ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಿದ್ಧತೆ: ರೇಸ್ನಲ್ಲಿದ್ದಾರೆ ಮೂವರು
ಬೆಂಗಳೂರು, ಆಗಸ್ಟ್ 11: ಬಿಜೆಪಿ ರಾಜ್ಯಾಧ್ಯಕ್ಷರ ಅಧಿಕಾರವಧಿ ಮುಗಿಯುವ ಸಮಯ ಸನ್ನಿಹಿತವಾಗಿದೆ. ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಸಹಜವಾಗಿಯೇ ಗರಿಗೆದರಿದೆ. ಬಿಜೆಪಿಯ ಹೈಕಮಾಂಡ್ ಯಾವ ಫೈಯರ್ ಬ್ರಾಂಡ್ಗೆ ಮಣೆಯನ್ನು ಹಾಕಲಿದೆ ಎಂಬ ಚರ್ಚೆ ಜೋರಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ನೀಡುವ ಸಮಯದಲ್ಲಿ ಆರ್ಎಸ್ಎಸ್ ಕಟ್ಟಾಳುಗಳಿಗೆ ಮತ್ತು ಹಿಂದೂ ಫೈಯರ್ ಬ್ರಾಂಡ್ಗಳಿಗೆ ಪಟ್ಟವನ್ನು ಕಟ್ಟಲು ಕಾತುರವಾಗಿರುತ್ತದೆ. ಸದ್ಯ ರಾಜ್ಯಾಧ್ಯಕ್ಷರಾಗಿರುವ ನಳೀನ್ ಕುಮಾರ್ ಕಟೀಲ್ ಮೇಲೆ ಇದೇ ವಿಶ್ವಾಸವನ್ನು ಇಟ್ಟುಕೊಂಡು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ರವರ ಮೂರು ವರ್ಷಗಳ ಅಧಿಕಾರವಧಿ ಮುಗಿಯುತ್ತಿದೆ.
ರಾಯಚೂರು: ಬಿಜೆಪಿ ಅಧಿಕಾರಕ್ಕೆ ತರಲು ರಾಯರಲ್ಲಿ ಸಂಕಲ್ಪ ಮಾಡಿದ್ದೇನೆ: ಬಿಎಸ್ವೈ
ಬಿಜೆಪಿಯಲ್ಲಿ ಮೂವರ ಹೆಸರು ರಾಜ್ಯಾಧ್ಯಕ್ಷರ ಹುದ್ದೆಗೆ ಜೋರಾಗಿ ಕೇಳಿ ಬರುತ್ತಿದೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ ಹೆಸರು ಮುನ್ನಲೆಯಲ್ಲಿದ್ದರೆ, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಬಿಜೆಪಿ ನೂತನ ಸಾರಥಿಯಾಗಲು ಹಲವು ಆಕಾಂಕ್ಷಿಗಳಿದ್ದರು. ಆ ಆಕಾಂಕ್ಷಿಗಳು ಸಹ ತೆರೆಮರೆಯಲ್ಲಿ ತಮಗೊಂದು ಅವಕಾಶ ಸಿಗಬಹುದೇ ಎಂಬ ಆಸೆಗಣ್ಣಿನಲ್ಲಿ ನೋಡುತ್ತಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉತ್ತಮ ಚಾರ್ಮ್ ಇರುವವರ ಅಗತ್ಯ ಇರುತ್ತದೆ. ಇಡೀ ರಾಜ್ಯವನ್ನು ಸುತ್ತಾಡಬೇಕಾಗುತ್ತದೆ. ಪ್ರತಿಪಕ್ಷಗಳನ್ನು ಎದಿರಿಸಬೇಕಾಗುತ್ತದೆ. ಜಾತಿವಾರು ತಂತ್ರಗಳನ್ನು ಎಣಿಯಬೇಕಾಗುತ್ತದೆ. ಎಲ್ಲರಿಗೂ ಚಿರಪರಿಚಿತ ಮತ್ತು ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಅಚ್ಚರಿಗಳನ್ನು ನೀಡದೆ ಪಕ್ಷಕ್ಕಾಗಿ ದುಡಿದ ಹಳೆಯ ವ್ಯಕ್ತಿಗಳನ್ನೇ ಪರಿಗಣಿಸಬೇಕಾದ ಅನಿವಾರ್ಯಕತೆ ಬಿಜೆಪಿಗೆ ಇದೆ.
