ಲೋಕಸಭೆ ಚುನಾವಣೆ 2019 : ಬಿಜೆಪಿ ಕಾರ್ಯತಂತ್ರ ದಿಢೀರ್ ಬದಲು!
Recommended Video
ಬೆಂಗಳೂರು, ನವೆಂಬರ್ 21 : 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಆದ್ದರಿಂದ, 2019ರ ಲೋಕಸಭಾ ಚುನಾವಣೆಯ ತಂತ್ರದಲ್ಲಿ ಬಿಜೆಪಿ ಬದಲಾವಣೆ ಮಾಡಲಿದೆ.
ನವೆಂಬರ್ 3ರಂದು ನಡೆದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಶಿವಮೊಗ್ಗದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಲ್ಲಿಯೂ ಸಹ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಿತ್ತು ಮೈತ್ರಿ ಪಕ್ಷಗಳು ನೀಡಿದ ಹೊಡೆತ.
ಲೋಕಸಭೆ ಚುನಾವಣೆ : ಸಾಮೂಹಿಕ ನಾಯಕತ್ವದ ಜಪ ಪಠಿಸಿದ ಕರ್ನಾಟಕ ಕಾಂಗ್ರೆಸ್
2019ರ ಲೋಕಸಭಾ ಚುನಾವಣೆಯಲ್ಲಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿಯನ್ನು ಕರ್ನಾಟಕ ಬಿಜೆಪಿ ಹೊಂದಿದೆ. ಆದ್ದರಿಂದ, ಚುನಾವಣೆಯ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಕಟ್ಟಿಹಾಕಲು ತಂತ್ರ ಹಣೆಯಲಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಜೆಡಿಎಸ್ಗೆ 6 ಸೀಟು!
2014ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳ ಪೈಕಿ 17ರಲ್ಲಿ ಜಯಗಳಿಸಿತ್ತು. ಆದರೆ, ಈಗ ಲೋಕಸಭಾ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನದಲ್ಲಿ ಜಯಗಳಿಸಿತ್ತು...
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆ ಏನು?
ಮೈತ್ರಿ ವಿರುದ್ಧ ಹೋರಾಟ
5 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಬಿಜೆಪಿ ತನ್ನ ಕಾರ್ಯತಂತ್ರವನ್ನು ಬದಲಾವಣೆ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು 2019ರ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ. ಆದ್ದರಿಂದ, ಮೈತ್ರಿ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ತನ್ನ ಕಾರ್ಯತಂತ್ರವನ್ನು ದಿಢೀರ್ ಬದಲಾವಣೆ ಮಾಡಿದೆ. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ತಂತ್ರವನ್ನು ರೂಪಿಸಿ, ಅಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸುವಂತೆ ಮಾಡುವುದು ಬಿಜೆಪಿಯ ಗುರಿಯಾಗಿದೆ.
ಹಾಲಿ ಸಂಸದರಿಗೆ ಸೋಲು
ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯದಲ್ಲಿ ಅಭ್ಯರ್ಥಿಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಈ ವರದಿಯಲ್ಲಿ ಕೆಲವು ಹಾಲಿ ಬಿಜೆಪಿ ಸಂಸದರು ಇರುವ ಕ್ಷೇತ್ರಗಳಲ್ಲಿ ಈ ಬಾರಿ ಸೋಲು ಅನುಭವಿಸಬಹುದು ಎಂಬ ವರದಿ ಬಂದಿದೆ. ಈ ಕ್ಷೇತ್ರಗಳ ಬಗ್ಗೆ ಪಕ್ಷ ಹೆಚ್ಚು ಗಮನಹರಿಸಲಿದೆ. ಕಳೆದ ಬಾರಿ ಗೆದ್ದಿರುವ ಯಾವ ಸ್ಥಾನವನ್ನು ಕಳೆದುಕೊಳ್ಳಬಾರದು ಎಂದು ಬಿಜೆಪಿ ತೀರ್ಮಾನಿಸಿದೆ. ಅಗತ್ಯವಿದ್ದರೆ ಅಭ್ಯರ್ಥಿ ಬದಲಾವಣೆ ಮಾಡಲು ಪಕ್ಷ ಮುಂದಾಗಿದೆ.
ಹೊಸ ಮುಖಗಳಿಗೆ ಆದ್ಯತೆ
2019ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು? ಎಂದು ಪಕ್ಷ ರಾಜ್ಯದಲ್ಲಿ ಸಮೀಕ್ಷೆ ನಡೆಸಿದೆ. 20 + ಸ್ಥಾನಗಳಲ್ಲಿ ಜಯಗಳಿಸಬೇಕು ಎಂದರೆ ಎಚ್ಚರಿಕೆಯಿಂದ ಅಭ್ಯರ್ಥಿಗಳನ್ನು ಆರಿಸಬೇಕಾಗಿದೆ. ಆದ್ದರಿಂದ, ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿದೆ. ಯಾವ-ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬದಲಾವಣೆಯಾಗಲಿದ್ದಾರೆ? ಎಂದು ಕಾದು ನೋಡಬೇಕಿದೆ. ಹಾಲಿ ಸಂಸದರಿಗೂ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಮೈಸೂರು ಭಾಗದತ್ತ ಹೆಚ್ಚು ಗಮನ
ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ಈ ಭಾಗದ 59 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಶಾಸಕರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹೆಚ್ಚು ಸ್ಥಾನವನ್ನು ಗಳಿಸುವುದು ಪಕ್ಷದ ಗುರಿಯಾಗಿದೆ.
ಮೈತ್ರಿಗೆ ಎದಿರೇಟು ನೀಡುವ ಅಭ್ಯರ್ಥಿಗೆ ಟಿಕೆಟ್
20+ ಸ್ಥಾನಗಳಲ್ಲಿ ಜಯಗಳಿಸಲು ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿಯಬೇಕು. 11 ಕ್ಷೇತ್ರದಲ್ಲಿ ಬಿಜೆಪಿ ಸೂಕ್ತ ಅಭ್ಯರ್ಥಿಯ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೆಳೆದು ಬಿಜೆಪಿ ಟಿಕೆಟ್ ನೀಡುವ ಚಿಂತನೆಯನ್ನು ಬಿಜೆಪಿ ನಾಯಕರು ನಡೆಸಿದ್ದಾರೆ. ಆದರೆ, ಈ ತಂತ್ರ ಎಷ್ಟರ ಮಟ್ಟಿಗೆ ಫಲ ನೀಡಲಿದೆ? ಎಂದು ಕಾದು ನೋಡಬೇಕು.