ಬಿಎಸ್ವೈ ಬಿಜೆಪಿ ತೊರೆದಾಗ ನಾಯಕರು ಅಂದು ಹೇಳಿದ್ದೇನು?
ಬೆಂಗಳೂರು, ಜ.9 : ಕಾಲ ಚಕ್ರ ಒಂದು ಸುತ್ತು ತಿರುಗಿದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿದ್ದಾರೆ. "ನನ್ನ ಕೊನೆಯ ಉಸಿರು ಇರುವವರೆಗೂ ಇನ್ನೆಂದೂ ಯಾವುದೇ ಕಾರಣಕ್ಕೂ ಆ ಪಕ್ಷದ ಜತೆ ಸಂಬಂಧ ಬೆಳೆಸಲಾರೆ" ಎಂದು ಘೋಷಿಸಿದ್ದ ಯಡಿಯೂರಪ್ಪ ದೇಶ ಮತ್ತು ರಾಜ್ಯದ ಹಿತಕ್ಕಾಗಿ ಬಿಜೆಪಿಗೆ ವಾಪಸ್ ಆಗಿದ್ದಾರೆ. ಯಡಿಯೂರಪ್ಪ ಪಕ್ಷ ಬಿಟ್ಟಾಗ ಬಿಜೆಪಿ ನಾಯಕರು ಏನು ಹೇಳಿದ್ದರು ಎಂಬುದು ಕುತೂಹಲದ ಸಂಗತಿ.
2012ರ ಡಿ.6ರಂದು ಬಿಜೆಪಿಗೆ ರಾಜೀನಾಮೆ ಕೊಟ್ಟು ಸ್ವಾತಂತ್ರ್ಯ ಉದ್ಯಾನದಲ್ಲಿ ಭಾಷಣ ಮಾಡಿದ್ದ ಯಡಿಯೂರಪ್ಪ ಬಿಜೆಪಿ ಜೊತೆ ಇನ್ನೆಂದೂ ಸಖ್ಯ ಬೆಳೆಸಲಾರೆ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಹೇಳಿದ್ದರು. ಒಂದೂವರೆ ವರ್ಷ ಕಳೆದಿದ್ದು, ಯಡಿಯೂರಪ್ಪ ಬಿಜೆಪಿ ಪ್ರಾಥಮಿಕ ಸದಸ್ವತ್ವ ಪಡೆದಿದ್ದಾರೆ. [ಬಿಜೆಪಿಗೆ ಮರಳಿದ ಯಡಿಯೂರಪ್ಪ ಟೀಂ]
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದಾಗ ಅವರ ಮೇಲೆ ಬಿಜೆಪಿ ನಾಯಕರು ವಾಕ್ ಪ್ರಹಾರ ನಡೆಸಿದ್ದರು. ಯಡಿಯೂರಪ್ಪ ಸಹ ಎಲ್ಲಾ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸಿ ಚುನಾವಣೆ ಪ್ರಚಾರ ಮಾಡಿದ್ದರು. ಕೆಲವೊಮ್ಮೆ ಕಣ್ಣೀರು ಹಾಕಿದ್ದರು. ಸದ್ಯ ಎಲ್ಲವನ್ನು ಮರೆತು ಪಕ್ಷಕ್ಕೆ ಮರಳಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಘೋಷಿಸಿದ್ದಾರೆ.
ಯಡಿಯೂರಪ್ಪ ಬಿಜೆಪಿ ತೊರೆದ ನಂತರ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ವಾಕ್ ಸಮರದ ಕೆಲವು ತುಣುಕುಗಳು ಇಲ್ಲಿವೆ. ಕಟು ಶಬ್ದಗಳ ಮೂಲಕ ಉಭಯ ನಾಯಕರು ಮಾತಿನ ಮಲ್ಲಯುದ್ಧ ನಡೆಸಿದ್ದರು, ಇಂದು ನಾವೆಲ್ಲರೂ ಒಂದೇ ಎಂದು ಘೋಷಿಸಿದ್ದಾರೆ. ಮಾತಿನ ಮಲ್ಲಯುದ್ಧದ ಕೆಲವು ತುಣುಕುಗಳು ಇಲ್ಲಿವೆ.
ಯಡಿಯೂರಪ್ಪ ಬಿಜೆಪಿ ತೊರೆದಾಗ ಹೇಳಿದ್ದು
"ನನ್ನ ಕೊನೆಯ ಉಸಿರು ಇರುವವರೆಗೂ ಇನ್ನೆಂದೂ ಯಾವುದೇ ಕಾರಣಕ್ಕೂ ಆ ಪಕ್ಷದ ಜತೆ ಸಂಬಂಧ ಬೆಳೆಸಲಾರೆ. ಅಂತಹ ಸನ್ನಿವೇಶ ನಿರ್ಮಾಣವಾದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಹೊರತು ಆ ಪಕ್ಷದ ಜತೆ ಸಂಬಂಧ ಕುದುರಿಸುವ ಪ್ರಶ್ನೆಯೇ ಇಲ್ಲ". ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಾಗ ಹೀಗೆ ಹೇಳಿದ್ದರು.
