ಕರ್ನಾಟಕ ಬಂದ್; ಯಾವ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತವಾಗಿದ್ದರೆ, ರಾಜ್ಯದ ಇನ್ನೂ ಕೆಲವೆಡೆ ನೀರಸ ಪ್ರತಿಕ್ರಿಯೆ ಲಭಿಸಿದೆ. ಅಖಂಡ ಕರ್ನಾಟಕದಾದ್ಯಂತ ಬಂದ್ಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ.
ಸರೋಜಿನಿ ಮಹಿಷಿ ವರದಿ ಕುರಿತು ರಾಜ್ಯ ಸರ್ಕಾರ ಚರ್ಚೆಗೆ ಸಿದ್ಧ ಎಂದು ನಿನ್ನೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂದ್ಗೆ ಕರೆ ಕೊಟ್ಟಿರುವ ಕನ್ನಡಪರ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದು, ಕೆಲವು ಸಂಘಟನೆಗಳು ಬೆಂಬಲ ಹಿಂಪಡೆಯಲು ಕಾರಣವಾಗಿರಬಹುದು.
Karnataka Bandh LIVE: ಕನ್ನಡಿಗರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಬದ್ದ
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕ್ನನಡ ಸಂಘಟನೆಗಳ ಒಕ್ಕೂಟ ಲಾರಿ ಮಾಲಿಕರ ಸಂಘ, ಖಾಸಗಿ ಶಾಲಾ ಒಕ್ಕೂಟ, ಸಾರಿಗೆ ನೌಕರರು, ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್ ಮುಂತಾದ ಸಂಘಟನೆಗಳು ಬಂದ್ ನಿಂದ ದೂರವುಳಿದಿರುವುದು ಬಂದ್ ಬಿಸಿ ತಟ್ಟದಿರಲು ಕಾರಣವಿರಬಹುದು. ರಾಜ್ಯದಲ್ಲಿ ಎಲ್ಲೆಲ್ಲಿ ಬಂದ್ ನಡೆದಿದೆ ಎಂಬ ಮಾಹಿತಿ ಇಲ್ಲಿದೆ...
ಮೈಸೂರಿನಲ್ಲಿ ತೆಂಗಿನಕಾಯಿ ಚಿಪ್ಪಿನ ಪ್ರತಿಭಟನೆ
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಮೈಸೂರಿನಲ್ಲಿ ತೆಂಗಿನಕಾಯಿ ಚಿಪ್ಪು ಚಳವಳಿ ನಡೆಯಿತು. ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ತೆಂಗಿನಕಾಯಿ ಚಿಪ್ಪುಗಳನ್ನು ಪ್ರದರ್ಶನ ಮಾಡಿ, ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಮಯದಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಸೇರಿದಂತೆ ಹಲವರು ಭಾಗಿಯಾಗಿದ್ದರು.
"ಸರ್ಕಾರಕ್ಕೆ ಕನ್ನಡದ ಅಸ್ಮಿತೆ ಬಗ್ಗೆ ಆಸ್ಥೆ ಇಲ್ಲ. ಬಂದ್ ಬೇಕಾಗಿಲ್ಲ, ತೀವ್ರವಾದ ಪ್ರತಿಭಟನೆ ಆಗಬೇಕು" ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ತಮ್ಮ ಮಾತುಗಳನ್ನು ಹಂಚಿಕೊಂಡರು. "ಸರೋಜಿನಿ ಮಹಿಷಿ ವರದಿ ಕನ್ನಡಿಗರ ಅನ್ನದ ಪ್ರಶ್ನೆ. ಈ ವರದಿಯ ಬಹುಪಾಲು ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವೇ ಜಾರಿ ಮಾಡಬಹುದು. ಕೆಲ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಜಾರಿ ಮಾಡಬೇಕು. ಪರಿಷ್ಕೃತ ವರದಿ ಜಾರಿ ಮಾಡಲೇಬೇಕು. ಆದರೆ ಇದುವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳೂ ವರದಿಯನ್ನು ಜಾರಿ ಮಾಡುವ ಬದ್ಧತೆ ತೋರಿಲ್ಲ ಎಂಬುದು ಕನ್ನಡದ ದುರ್ದೈವ. ಇದಕ್ಕಾಗಿ ಬಂದ್ ಮಾಡಬೇಕಿಲ್ಲ. ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ತೀವ್ರ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಬೇಕು" ಎಂದಿದ್ದಾರೆ.
