ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!
ಬೆಂಗಳೂರು, ಮೇ 29: ಕೊರೊನಾವೈರಸ್ ಸಂಕಷ್ಟದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ಬೇಗುದಿ ಈಗ ರಾಜ್ಯಸಭಾ ಚುನಾವಣೆ ನೆಪದಲ್ಲಿ ಸ್ಫೋಟವಾಗಿದೆ. ಹಿಂದೆ ಮೈತ್ರಿ ಸರ್ಕಾರ ಪತನವಾಗಲು ಕಾರಣವಾಗಿದ್ದ ಬೆಳಗಾವಿ ಜಿಲ್ಲೆಯ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಊಟ ಮಾಡುವ ನೆಪದಲ್ಲಿ ಒಂದೆಡೆ ಸೇರಿದ್ದ ಬಿಜೆಪಿಯ ಹಿರಿಯ ನಾಯಕರು, ಆ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಕೇಂದ್ರ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಲಾಕ್ಡೌನ್ ಬಳಿಕ ಮತ್ತೊಂದು ಹಂತದ ರಾಜಕೀಯ ವಿಪ್ಲವ ರಾಜ್ಯದಲ್ಲಿ ಉಂಟಾಗುವ ಮುನ್ಸೂಚನೆ ಕೊಟ್ಟಿದ್ದಾರೆ.
Recommended Video
ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಆಪ್ತರಾಗಿದ್ದ ನಾಯಕರೇ ಇದೀಗ ಬಂಡಾಯ ಸಭೆ ನಡೆಸಿದ್ದಾರೆ. ಜೊತೆಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ನಾಯಕರಿಗೆ ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಒಬ್ಬರೇ ಲಿಂಗಾಯತ ನಾಯಕರಲ್ಲ ಎಂದು ಬಿಜೆಪಿ ಹೈಕಮಾಂಡ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಯಡಿಯೂರಪ್ಪ ಜೊತೆಗಿಲ್ಲ!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಎಲ್ಲಾ ಶಾಸಕರು ಇದ್ದಾರೆ ಅಂದ್ರೆ, ಅದು ನಿಮ್ಮ ಅಭಿಪ್ರಾಯ ತಪ್ಪು. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲಾ ಲಿಂಗಾಯತ ಶಾಸಕರು ಅವರೊಂದಿಗೆ ಇಲ್ಲ. ಎಲ್ಲ ಲಿಂಗಾಯತ ಶಾಸಕರ ಬೆಂಬಲ ಯಡಿಯೂರಪ್ಪ ಅವರಿಗೆ ಇದೆ ಎಂದು ಹೈಕಮಾಂಡ್ ತಿಳಿದಿದ್ದರೆ ಅದು ತಪ್ಪು ಅಭಿಪ್ರಾಯ ಎಂದು ಸಭೆಯಲ್ಲಿದ್ದ ಹಿರಿಯ ಶಾಸಕರೊಬ್ಬರು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ನಾಯಕರಿಗೆ ದೂರವಾಣಿಯಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ಬಿಜೆಪಿ ಆಂತರಿಕ ಜಗಳ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದಿಷ್ಟು
ಸಿಎಂ ಯಡಿಯೂರಪ್ಪ ಅವರ ನಡೆ ನಮಗೆ ಸರಿ ಕಾಣುತ್ತಿಲ್ಲ. ದೆಹಲಿ ಹೈಕಮಾಂಡ್ಗೆ ಎಲ್ಲವೂ ಗೊತ್ತಾಗಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರದ ನಾಯಕರ ಜೊತೆಗೆ ಮಾತನಾಡಿ, ಶಾಸಕ ಅಭಿಪ್ರಾಯ ತಿಳಿಸಿದ್ದಾರೆ.
ಕುಟುಂಬಕ್ಕೆ ಸೀಮಿತ
ರಾಜ್ಯ ಬಿಜೆಪಿ ಸರ್ಕಾರ ಅಂದರೆ ಸಿಎಂ ಯಡಿಯೂರಪ್ಪ ಕುಟುಂಬಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ ಎಂದು ಸಭೆಯಿಂದಲೇ ಕೇಂದ್ರದ ನಾಯಕರಿಗೆ ಬಸನಗೌಡ ಪಾಟೀಲ್ ಯತ್ನಾಳ್ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ಮಾಹಿತಿಯಿದೆ.
