ವಿಚಾರವಾದಿಗಳು ಪ್ರಚಾರದ ಹಿಂದೆ ಬಿದ್ದಿದ್ದಾರೆ: ಜೋಶಿ ವ್ಯಂಗ್ಯ
ಹುಬ್ಬಳ್ಳಿ, ಅಕ್ಟೋಬರ್, 29 : ಹಿರಿಯ ಸಂಶೋಧಕ ಡಾ.ಕಲಬುರ್ಗಿ ಹತ್ಯೆಯಲ್ಲಿ ಬಲಪಂಥೀಯರ ಕೈವಾಡವಿದೆ ಎಂದು ಆರೋಪಿಸಿರುವ ಸಾಹಿತಿಗಳು ಕೇವಲ ಸಣ್ಣ ಪುಟ್ಟ ಪ್ರಶಸ್ತಿಗಳನ್ನು ಮಾತ್ರ ಹಿಂತಿರುಗಿಸುತ್ತಿದ್ದಾರೆ. ಪ್ರಚಾರದ ಆಮಿಷಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಅಂತ್ಯೋದಯ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಅಕ್ಟೋಬರ್ 28ರ ಬುಧವಾರದಂದು ನಡೆದ ಬಿಜೆಪಿ ಅಂತ್ಯೋದಯ ಸಮಾವೇಶವನ್ನು ಹಲಗೆ ಬಾರಿಸುವುದರ ಮೂಲಕ ಉದ್ಘಾಟಿಸಿದ ಪ್ರಹ್ಲಾದ್ ಜೋಶಿ ಅವರು ಕಲಬುರ್ಗಿ ಹತ್ಯೆಯ ನಿಮಿತ್ತ ಪ್ರಶಸ್ತಿ ಹಿಂತಿರುಗಿಸಿದ ನಾಡಿನ ಸಾಹಿತಿ, ವಿಚಾರವಾದಿಗಳನ್ನು ತರಾಟೆಗೆ ತೆಗೆದುಕೊಂಡರು.[ಪ್ರಶಸ್ತಿ ಹಿಂದಿರುಗಿಸುತ್ತಿರುವ ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು]
'ನಮ್ಮ ಸಾಹಿತಿಗಳು ಇದುವರೆಗೂ ಕೇವಲ 50 ಸಾವಿರ ದೊಳಗಿನ ಮೌಲ್ಯದ ಪ್ರಶಸ್ತಿ ಮಾತ್ರವ ವಾಪಸ್ ಮಾಡಿದ್ದಾರೆ. ಇನ್ನು ಕೆಲವರು ಹಣ ತಮ್ಮಲ್ಲಿಯೇ ಇಟ್ಟುಕೊಂಡು ಕೇವಲ ಫಲಕಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಯಾವುದೇ ಪ್ರಶಸ್ತಿಗಳನ್ನು ವಿಚಾರವಾದಿಗಳು ಮತ್ತು ಸಾಹಿತಿಗಳು ಹಿಂತಿರುಗಿಸಿಲ್ಲ ಎಂದು ಜೋಶಿ ಲೇವಡಿ ಮಾಡಿದರು.
ಹಿಂದುಳಿದ ವರ್ಗದವರ ಬಗ್ಗೆ ಅತೀವ ಕಾಳಜಿ ಇದೆ ಎಂದು ಕಾಂಗ್ರೆಸ್ ಸರ್ಕಾರ ತೋರಿಸಿಕೊಳ್ಳುತ್ತದೆ. ಆದರೆ, ಕೆಲವು ದಿನಗಳ ಹಿಂದೆ ಹತ್ಯೆಯಾದ ಪ್ರಶಾಂತ್ ಪೂಜಾರಿ ಕೂಡ ಹಿಂದುಳಿದ ವರ್ಗದವರು. ಆಗ ಅಹಿಂದ ಬಗ್ಗೆ ಕಾಂಗ್ರೆಸ್ ಸರ್ಕಾರ ಎಲ್ಲಿ ಕಾಳಜಿ ತೋರಿಸಿತು? ಎಂದು ಪ್ರಶ್ನಿಸಿದ ಜೋಶಿ, 52 ವರ್ಷಗಳ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ 42 ವರ್ಷ ಗಾಂಧಿ ಕುಟುಂಬದವರೇ ಅಧಿಕಾರ ಅನುಭವಿಸಿದ್ದಾರೆ ಎಂದರು.[ಕಲಬುರ್ಗಿ ಹತ್ಯೆ ಖಂಡಿಸಿ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ]
ಹಿಂದುಳಿದವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಸಮಾಜದಲ್ಲಿನ ಕಡು ಬಡವರನ್ನು ಗುರುತಿಸಲಿಲ್ಲ. ದೇಶದಲ್ಲಿ ಶೇ.40 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಡವರ ಪರ ಎನ್ನುವ ಕಾಂಗ್ರೆಸ್ ಈ ವರ್ಗಗಳಿಗೆ ಏನು ಕೊಡುಗೆ ನೀಡಿದೆ? ಎಂದು ಪ್ರಶ್ನಿಸಿದರು. ಕೇವಲ ಮತಬ್ಯಾಂಕ್ ಗಳಿಗೆ ಮಾತ್ರ ಹಿಂದುಳಿದ ವರ್ಗದವರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್, ತಮ್ಮ ತಮ್ಮಲ್ಲಿಯೇ ದ್ವೇಷದ ಬೀಜ ಹೊತ್ತಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.