ಕೃಷ್ಣನಗರಿಯಲ್ಲಿ ಬಂದ್ ಇಲ್ಲ
ಬಂದ್ ಗೆ ಉಡುಪಿಯಲ್ಲಿ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಉಡುಪಿ ಜಿಲ್ಲೆಯಾದ್ಯಂತ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿದೆ. ಮುಖ್ಯವಾಗಿ ಯಾವುದೇ ಸಂಘಟನೆಗಳೂ ಉಡುಪಿಯಲ್ಲಿ ಬಂದ್ ನಡೆಸುವಂತೆ ಕರೆಯನ್ನೂ ನೀಡಿಲ್ಲ. ಹೀಗಾಗಿ ಬಂದ್ ಇರುವ ವಿಷಯ ಜಿಲ್ಲೆಯ ಜನತೆಗೆ ತಿಳಿದೇ ಇಲ್ಲವೇನೋ ಎಂಬಂತೆ ಜನಜೀವನ ಎಂದಿನಂತಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಯಕರ್ನಾಟಕ ಸಂಘಟನೆಯ ಮುಖಂಡರು, "ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ರಾಜ್ಯದ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಕನ್ನಡ ಪರ ಹೋರಾಟಕ್ಕೆ ಬೆಂಬಲ ನೀಡಲು ಜಯಕರ್ನಾಟಕ ಸದಾ ಸಿದ್ಧವಾಗಿದೆ. ಆದರೆ ಬಂದ್ ನಡೆಸಿ ಜನರಿಗೆ ತೊಂದರೆ ನೀಡಲು ನಮ್ಮ ಸಂಘಟನೆ ಬಯಸುವುದಿಲ್ಲ" ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಎಫೆಕ್ಟ್ ಹೇಗಿದೆ?
ಮಂಗಳೂರಿನಲ್ಲಿ ಆಂಧ್ರ ಬಸ್ ಮೇಲೆ ಕಲ್ಲು ತೂರಾಟ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಲ್ಲಿ ಆಂಧ್ರ ಪ್ರದೇಶದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ತಿರುಪತಿಯಿಂದ ಮಂಗಳೂರಿಗೆ ಬಸ್ ಹೊರಟಿದ್ದು ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಬಸ್ ನ ಗಾಜು ಪುಡಿಪುಡಿಯಾಗಿದೆ. ಈ ಘಟನೆಗೂ ಬಂದ್ ಗೂ ಸಂಬಂಧವಿರಬಹುದು ಎನ್ನಲಾಗಿದೆ.
ದಾವಣಗೆರೆಯಲ್ಲಿ ಅಣುಕು ಪ್ರದರ್ಶನದ ಮೂಲಕ ಪ್ರತಿಭಟನೆ
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ವಿನೂತನ ರೀತಿ ಪ್ರತಿಭಟನೆ ಮಾಡುವುದರ ಮೂಲಕ ರಾಜ್ಯ ಸರ್ಕಾರದ ಹಾಗೂ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ನಗರದ ಜಯದೇವ ಸರ್ಕಲ್ ನಲ್ಲಿ ಕನ್ನಡ ಪರ ಸಂಘಟನೆಯ ಹೋರಾಟಗಾರರು ಜಮಾಯಿಸಿದ್ದು, ಕನ್ನಡಿಗರಿಗೆ ಉದ್ಯೋಗಾವಕಾಶ ಒದಗಿಸುವಂತೆ ಒತ್ತಾಯಿಸಿದ್ದಾರೆ. ಕಾರ್ಯಕರ್ತರಿಗೆ ತೆಲುಗು, ತಮಿಳು, ಮರಾಠಿಗ ಎನ್ನುವಂತಹ ನಾಮ ಫಲಕಗಳನ್ನು ಹಾಕಿ ಕನ್ನಡಿಗ ಅನಾಥನಾಗಿರುವಂತೆ ಬಿಂಬಿಸುವ ಅಣಕು ಪ್ರದರ್ಶನವನ್ನು ನೀಡಿದ್ದಾರೆ. ಜಯದೇವ ಸರ್ಕಲ್ನಿಂದ ಎಸಿ ಕಚೇರಿ ವರೆಗೂ ಪ್ರತಿಭಟನಾ rally ನಡೆಸಿ ಉಪವಿಭಾಗಧಿಕಾರಿಗಳಿಗೆ ಮನವಿ ನೀಡಿ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.