ಕ್ಷೇತ್ರದಲ್ಲಿ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕುವುದಿಲ್ಲ. ಸಿಎಂ ಕುಟುಂಬದವರೊಬ್ಬರು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಾರೆ. ವಿರೋಧ ಪಕ್ಷದವರ ಮಾತಿಗೆ ಮನ್ನಣೆ ಕೊಡುತ್ತಾರೆ. ಆದರೆ ಬಿಜೆಪಿ ಶಾಸಕರ ಮಾತಿಗೆ ಕಿಮ್ಮತ್ತು ಕೊಡುವುದಿಲ್ಲ. ನಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇವೆ.
ಯಡಿಯೂರಪ್ಪ ಅವರು ನಾವು ಹೇಳಿದ್ದನ್ನೆಲ್ಲವನ್ನೂ ಬರೆದುಕೊಳ್ಳುತ್ತಾರೆ. ಆದರೆ ಅದನ್ನು ಜಾರಿ ಮಾಡುವುದಿಲ್ಲ. ನಮ್ಮ ಸಮಸ್ಯೆ ಚೀಟಿಯಲ್ಲಿ ಬರೆದುಕೊಳ್ಳುವುದಕ್ಕೆ ಸೀಮಿತ ಆಗಬಾರದು. ಎಷ್ಟು ದಿನ ನೋಡುತ್ತಾ? ಕೇಳುತ್ತಾ ಇರಬೇಕು ಎಂಬುದನ್ನು ನೀವೆ ಹೇಳಿ ಎಂದು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೈಕಮಾಂಡ್ಗೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಹೇಳೋದಕ್ಕೆ ಆಗುತ್ತಾ?
ಇನ್ನು ಸಭೆ ಸೇರಿದ್ದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಶಾಸಕ ಉಮೇಶ್ ಕತ್ತಿ ಅವರ ಮನೆಗೆ ಊಟಕ್ಕೆ ಹೋಗಿದ್ದೆವು. ಉತ್ತರ ಕರ್ನಾಟಕದ ಊಟ ಸಿಗುತ್ತದೆ ಅಂತ ಸೇರಿದ್ದೇವು. ನಾವು ಸಿಎಂ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ಲಿಂಗಾಯತ ಶಾಸಕರನ್ನು ಸಿಎಂ ಕಡೆಗಣಿಸಿದ್ದಾರೊ ಇಲ್ಲವೊ ಅವರನ್ನೇ ಕೇಳಿ.
ನಾವು ಬಂಡಾಯ ವ್ಯಕ್ತಪಡಿಸಿಸೋದಕ್ಕೆ ಅಲ್ಲಿ ಸೇರಿರಲಿಲ್ಲ. ದೆಹಲಿ ಹೈಕಮಾಂಡ್ ಗಮನಕ್ಕೆ ತರೋಣ ಅಂತ ನಾನು ಹೇಳಿಲ್ಲ. ಸಚಿವನಾಗೋಕೆ ಅರ್ಹತೆಯಿಲ್ಲದವನು ನಾನು. ಇನ್ನು ನಾನು ಸಿಎಂ ಆಕಾಂಕ್ಷಿಯಾಗೋಕೆ ಸಾಧ್ಯನಾ? ಊಟದ ವೇಳೆ ಕೆಲವೊಂದು ಚರ್ಚೆ ಮಾಡಿದ್ದೇವೆ.
ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ಎಲ್ಲ ಸೇರಿದ ಮೇಲೆ ಏನಾದ್ರೂ ಇರಬೇಕಲ್ಲವೆ? ಹಾಗಾಗಿ ಕೆಲವೊಂದು ಮಾತುಕತೆ ನಡೆದಿರಬಹುದು. ಅದೆಲ್ಲವನ್ನೂ ನಾನು ಹೇಳೋಕೆ ಸಾಧ್ಯವೇ? ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.