ಬಿಜೆಪಿ ಸರ್ವನಾಶ ಮಾಡಲು ಕೆಜೆಪಿ ಬೇಕಾಗಿಲ್ಲ
ಬಿಜೆಪಿಯನ್ನು ಸರ್ವನಾಶ ಮಾಡಲು ಕೆಜೆಪಿ ಪಕ್ಷ ಬೇಕಾಗಿಲ್ಲ. ಬಿಜೆಪಿಯಲ್ಲಿರುವ ಶೆಟ್ಟರ್, ಅನಂತ ಕುಮಾರ್, ಡಿವಿ ಸದಾನಂದ ಗೌಡ, ಈಶ್ವರಪ್ಪ ಅವರು ಸಾಕು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದರು.
ಸಿಬಿಐ ಭಯದಿಂದ ಹೋರಾಟ
ಯಡಿಯೂರಪ್ಪ ಅವರು ಸಿಬಿಐ ಭಯದಿಂದಾಗಿ ಬಿಜೆಪಿ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಇದು ಅವರ ಸ್ವಯಂ ಕೃತ ಅಪರಾಧ ಅವರ ಬಗ್ಗೆ ನನಗೆ ಕನಿಕರವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಯಡಿಯೂರಪ್ಪ ಅವರನ್ನು ಕುರಿತು ಹೇಳಿದ್ದರು.
ಯಡಿಯೂರಪ್ಪ ದುರುದ್ದೇಶ ನಿಮಗೆ ಗೊತ್ತೆ
2008ರಲ್ಲಿ ನನಗೆ ಸಚಿವನಾಗುವ ಹಿರಿತನವಿತ್ತು. ಆದರೆ, ಇನ್ನೊಬ್ಬ ಲಿಂಗಾಯಿತ ನಾಯಕ ಬೆಳೆಯಬಾರದು ಎಂಬ ದುರುದ್ದೇಶದಿಂದ ಯಡಿಯೂರಪ್ಪ ಅದನ್ನು ತಪ್ಪಿಸಿದರು ಎಂದು ಜಗದೀಶ್ ಶೆಟ್ಟರ್ ಕುಟುಕಿದ್ದರು.
ಕಳಂಕ ಹೊಂದಿದವರು ಪಕ್ಷದಲ್ಲಿಲ್ಲ
ಮಾಜಿ ಸಿಎಂ ಡಿವಿ ಸದಾನಂದ ಗೌಡರು ಕಳಂಕ ಹೊಂದಿದ ಮಂದಿ ಪಕ್ಷದಿಂದ ಹೊರನಡೆದಿದ್ದಾರೆ. ಇದರಿಂದ ಬಿಜೆಪಿ ವರ್ಚಸ್ಸು ವೃದ್ಧಿಯಾಗಿದೆ. ಭ್ರಮೆಯಿಂದ ತೇಲಾಡುವ ಜನರಿಗೆ ಮುಖಭಂಗವಾಗಲಿದೆ ಎಂದು ಹೇಳಿದ್ದರು.
ಜೈಲಿಗೆ ಹೋಗಿ ಬಂದವರು ಪಕ್ಷದಲ್ಲಿಲ್ಲ
ಯಡಿಯೂರಪ್ಪ ಆಪ್ತ ಗೆಳೆಯ ಕೆ.ಎಸ್.ಈಶ್ವರಪ್ಪ "ಸಿಬಿಐ ತನಿಖೆ ಎದುರಿಸುತ್ತಿರುವವರು ಮತ್ತು ಜೈಲಿಗೆ ಹೋಗಿ ಬಂದವರು ಪಕ್ಷದಲ್ಲಿ ಇಲ್ಲ ಎನ್ನುವ ಸಮಾಧಾನ ಇದೆ" ಎಂದು ನೇರವಾಗಿ ಯಡಿಯೂರಪ್ಪ ಅವರನ್ನು ಮಾತಿನಲ್ಲಿ ತಿವಿದಿದ್ದರು.