ಆಗಸ್ಟ್ ತಿಂಗಳಲ್ಲೇ ಮುಗಿಯಲಿದೆ ಕಟೀಲ್ ದರ್ಬಾರ್
ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ದರ್ಬಾರ್ ಇದೇ ತಿಂಗಳು ಅಂತ್ಯವಾಗಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದರೂ ಸಹ ಸಿಟಿ ರವಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಸಿಟಿ ರವಿ ಹಿಂದುತ್ವ ಅಜೆಂಡಾವನ್ನು ಪ್ರಮುಖವಾಗಿಟ್ಟುಕೊಂಡೇ ರಾಜಕೀಯವಾಗಿ ಬೆಳೆದವರು. ಬಾಬಬುಡನ್ ಗಿರಿ ವಿವಾದದ ವೇಳೆ ಮಾಲಾಧಾರಿಯಾಗಿ ನಡೆಸಿದ ಹೋರಾಟದ ಫೈಯರ್ ಬ್ರಾಂಡ್ ಖ್ಯಾತಿಯನ್ನು ತಂದುಕೊಟ್ಟಿದೆ. ಮಲೆನಾಡಿನ ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸುವ ಸಿಟಿ ರವಿ ರಾಜ್ಯದ ಉದ್ದಗಲಕ್ಕೂ ಪರಿಚಿತ ಇದ್ದಾರೆ. ಹಿಂದೂತ್ವದ ಬಗ್ಗೆ ಪ್ರಚಂಡ ಹೇಳಿಕೆಗಳನ್ನು ನೀಡವ ಜೊತೆಗೆ ಪಕ್ಷವನ್ನು ಸಮರ್ಥಿಸಿಕೊಳ್ಳು ಚಾಣಕ್ಯತನವಿದೆ. ಸಿಟಿ ರವಿ ಶಾಸಕರಾಗಿ , ಸಚಿವರಾಗಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ ಅನುಭವವಿದೆ. ಇನ್ನು ಜಾತಿಯಲ್ಲಿ ಒಕ್ಕಲಿಗರಾಗಿರುವ ಸಿಟಿರವಿಯನ್ನು ರಾಜ್ಯಾಧ್ಯಕ್ಷ ಹುದ್ದೆ ನೀಡಿದರೇ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಲಿಂಗಾಯತರಾದರೇ ಸಿಟಿ ರವಿ ಒಕ್ಕಲಿಗರಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸವನ್ನು ಮಾಡಲಿದ್ದಾರೆ. ಇದಕ್ಕಾಗಿಯೇ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಸಿಟಿ ರವಿಯನ್ನು ಮುಂದುವರೆಸಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿರುತ್ತಿದೆ.
ಈ ಮಧ್ಯೆ ಬಿಜೆಪಿಯಲ್ಲಿ ಈಗಾಗಲೇ ಎರಡು ಮೂರು ಪಂಗಡಗಳು ಇರುವುದಂತೂ ನಿಜ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಲಿಂಗಾಯತ ಮೂಲದ ಮುಖ್ಯಮಂತ್ರಿ ಇರುವಾಗ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗೆ ನೀಡುವುದು ಅನಿವಾರ್ಯ ಇದೆ. ಕಾರಣ ಈಗಾಗಲೇ ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಇತ್ತ ಜೆಡಿಎಸ್ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತದೆ. ಹೀಗಿರುವಾಗ ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ ಮಣೆ ಹಾಕುವುದು ಅನಿವಾರ್ಯ ಇದೆ.
ಮಹಿಳಾ ಕೋಟಾದ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸಚಿವೆ
ಆರ್ಎಸ್ಎಸ್ನಲ್ಲಿ ಸಣ್ಣ ವಯಸ್ಸಿನಲ್ಲೆ ಗುರುತಿಸಿಕೊಂಡಿದ್ದು ಶೋಭ ಕರಂದ್ಲಾಜೆ. ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕದಲ್ಲಿರುವುದು ಇವರಿಗಿರುವ ಪ್ಲಸ್ ಪಾಯಿಂಟ್. ಶೋಭಾ ಕರಂದ್ಲಾಜೆ ರಾಜ್ಯದ ಎಲ್ಲೆಡೆ ಪರಿಚಿತರಿರುವ ಮಹಿಳೆ. ಕೇಂದ್ರ ಸರ್ಕಾರದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾಗಿಯೂ ಯಾವುದೇ ಲೋಪಗಳಲಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿ ಕಾರ್ಯನಿರ್ವಹಿಸಿದ ಕೀರ್ತಿಯಿದೆ. ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರ ಪ್ರತಿನಿಧಿಸುವುದರಿಂದ ಇವರು ಸಹ ಮಲೆನಾಡಿನವರು. ಜಾತಿಯಲ್ಲಿ ಒಕ್ಕಲಿಗರಾಗಿದ್ದು ಲಿಂಗಾಯಿತ ಮುಖ್ಯಮಂತ್ರಿ ಒಕ್ಕಲಿಗ ರಾಜ್ಯಧ್ಯಕ್ಷೆ ಸ್ಥಾನವನ್ನು ನೀಡಿದರೆ ರಾಜಕೀಯ ಲಾಭದ ಲೆಕ್ಕಚಾರವಿದೆ. ಇನ್ನು ಮಹಿಳಾ ಮತದಾರರನ್ನು ಸೆಳೆಯಲು ಶೋಭಾ ಕರಂದ್ಲಾಜೆ ಹೆಸರು ಸಹ ಮುಂಚೂಣಿಯಲ್ಲಿದೆ.