ಊಟಕ್ಕೆ ಕರೆದಿದ್ದೇವು
ಇನ್ನು ಸಭೆಯ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರು, ಕೊರೊನಾವೈರಸ್, ಲಾಕ್ಡೌನ್ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಭೇಟಿ ಆಗಿರಲಿಲ್ಲ. ಊಟದ ಸಮಸ್ಯೆ ಇತ್ತು, ಹೋಟೆಲ್ಗಳಿಗೂ ಹೋಗುವಂತಿಲ್ಲ. ಹಾಗಾಗಿ ಊಟಕ್ಕೆ ಸೇರಿದ್ದೇವು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಊಟಕ್ಕೆ ಕರೆದಿದ್ದೇವು ಎಂದಿದ್ದಾರೆ.
ಊಟದ ಸಮಯದಲ್ಲಿ ರಾಜಕೀಯ ಮಾತನಾಡಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದನ್ನೇ ನಾನೂ ಹೇಳುತ್ತಿದ್ದೇನೆ. ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಎಂದು ಉಮೇಶ್ ಕತ್ತಿ ಹೇಳಿಕೆ ಕೊಟ್ಟಿದ್ದಾರೆ.
ಹಸ್ತಕ್ಷೇಪ ಸಮರ್ಥನೆ
ಇನ್ನು ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಸ್ತಕ್ಷೇಪವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಮರ್ಥಿಸಿ ಕೊಂಡಿದ್ದಾರೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸರ್ಕಾರ ಸುಭದ್ರವಾಗಿದೆ. ಯಡಿಯೂರಪ್ಪ ಸಮರ್ಥ ಮುಖ್ಯಮಂತ್ರಿಯಾಗಿ ನೆರೆ ಕೊರೊನಾದಂತಹ ಎಲ್ಲಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಚುನಾವಣೆ ಇದ್ದಾಗ ನಮ್ಮ ಜೊತೆ ನಮ್ಮ ಮಕ್ಕಳ, ಪತ್ನಿ ಎಲ್ಲರೂ ಇರುತ್ತಾರೆ. ಅಧಿಕಾರ ಇದ್ದಾಗ ಕುಟುಂಬಸ್ಥರು ನಮ್ಮ ಜೊತೆ ಇದ್ರೆ ತಪ್ಪೇನು? ಮಕ್ಕಳು, ಪತ್ನಿ ಅಧಿಕಾರ ನಡೆಸಬಾರದು ನಿಜ, ಆದರೆ ನಮೆಗೆ ಸಲಹೆ ಸೂಚನೆ ಕೊಡಬಹುದಲ್ಲ ಎಂದು ಸರ್ಕಾರದಲ್ಲಿ ವಿಜೇಯಂದ್ರ ಹಸ್ತಕ್ಷೇಪ ಬಗ್ಗೆ ಸಚಿವ ಬಿ. ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಬಂಡಾಯ ಸಭೆಯಲ್ಲಿದ್ದವರು
ಬಂಡಾಯ ಶಾಸಕರ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದ ಮಾಹಿತಿಯಿದೆ. ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಳಗಿ-ಮುರಗೇಶ್ ನಿರಾಣಿ, ಅರಭಾವಿ-ಬಾಲಚಂದ್ರ ಜಾರಕಿಹೊಳಿ, ರಾಯಚೂರು ನಗರ-ಶಿವರಾಜ್ ಪಾಟೀಲ್, ಸುರಪುರ-ರಾಜುಗೌಡ, ಕಲಬುರಗಿ ದಕ್ಷಿಣ-ದತ್ತಾತ್ರೆಯ ಪಾಟೀಲ್ ರೇವೂರು, ಸೇಡಂ-ರಾಜಕುಮಾರ್ ಪಾಟೀಲ್, ಅಳಂದ-ಸುಭಾಷ್ ಗುತ್ತೇದಾರ್, ಕಲಬುರಗಿ ಗ್ರಾಮೀಣ-ಬಸವರಾಜ ಮತ್ತಿಮಡು, ಗಂಗಾವತಿ-ಪರಣ್ಣ ಮುನವಳ್ಳಿ, ಸಿರಗುಪ್ಪ-ಸೋಮಲಿಂಗಪ್ಪ, ಹೊಸದುರ್ಗ-ಗೂಳಿಹಟ್ಟಿ ಶೇಖರ್, ತೇರದಾಳ-ಸಿದ್ದು ಸವದಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಯಲಬುರ್ಗಾ-ಹಾಲಪ್ಪ ಆಚಾರ್ ಸೇರಿದಂತೆ 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.