ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!
ಬೆಂಗಳೂರು, ನವೆಂಬರ್ 30: ಬಿಜೆಪಿ ಶಾಸಕರ 'ಹನಿಟ್ರ್ಯಾಪ್' ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿಸಿಬಿ ತನಿಖೆಯು ಒಬ್ಬ ಶಾಸಕರು ಮಾತ್ರವಲ್ಲ, ಈ ಖೆಡ್ಡಾದೊಳಗೆ ಇನ್ನೂ ಅನೇಕ ಶಾಸಕರು ಮತ್ತು ಗಣ್ಯ ವ್ಯಕ್ತಿಗಳು ಬಿದ್ದಿದ್ದಾರೆ ಎಂಬ ಮಾಹಿತಿ ಹೊರಗೆಡವಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿವರ ಹೊರಬೀಳುತ್ತಿದೆ. 'ಹನಿಟ್ರ್ಯಾಪ್' ಬಲೆಗೆ ಬಿದ್ದು ಪೊಲೀಸರಿಗೆ ದೂರು ನೀಡಿರುವ ಬಿಜೆಪಿ ಶಾಸಕರು, ಯುವತಿ ಪರಿಚಯವಾದ 24 ಗಂಟೆಯೊಳಗೇ ಆಕೆಯೊಂದಿಗೆ ರಾಸಲೀಲೆ ನಡೆಸಿದ್ದೆ ಎಂಬುದನ್ನು ಸ್ವತಃ ತಿಳಿಸಿದ್ದಾರೆ.
ಶಾಸಕರನ್ನು ಪ್ರಮುಖ ಆರೋಪಿ ರಾಘವೇಂದ್ರ, ರಾಜೇಶ ಹಾಗೂ ಇನ್ನಿಬ್ಬರು ಯುವತಿಯರು ಮೊದಲು ಭೇಟಿಯಾಗಿದ್ದು ಅ.12 ರ ರಾತ್ರಿ. ಶಾಸಕರ ಭವನಕ್ಕೆ ಬಂದಿದ್ದ ಆರೋಪಿಗಳು ತಾವು ಆರ್ಗಾನಿಕ್ ಸೈಂಟಿಸ್ಟ್ಗಳೆಂದು ಪರಿಚಯ ಮಾಡಿಕೊಂಡಿದ್ದರು. ರಿನೈಸಾನ್ಸ್ ಹೋಟೆಲ್ನಲ್ಲಿ ತಾವು ಉಳಿದುಕೊಂಡಿದ್ದು ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಅದರಲ್ಲಿ ಒಬ್ಬ ಯುವತಿ ಶಾಸಕರೊಂದಿಗೆ ಸಲಿಗೆಯಿಂದ ಮಾತನಾಡಿದ್ದಳು. ಅಷ್ಟು ಸಾಕಿತ್ತು ಶಾಸಕರು ಅವರ ಜಾಲದೊಳಗೆ ಬೀಳಲು. ಆ ಯುವತಿ ಶಾಸಕರಿಗೆ ಕರೆ ಮಾಡಿ ತನ್ನನ್ನು ಪ್ರತ್ಯೇಕವಾಗಿ ಭೇಟಿ ಮಾಡುವಂತೆ ಹೇಳಿದ್ದಳು.
ಸಿಸಿಬಿ ತನಿಖೆಯಲ್ಲಿ ಹೊರಬಿದ್ದ ಬಿಜೆಪಿ ನಾಯಕನ ಹನಿಟ್ರ್ಯಾಪ್ ಕಥೆ!
