇಲೆ ನಿಂದನೆ ಬರದಂತೆ ತಡೆಯುವ ತಂತ್ರವನ್ನು ಅನುಸರಿಸಲಾಗುತ್ತದೆಯಂತೆ. ಉಮೇಶ್ ಜಾಧವ್ ಸೇರಿದಂತೆ ಈಗಾಗಲೇ ಇಬ್ಬರು ರಾಜೀನಾಮೆ ನೀಡಿದ್ದಾರೆ. ಮೂರನೇಯವರಾಗಿ ರಮೇಶ್ ಜಾರಕಿಹೊಳಿ ಅವರೇ ಸ್ವತಃ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಬಜೆಟ್ ನಂತರ ಉರುಳಲಿದೆ ಸರ್ಕಾರ?
ಬಿಜೆಪಿ ಅಂದುಕೊಂಡತೆ ಕಾರ್ಯಗಳು ನಡೆಯುತ್ತಿದ್ದು, ಕೇಂದ್ರ ಬಜೆಟ್ ಅಂತ್ಯವಾಗುವ ವೇಳೆಗೆ ಸರ್ಕಾರ ಬಹುಮತವಿಲ್ಲದೆ ಉರುಳುವುದು ಪಕ್ಕಾ ಎನ್ನಲಾಗುತ್ತಿದೆ. ಬಿಜೆಪಿಗೆ ಸರ್ಕಾರ ಉರುಳಿಸಿದ ಅಪಖ್ಯಾತಿಯೂ ಬಾರದಂತೆ ಪಕ್ಕಾ ಯೋಜನೆ ಮಾಡಲಾಗಿದೆ.