ಕನ್ಹಯ್ಯ ಲಾಲ್ ಕೊಲೆ: ರಾಜಸ್ಥಾನದಲ್ಲಿ ಶಾಂತಿ ಕಾಪಾಡಲು ಎಂ.ಎನ್. ದಿನೇಶ್
ಬೆಂಗಳೂರು, ಜು. 02: ಕನ್ಹಯ್ಯ ಲಾಲ್ ಹತ್ಯೆ ಬಳಿಕ ರಾಜಸ್ಥಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಉದಯಪುರದಲ್ಲಿ 4000 ಸಾವಿರ ಜನ ಶನಿವಾರ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಕನ್ಹಯ್ಯ ಲಾಲ್ ಹತ್ಯೆ ಬಳಿಕ ಉದಯಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಯಲು ಕನ್ನಡ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರನ್ನು ಉದಯಪುರಕ್ಕೆ ನಿಯೋಜಿಸಿದೆ.
ರಾಜಸ್ಥಾನ ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಎನ್. ದಿನೇಶ್ ಅವರು ಇದೀಗ ರಾಜಸ್ಥಾನದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದಿನೇಶ್ ಅವರು ಖಾಕಿ ತೊಟ್ಟು ಉದಯಪುರದಲ್ಲಿ ಬೀದಿಗೆ ಇಳಿಯುತ್ತಿದ್ದಂತೆ ಮುಷ್ಕರ ನಿರತರಲ್ಲಿ ಅನೇಕರು ಅವರ ಜತೆಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ರಾಜಸ್ಥಾನದಲ್ಲಿ ಪವರ್ಫುಲ್ ಅಧಿಕಾರಿಯಾಗಿ ಮಿಂಚುತ್ತಿರುವ ಕನ್ನಡಿಗ ಐಪಿಎಸ್ ಅಧಿಕಾರಿ ಎಂ ಎನ್. ದಿನೇಶ್ ರಾಜಸ್ಥಾನ ಪಾಲಿಗೆ ಟ್ರಬಲ್ ಶೂಟ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಮಿಂಚುತ್ತಿರುವ ಕನ್ನಡಿಗ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಬಗ್ಗೆ ವಿಕಿಪಿಡಿಯಾ ಪೇಜ್
ಎಂ.ಎನ್. ದಿನೇಶ್ ಸಮವಸ್ತ್ರ ಧರಿಸಿ ಉದಯಪುರಕ್ಕೆ ಇಳಿಯುತ್ತಿದ್ದಂತೆ ಹಿಂಸಾಚಾರ ಸಂಪೂರ್ಣ ತಹಬಂದಿಗೆ ಬಂದಿದೆ. ರಾಜಸ್ಥಾನದ ಮಾಫಿಯ ಡಾನ್ಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಎಂ.ಎನ್. ದಿನೇಶ್ ಅವರ ಕಾರ್ಯ ಶೈಲಿಗೆ ಇಡೀ ರಾಜಸ್ಥಾನವೇ ಮಾರು ಹೋಗಿದೆ.
ಚಂಬಲ್ ಕಣಿವೆ ಡಕಾಯಿತರಿಂದ ಹಿಡಿದು ನಾನಾ ಡಾನ್ಗಳನ್ನು ಎಂ.ಎನ್. ದಿನೇಶ್ ಮಟ್ಟ ಹಾಕಿದ್ದರು. ಉಗ್ರಗಾಮಿ ಚಟುವಟಿಕೆ ಹಿನ್ನೆಲೆಯಲ್ಲಿ ಸೊಹ್ರಾಬುದ್ದೀನ್ ಪ್ರಜಾಪ್ರತಿ ತುಳಸಿರಾಮ್ ಎನ್ ಕೌಂಟರ್ ಕೇಸಿನಲ್ಲಿ ಎಂ.ಎನ್. ದಿನೇಶ್ ಸಂಕಷ್ಟಕ್ಕೆ ಒಳಗಾಗಿದ್ದರು. ಪ್ರಕರಣದಲ್ಲಿ ಆರೋಪ ಮುಕ್ತರಾಗಿ ಹೊರ ಬಂದ ನಂತರ ಅವರ ಜನಪ್ರಿಯತೆ ರಾಜಸ್ಥಾನದಲ್ಲಿ ಗಲ್ಲಿ ಗಲ್ಲಿಗೂ ತಲುಪಿದೆ. ಇದೀಗ ಉದಯಪುರದಲ್ಲಿ ಎದ್ದಿರುವ ಕೋಮು ಹಿಂಸಾಚಾರ ನಿಯಂತ್ರಿಸಲು ದಿನೇಶ್ ಅವರಿಗೆ ಜವಾಬ್ಧಾರಿ ವಹಿಸಲಾಗಿದೆ.
ಆರೋಪಿಗಳ ಸೆರೆ:
ಇನ್ನು ಟೈಲರ್ ಕನ್ಹಯ್ಯಲಾಲ್ನನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಅರೋಪಿಗಳ ಮೇಲೆ ಜಯಪುರ ನ್ಯಾಯಾಲಯದ ಹೊರಗೆ ಜನರು ಹಲ್ಲೆ ನಡೆಸಿದ್ದಾರೆ. ರಿಯಾಜ್ ಅಖ್ತಾರಿ, ಘೌಸ್ ಮಹಮದ್, ಮೌಸಿನ್ ಮತ್ತು ಆಸೀಫ್ ಎಂಬುವರನ್ನು ಎನ್ಐಎಎ ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಪ್ರವಾದಿ ಮಹಮದ್ರನ್ನು ಅವಹೇಳನ ಮಾಡಿದ ಕಾರಣಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಹಾಕಿದ್ದ ಪೋಸ್ಟ್ ನ್ನು ಬೆಂಬಲಿಸಿ ಟೈಲರ್ ಕನ್ಹಯ್ಯ ಲಾಲ್ ಶೇರ್ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಆರೋಪಿಗಳು ಕನ್ಹಯ್ಯ ಲಾಲ್ ಕತ್ತು ಸೀಳಿ ಕೊಲೆ ಮಾಡಿ ಘಟನೆ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಕೂಡಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
Recommended Video