ಮರುದಿನವೇ (ಅ.13) ಮಧ್ಯಾಹ್ನ 4 ಗಂಟೆಗೆ ಅವರ ಭೇಟಿಗೆ ಸಮಯ ನಿಗದಿಯಾಗಿತ್ತು. ಅಂದರೆ ಮೊದಲ ಪರಿಚಯವಾಗಿ 20 ಗಂಟೆಯಲ್ಲಿಯೇ ಶಾಸಕ ಅವರನ್ನು ಸಂಪೂರ್ಣ ನಂಬಿದ್ದರು. ಶಾಸಕರು ತಮ್ಮ ಎರಡನೆಯ ದೂರಿನಲ್ಲಿ ತಿಳಿಸಿರುವಂತೆ, ಅವರು ಇದ್ದ ಹೋಟೆಲ್ನ ಕೊಠಡಿಗೆ ಬಂದ ಯುವತಿ ಲೈಂಗಿಕ ಸಂಪರ್ಕಕ್ಕೆ ಪ್ರಚೋದಿಸಿದ್ದಳು. ಅವರು ದೈಹಿಕ ಸಂಪರ್ಕ ನಡೆಸಿದ ದೃಶ್ಯಗಳು ಅವರಿಗೆ ಅರಿವಿಲ್ಲದಂತೆಯೇ ವಿಡಿಯೋದಲ್ಲಿ ಸೆರೆಯಾಗುತ್ತಿತ್ತು. ಆ ನಂತರ, ಹಣ ನೀಡದೆ ಹೋದರೆ ತಮ್ಮ ಫೋಟೊ ಮತ್ತು ವಿಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಅವರಿಗೆ ಕರೆಗಳು ಬರತೊಡಗಿದವು.
ದೂರು ಬರೆದರೂ ಕೊಟ್ಟಿದ್ದು ಐದು ದಿನದ ನಂತರ
'ರಾಸಲೀಲೆ' ವಿಡಿಯೋದಲ್ಲಿ ಮಾನ ಹರಾಜಾಗಿರುವ ಬಿಜೆಪಿ ಶಾಸಕರಿಗೆ ಬ್ಲ್ಯಾಕ್ಮೇಲ್ಗೆ ಒಳಗಾಗುವವರೆಗೂ ಮಹಾ ಪಾತಕಿಗಳ ಜಾಲದೊಳಗೆ ಸಿಕ್ಕಿಬಿದ್ದಿದ್ದೇನೆ ಎಂಬ ಅರಿವೇ ಇರಲಿಲ್ಲ. ಯಾವಾಗ ಆರೋಪಿ ರಾಘವೇಂದ್ರ ಪದೇ ಪದೇ ಫೋನ್ ಮಾಡಿ ಹಣ ನೀಡದೆ ಇದ್ದರೆ ವಿಡಿಯೋ ಮತ್ತು ಫೋಟೊಗಳನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕತೊಡಗಿದನೋ ಬಿಜೆಪಿ ನಾಯಕ ಅದನ್ನು ಸಹಿಸಿಕೊಳ್ಳಲಾಗದೆ ದೂರು ನೀಡಲು ಮುಂದಾದರು. ಗಮನಿಸಬೇಕಾದ ಸಂಗತಿಯೆಂದರೆ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನೀಡಬೇಕಾದ ದೂರನ್ನು ನ.18ರಂದೇ ಸಿದ್ಧಪಡಿಸಿದ್ದರು. ಆದರೆ ಅದನ್ನು ಕೊಟ್ಟಿದ್ದು ನ.23ರಂದು. ಆ ದೂರಿನಲ್ಲಿಯೂ ಅವರು ವಾಸ್ತವಾಂಶಗಳನ್ನು ಬಚ್ಚಿಟ್ಟಿದ್ದರು.
ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ದೂರು
ತಾವು ಹನಿಟ್ರ್ಯಾಪ್ಗೆ ಒಳಗಾದ ಸಂಗತಿಯನ್ನು ದೂರಿನಲ್ಲಿ ಪ್ರಸ್ತಾಪಿಸಿಯೇ ಇರಲಿಲ್ಲ. 'ನೀವು ಕೆಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅದರ ವಿಡಿಯೋ ಮತ್ತು ಫೋಟೊಗಳು ನನ್ನ ಬಳಿ ಇದೆ. ಕೇಳಿದಷ್ಟು ಹಣ ನೀಡದೆ ಇದ್ದರೆ ಅವುಗಳನ್ನು ಟಿವಿ ಚಾನೆಲ್ಗಳಿಗೆ ನೀಡುತ್ತೇನೆ ಎಂದು ಒಬ್ಬ ವ್ಯಕ್ತಿ ಫೋನ್ ಮಾಡಿ ಪದೇ ಪದೇ ಹೆದರಿಸುತ್ತಿದ್ದಾನೆ. ಸಮಾಜದ ಗಣ್ಯ ವ್ಯಕ್ತಿಗಳನ್ನು ಗುರಿಯನ್ನಾಗಿರಿಸಿಕೊಂಡು ಬ್ಲ್ಯಾಕ್ಮೇಲ್ ಮಾಡುವ ಗುಂಪಿಗೆ ಆತ ಸೇರಿರಬಹುದು' ಎಂದು ಅವರು ದೂರಿನಲ್ಲಿ ಹೇಳಿದ್ದರು.
ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್
ಆರೋಪಿಗಳ ಬೆನ್ನು ಹತ್ತಿದ ಪೊಲೀಸರು
ಶಾಸಕ ನೀಡಿದ ದೂರಿನ ಅನ್ವಯ ಸೈಬರ್ ಅಪರಾಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67 (ಎ), ಕಲಂ 384, 511, 506, 120 (ಬಿ) ಹಾಗೂ ಐಪಿಸಿ ಸೆಕ್ಷನ್ 24ರ ಅಡಿ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ತನಿಖೆಯ ಮೇಲುಸ್ತುವಾರಿಯನ್ನು ಸಿಸಿಬಿ ಡಿಜಿಪಿ ರವಿಕುಮಾರ್ ಅವರಿಗೆ ವಹಿಸಿದ್ದರು. ಇನ್ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ನೇತೃತ್ವದ ತಂಡ, ಶಾಸಕ ನೀಡಿದ್ದ ದೂರಿನಲ್ಲಿದ್ದ ಮೊಬೈಲ್ ಸಂಖ್ಯೆಯ ವಿವರ ಮುಂತಾದವುಗಳ ಬೆನ್ನತ್ತಿ ಹನಿಟ್ರ್ಯಾಪ್ ತಂಡವನ್ನು ಭೇದಿಸಿದರು. ಆರೋಪಿಗಳ ಗ್ಯಾಂಗ್ ಬಳಿ ಹನಿಟ್ರ್ಯಾಪ್ನ ವಿಡಿಯೋಗಳಿದ್ದ ಪೆನ್ಡ್ರೈವ್, ಹಾರ್ಡ್ ಡಿಸ್ಕ್, ಕ್ಯಾಮೆರಾ, ಕಂಪ್ಯೂಟರ್ ಮುಂತಾದವುಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದರು.
ಶಾಸಕರಿಂದ ಮತ್ತೆ ಹೇಳಿಕೆ ಪಡೆದ ಪೊಲೀಸರು
ಶಾಸಕ ನೀಡಿದ್ದ ದೂರಿನಲ್ಲಿದ್ದ ಅಂಶಗಳಿಗೂ ತಾವು ವಶಪಡಿಸಿಕೊಂಡ ದಾಖಲೆಗಳು ನೀಡುವ ಮಾಹಿತಿಗೂ ವ್ಯತ್ಯಾಸವಿದೆ ಎನ್ನುವುದು ಪೊಲೀಸರಿಗೆ ಅರಿವಾಯಿತು. ಇದು ಕೇವಲ ಸಾಮಾನ್ಯ ಬ್ಲ್ಯಾಕ್ಮೇಲ್ ಪ್ರಕರಣವಲ್ಲ. ಬಹುದೊಡ್ಡ ಗ್ಯಾಂಗ್ ಇದರ ಹಿಂದೆ ಇದೆ. ಇದು ವ್ಯವಸ್ಥಿತವಾಗಿ ಗಣ್ಯ ವ್ಯಕ್ತಿಗಳನ್ನು ಬಲೆಗೆ ಬೀಳಿಸಿಕೊಂಡು ಅವರನ್ನು ಯಾಮಾರಿಸುತ್ತಿದೆ ಎಂಬುದನ್ನು ತಿಳಿದುಕೊಂಡರು. ಕೂಡಲೇ ಶಾಸಕರನ್ನು ಮತ್ತೆ ಸಂಪರ್ಕಿಸಿ ಇಡೀ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು. ನ.25ರಂದು ಶಾಸಕರು ನೀಡಿದ ಎರಡನೆಯ ಹೇಳಿಕೆಯಲ್ಲಿ ಅವರು ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಎಲ್ಲ ಮಾಹಿತಿ ಇತ್ತು.
ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ
ಹತ್ತು ಕೋಟಿಗೆ ಅಂತಿಮ ಡೀಲ್
ಈ ಶಾಸಕ ರಾಸಲೀಲೆಯ ವಿಡಿಯೋ ಬಿಡುಗಡೆಯಾಗುತ್ತದೆ ಎಂದು ಹೆದರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಆರೋಪಿಗಳು 50 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು. ಅಷ್ಟು ಹಣ ಕೊಡಲು ಕಷ್ಟವಾಗುತ್ತದೆ ಎಂದಾಗ ಕೊನೆಗೆ ಮಾತುಕತೆ ನಡೆದು 10 ಕೋಟಿ ರೂ.ಗೆ. ಡೀಲ್ ನಡೆದಿತ್ತು. ಅದರ ಮೊದಲ ಇನ್ಸ್ಟಾಲ್ಮೆಂಟ್ ಆಗಿ ಒಂದು ಕೋಟಿ ರೂ. ನೀಡಲಾಗಿತ್ತು. ಇನ್ನೂ ಇಬ್ಬರು ಶಾಸಕರು ಇದೇ ರೀತಿ ಹಣ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ದೊಡ್ಡದಿದೆ ಹನಿಟ್ರ್ಯಾಪ್ ಜಾಲ
ಸಿಸಿಬಿ ನಡೆಸಿದ ತನಿಖೆಯ ಪ್ರಕಾರ ಈ 'ಹನಿಟ್ರ್ಯಾಪ್' ಖೆಡ್ಡಾದೊಳಗೆ ಬಿದ್ದಿರುವುದು ಒಬ್ಬ ಶಾಸಕ ಮಾತ್ರ ಅಲ್ಲ. 20ಕ್ಕೂ ಹೆಚ್ಚು ಶಾಸಕರು, ಗಣ್ಯರು ಇದರೊಳಗೆ ಸಿಲುಕಿದ್ದಾರೆ. 2015ರಿಂದಲೇ ಈ ಗುಂಪು ಹನಿಟ್ರ್ಯಾಪ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಕಿರುತೆರೆ ನಟಿಯರನ್ನು ಕೂಡ ಬಳಸಿಕೊಂಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈಗ ಪ್ರಮುಖ ಆರೋಪಿ ಎಂದು ಗುರುತಿಸಿರುವ ರಾಘವೇಂದ್ರ ಅಲಿಯಾಸ್ ರಘು ಇದರ ಒಬ್ಬ ಸದಸ್ಯನಷ್ಟೇ. ಇದರ ಕಿಂಗ್ಪಿನ್ ಬೇರೆಯೇ ಇದ್ದಾರೆ ಎಂದು ಹೇಳಲಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆಣ್ಣಿನ ಮೋಹದ ಜಾಲದೊಳಗೆ ಬೀಳುತ್ತಿರುವ ಜನಪ್ರತಿನಿಧಿಗಳು, ತಮ್ಮ ನೈತಿಕತೆ, ಮರ್ಯಾದೆಯನ್ನು ಹರಾಜು ಹಾಕಿಕೊಳ್ಳುತ್ತಿದ್ದಾರೆ.