ಗುರುಗ್ರಾಮದ ರೆಸಾರ್ಟ್ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್ನ 5 ಶಾಸಕರು ನಾಪತ್ತೆ!
ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ಗಳಿಗೆ ರಾಜ್ಯ ರಾಜಕೀಯದಲ್ಲಿನ 'ಕ್ರಾಂತಿ'ಗೆ ಸಾಕ್ಷಿಯಾಗುವ ವಾತಾವರಣ ಸೃಷ್ಟಿಯಾಗಿದೆ. ಅತ್ತ ಸಂಪುಟದಲ್ಲಿ ಸ್ಥಾನ ಸಿಗದೆ, ಇತ್ತ ನಿಗಮ, ಮಂಡಳಿಯ ಅಧಿಕಾರವೂ ದೊರಕದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ನ ಕೆಲವು ಶಾಸಕರು ಸರ್ಕಾರದ ವಿರುದ್ಧ ಸಿಡಿದೆದ್ದು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಕೈ ನಾಯಕರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ರಚಿಸುವ 'ಸಂಕ್ರಮಣ'ದ ನಿರೀಕ್ಷೆಯಲ್ಲಿರುವ ಬಿಜೆಪಿ ನಾಯಕರು ತಮ್ಮ ಶಾಸಕರು ಸಮ್ಮಿಶ್ರ ಸರ್ಕಾರದ ಜೋಡಿ ಪಕ್ಷಗಳ ಪಾಲಾಗದಂತೆ ಕಾಪಾಡಿಕೊಳ್ಳುವ ಸಲುವಾಗಿ ದೆಹಲಿಯ ಗುರುಗ್ರಾಮದ ರೆಸಾರ್ಟ್ಗೆ ಕರೆದೊಯ್ದಿದ್ದಾರೆ.
ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಐಷಾರಾಮಿ ರೆಸಾರ್ಟ್ನಲ್ಲಿ ಬಿಜೆಪಿಯ ಎಲ್ಲ ಶಾಸಕರು ವಾಸ್ತವ್ಯ ಹೂಡಿದ್ದು, ಹೋಟೆಲ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಬಿ.ಎಸ್. ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎಲ್ಲ ಶಾಸಕರಿಗೂ ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.
ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?
ಅದೇ ಹೋಟೆಲ್ನಲ್ಲಿ ಯಡಿಯೂರಪ್ಪ ಅವರು ಬೆಳಿಗ್ಗೆ ಉಪಾಹಾರ ಕೂಟ ಏರ್ಪಡಿಸಿದ್ದು, ಅದರಲ್ಲಿ ಹರಿಯಾಣದ ಸಚಿವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ವಿರುದ್ಧ ಆರೋಪ
'ಜೆಡಿಎಸ್ ಪಕ್ಷದವರು ಬಿಜೆಪಿ ಶಾಸಕರಲ್ಲಿ ಒಡಕು ಮೂಡಿಸಿ ಕೆಲವರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾವು ದೆಹಲಿಯಲ್ಲಿ ಒಂದೆರಡು ದಿನ ಇರಲಿದ್ದೇವೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಮುಂಬೈನಲ್ಲಿ ಶಾಸಕರು, ಬಿಜೆಪಿಯಿಂದ ಆಪರೇಷನ್ ಕಮಲ : ಡಿಕೆಶಿ
ಲೋಕಸಭೆ ಚುನಾವಣೆಗಾಗಿ!