ದಲಿತ ಕೋಟಾದ ಸದ್ಭಳಕೆಗೆ ಚಿಂತನೆ
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಹುದ್ದೆ ಕೇಳಿಬಂದಿರುವ ಮತ್ತೊಂದು ಹೆಸರು ಅರವಿಂದ ಲಿಂಬಾವಳಿಯದ್ದು. ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅರವಿಂದ ಲಿಂಬಾವಳಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಕೆಲಸ ಮಾಡಿದ ಅನುಭವವಿದೆ. ಎಬಿವಿಪಿ ಮತ್ತು ಆರ್ಎಸ್ಎಸ್ ಕಟ್ಟಾಳು ಆಗಿರುವ ಅರವಿಂದ ಲಿಂಬಾವಳಿ ಜಾತಿಯಲ್ಲಿ ದಲಿತರಾಗಿದ್ದಾರೆ. ಬಲಗೈ ದಲಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ಇದಕ್ಕಾಗಿ ಲಿಂಗಾಯಿತ ಮುಖ್ಯಮಂತ್ರಿಯ ಜೊತೆ ದಲಿತ ರಾಜ್ಯಾಧ್ಯಕ್ಷರ ಕಾಂಬೀನೇಷನ್ ನಲ್ಲಿ ಚುನಾವಣೆನ್ನು ಎದುರಿಸುವ ಪ್ಲಾನ್ ಕೂಡ ಇದೆ. ದಲಿತರಿಗೆ ರಾಜ್ಯಾಧ್ಯಕ್ಷ ಹುದ್ದೆ ಎಂದು ಹೈಕಮಾಂಡ್ ಶರಾ ಬರೆದರೆ ಅರವಿಂದ ಲಿಂಬಾವಳಿಗೆ ಜಾಕ್ಪಾಟ್ ಹೊಡೆಯುವ ಸಾಧ್ಯತೆಗಳಿವೆ.
ಅಚ್ಚರಿಯ ಅಭ್ಯರ್ಥಿಯನ್ನು ಆರಿಸುತ್ತಾ ಹೈಕಮಾಂಡ್
ಬಿಜೆಪಿಯಲ್ಲಿಗ ಅಮಿತ್ ಶಾ, ನರೇಂದ್ರ ಮೋದಿ, ಜೆಪಿ ನಡ್ಡಾರ ತೀರ್ಮಾನವೇ ಅಂತಿಮವಾಗಿರುತ್ತದೆ. ಕರ್ನಾಟಕ ಮೂಲದ ಮತ್ತು ರಾಷ್ಟ್ರ ಬಿಜೆಪಿಯಲ್ಲಿ ತಮ್ಮದೇ ಹಿಡಿತ ಹೊಂದಿರುವ ಬಿ.ಎಲ್. ಸಂತೋಷ್ ಸಹ ಕರ್ನಾಟಕದ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಚ್ಚಳ. ಹೈಕಮಾಡ್ ಯಾರು ರಾಜ್ಯಾಧ್ಯಕ್ಷ ಎಂದು ಘೋಷಣೆ ಮಾಡುತ್ತೋ ಅವರೇ ಕರ್ನಾಟಕ ಬಿಜೆಪಿಗೆ ಬಾಸ್ ಆಗಲಿದ್ದಾರೆ. ಹೈಕಮಾಂಡ್ ಕೆಲವು ವಿಚಾರದಲ್ಲಿ ಆಗಿಂದಾಗ್ಗೆ ರಾಜ್ಯ ನಾಯಕರಿಗೆ ಅಚ್ಚರಿಯ ಆಯ್ಕೆ ಮೂಲಕ ಶಾಕ್ ನೀಡುತ್ತೆ. ರಾಜ್ಯದಲ್ಲಿನ ಬೆಳವಣಿಗೆ, ಕರಾವಳಿಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿದ್ದು. ಇವೆಲ್ಲಾವನ್ನು ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರ ಆಯ್ಕೆಯಲ್ಲೂ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಯೇ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
Recommended Video