ಧನಂಜಯ್ ಮಾಡಿದ ಕಿಕ್ ಬ್ಯಾಕ್ ಕಿರಿಕ್
ಬಿಜೆಪಿಯ ರಾಷ್ಟ್ರೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸಲು ಹಣ ಕೇಳಿದ್ದರು. ಎಲ್.ಕೆ.ಅಡ್ವಾಣಿ ಮತ್ತು ಅವರ ಮಕ್ಕಳು ಯಡಿಯೂರಪ್ಪ ಅವರಿಂದ ಕಿಕ್ ಬ್ಯಾಕ್ ಹಣ ಪಡೆದಿದ್ದಾರೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಾಂಬ್ ಸಿಡಿಸಿ ತೀವ್ರ ವಿವಾದ ಹುಟ್ಟು ಹಾಕಿದ್ದರು.
ಬೆನ್ನಿಗೆ ಚೂರಿ ಹಾಕಿದರು
ಬಿ.ಎಸ್.ಯಡಿಯೂರಪ್ಪ ಅವರ ಬಹಳ ಮುಖ್ಯವಾದ ಹೇಳಿಕೆ ಇದು "ನಾನೊಬ್ಬ ಪೆದ್ದ, ಬೆನ್ನಿಗೆ ಚೂರಿ ಹಾಕುವವರು ನನ್ನ ಜತೆಗೆ ಇದ್ದರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ. ಮೊದಲು ಬಿಜೆಪಿ ಪಕ್ಷದವರು ಬೆನ್ನಿಗೆ ಚೂರಿ ಹಾಕಿದರು. ನಂತರ ನನ್ನ ಜತೆಗಿದ್ದ ಕೆಲವು ಸಚಿವರು ಆ ಕೆಲಸ ಮಾಡಿದರು" ಎಂದಿದ್ದರು.
ಪಕ್ಷದಲ್ಲಿ ಸರಿಯಾಗಿ ಉಂಡರು
ಮಾಜಿ ಸಚಿವ ಸೊಗಡು ಶಿವಣ್ಣ " ಪಕ್ಷದಲ್ಲಿ ಇದ್ದಾಗ ಚೆನ್ನಾಗಿ ಉಂಡರು, ಹೋಗುವಾಗ ಎಲ್ಲಾ ದೋಚಿಕೊಂಡು ಹೋದರು. ಬಾಚಿಕೊಂಡು ಹೋಗುವಾಗ ಪಕ್ಷದ ಹೆಸರಿಗೆ ಮಸಿಬಳಿದು ಹಾನಿ ಮಾಡಿ ಹೋದರು" ಎಂದು ಹೇಳಿದ್ದರು.
ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ
ಯಡಿಯೂರಪ್ಪ ಅವರು ಬಿಜೆಪಿಯನ್ನು ಮುಗಿಸಲು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಸುಫಾರಿ ಪಡೆದು ಹೊಸ ಪಕ್ಷ ಕಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಗೋ ಮಧುಸೂದನ್ ಹೇಳಿದ್ದರು.
ಶೆಟ್ಟರ್ ವ್ಯಾಪಾರ ಮುಗಿಸಿದ್ದಾರೆ
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಾರಕ್ಕೆ 2-3 ಸಂಪುಟ ಸಭೆ ನಡೆಸಿ ತಮ್ಮ ವ್ಯಾಪಾರ ಮುಗಿಸಿದ್ದಾರೆ. ರಾಜ್ಯದ ಖಜಾನೆ ತುಂಬಬೇಕಾದವರು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ₨ 100 ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.
ಅವನ್ಯಾವ ದೊಣ್ಣೆ ನಾಯಕ
ಯಡಿಯೂರಪ್ಪ
ತಮ್ಮ
ಸಂಪುಟದಲ್ಲಿ
ಚಿಕ್ಕಮಗಳೂರು
ಜಿಲ್ಲೆಗೆ
ಪ್ರಾತಿನಿಧ್ಯ
ಕೊಡದೆ
ಮೋಸ
ಮಾಡಿದ್ದರು
ಎಂದು
ಸಿ.ಟಿ.ರವಿ
ಆರೋಪಿಸಿದ್ದರು.
ಇದಕ್ಕೆ
ಖಡಕ್
ಉತ್ತರ
ನೀಡಿದ್ದ
ಯಡಿಯೂರಪ್ಪ
"ಅವನ್ಯಾವ
ದೊಣ್ಣೆ
ನಾಯಕ.
ರಾಜಕೀಯದಲ್ಲಿ
ಆತ
ಇನ್ನೂ
ಎಳಸು.
ಅವನೊಬ್ಬ
ಮೂರ್ಖ.
ಎಲುಬಿಲ್ಲದ
ನಾಲಿಗೆ
ಏನು
ಬೇಕಾದರೂ
ಮಾತನಾಡುತ್ತದೆ"
ಎಂದು
ಕೆಂಡ
ಕಾರಿದ್ದರು.