'ಬಿಜೆಪಿ ಎಲ್ಲ 104 ಶಾಸಕರು ಇದ್ದು, ಎಲ್ಲರೂ ಜತೆಯಾಗಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ನಮ್ಮನ್ನು ಗುರುಗ್ರಾಮಕ್ಕೆ ಕರೆಸಲಾಗಿದೆ. ಸರ್ಕಾರ ರಚಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಹಾಗೊಂದು ವೇಳೆ ಅಂತಹ ಚಟುವಟಿಕೆಗಳು ನಡೆದರೆ ನಮ್ಮ ನಾಯಕರು ನಿಮಗೆ ಮಾಹಿತಿ ನೀಡುತ್ತಾರೆ' ಎಂದು ಬಿಜೆಪಿ ಶಾಸಕ ನಿಪ್ಪಾಣಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಆಪರೇಷನ್ ಕಮಲಕ್ಕೆ ಇದೇ ಸಾಕ್ಷಿ
ಆದರೆ, ದೆಹಲಿಯಲ್ಲಿ ತಮ್ಮ ಎಲ್ಲ ಶಾಸಕರಿಗೆ ರಕ್ಷಣೆ ನೀಡುವುದರ ಜೊತೆಗೆ, ಕಾಂಗ್ರೆಸ್ನ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸುವ ಮೂಲಕ ಆಪರೇಷನ್ ಕಮಲಕ್ಕೆ ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್, ಬಿಜೆಪಿ ವಿರುದ್ಧ ಮತ್ತೆ ಆಪರೇಷನ್ ಕಮಲದ ಆರೋಪ ಮಾಡಿದೆ. ಕಾಂಗ್ರೆಸ್ನ ಶಾಸಕರ ಗುಂಪೊಂದು ನಾಪತ್ತೆಯಾಗಿರುವುದು ಆಪರೇಷನ್ ಕಮಲವನ್ನು ಬಿಜೆಪಿ ಆರಂಭಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ದೂರಿದ್ದಾರೆ.
ತಾನಾಗಿಯೇ ಉರುಳಲಿದೆ
ತಾವು ಸಮ್ಮಿಶ್ರ ಸರ್ಕಾರವನ್ನು ಕೆಡವಲು ಮುಂದಾಗುತ್ತಿಲ್ಲ. ಆದರೆ, ಅದು ತಾನಾಗಿಯೇ ಉರುಳಿ ಬೀಳಲಿದೆ ಎಂದು ಬಿಜೆಪಿಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
'ಸರ್ಕಾರ ರಚಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡಕ್ಕೂ ಸಾಕಷ್ಟು ಸೀಟುಗಳ ಕೊರತೆಯಿತ್ತು. ಹೀಗಾಗಿ ಇಬ್ಬರೂ ಮೈತ್ರಿ ಮಾಡಿಕೊಂಡರು. ಈಗ ಅವರ ನಡುವೆಯೇ ಜಗಳ ನಡೆಯುತ್ತಿದೆ. ಈ ಸರ್ಕಾರ ಅಕಾಲಿಕವಾಗಿ ಅಂತ್ಯಗೊಳ್ಳಲು ನಾವು ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ' ಎಂದು ಅವರು ಹೇಳಿದ್ದಾರೆ.
Operation ಕಮಲ ನಿಜವೆಷ್ಟು, ಕತೆಯೆಷ್ಟು?: ಇಲ್ಲಿದೆ ಲೆಕ್ಕಾಚಾರ
ಮುಂಬೈನಲ್ಲಿ ಕಾಂಗ್ರೆಸ್ ಶಾಸಕರು
ಅತ್ತ ಕಾಂಗ್ರೆಸ್ನ ಐವರು ಅತೃಪ್ತ ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಹೇಳಲಾಗಿದೆ. ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಲು ಕಾಂಗ್ರೆಸ್ ಮುಖಂಡ, ಸಚಿವ ಡಿ.ಕೆ. ಶಿವಕುಮಾರ್ ಮುಂಬೈಗೆ ತೆರಳಲಿದ್ದಾರೆ.
ಶಾಸಕರು ತಂಗಿರುವ ರನೈಸಾನ್ಸ್ ಹೋಟೆಲ್ ಮುಂದೆ ಪ್ರತಿಭಟನೆ ನಡೆಸಲು ಮುಂಬೈನ ಯುವ ಕಾಂಗ್ರೆಸ್ ಮುಖಂಡರು ಉದ್ದೇಶಿಸಿದ್ದಾರೆ. ಪ್ರತಿಭಟನೆ ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.