ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್
ಬೆಂಗಳೂರು, ಸೆಪ್ಟೆಂಬರ್ 25 : ಕರ್ನಾಟಕ ಬಂದ್ಗೆ ಕರೆ ನೀಡಿರುವ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಡೆಸಿದ ಸಭೆ ವಿಫಲವಾಗಿದೆ. ರೈತರ ಮನವಿಗೆ ಸರ್ಕಾರ ಸ್ಪಂದಿಸದ ಕಾರಣ ಸೆ.28ರಂದು ಬಂದ್ ನಡೆಯಲಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್, ಕೃಷಿ ಸಚಿವ ಬಿ. ಸಿ. ಪಾಟೀಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಬಂದ್ಗೆ ಸಿದ್ಧತೆ ಮಾಡುತ್ತಿದ್ದೇವೆ; ಕೋಡಿಹಳ್ಳಿ ಚಂದ್ರಶೇಖರ್
ಸಭೆಯಲ್ಲಿ ರೈತರು ಮಾಡಿದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ. ರೈತರಿಗೆ ಮನವರಿಕೆ ಮಾಡಿಕೊಡಲು ಬಿ. ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದರು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ಯಾವುದೇ ಬದಲಾವಣೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಲಿಲ್ಲ.
ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್; ಕೋಡಿಹಳ್ಳಿ ಚಂದ್ರಶೇಖರ್
ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ರೈತರ ನಿಯೋಗಕ್ಕೆ ಭರವಸೆ ನೀಡಿದರು. ಆದರೆ, ರೈತ ಮುಖಂಡರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ಗೆ ರೈತರು ತೀರ್ಮಾನ ಮಾಡಿದರು.
ರೈತರ ಬೃಹತ್ ಪ್ರತಿಭಟನೆ; ಬಾರುಕೋಲು ಬೀಸಿ ಆಕ್ರೋಶ
ಸಭೆಯ ಬಳಿಕ ಮಾರುತಿ ಮಾನ್ಪಡೆ ಹೇಳಿಕೆ
ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, "ಸಿಎಂ ಸಮಜಾಯಿಸಿ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ. ಅವರು ನಮಗೆ ಉಪದೇಶ ಮಾಡಲು ಬಂದಿದ್ದರು ಅದನ್ನು ನಾವು ಒಪ್ಪಿಕೊಂಡಿಲ್ಲ" ಎಂದರು.
ಅವರ ಮನವಿಗೆ ನಾವು ಸ್ಪಂದಿಸಿಲ್ಲ
ಸಭೆಯ ಬಳಿಕ ಮಾತನಾಡಿದ ರೈತ ಸಂಘದ ಕೊಡಗಲ್ ಪುರ ನಾಗೇಂದ್ರ, "ನಾವು ಅವರ ಮನವಿಗೆ ಸ್ಪಂದಿಸಿಲ್ಲ. ನಾವು ಸೆಪ್ಟೆಂಬರ್ 28ರ ಬಂದ್ ಮಾಡೇ ಮಾಡುತ್ತೇವೆ. ಪ್ರತಿ ಊರಿನಲ್ಲಿಯೂ ಬಿಜೆಪಿ ಸರ್ಕಾರದ ವಿರುದ್ಧವಾಗಿ ಮನೆ ಮನೆಯಿಂದ ಹೋರಾಟ ಆರಂಭ ಮಾಡುತ್ತೇವೆ" ಎಂದು ಹೇಳಿದರು.
ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ
ಸಭೆಯ ಬಳಿಕ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, "ಯಡಿಯೂರಪ್ಪ ಅವರು ಬಿಲ್ ವಾಪಸ್ ಪಡೆಯುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಮೋದಿ ಮಾತು ಮೀರಲು ಸಿದ್ಧರಿಲ್ಲ. ನಾವು ಸೋಮವಾರ ಬಂದ್ ಮಾಡುತ್ತೇವೆ. ರೈತರು ಬೆಳೆದ ಅನ್ನ ತಿನ್ನುವ ಎಲ್ಲರೂ ಬಂದ್ ಬೆಂಬಲಿಸಬೇಕು" ಎಂದು ಕರೆ ನೀಡಿದರು.
Recommended Video
ಸೋಮವಾರ ಬಂದ್
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ರೈತ ಸಂಘ ಹೇಳಿದೆ. ರೈತ ಸಂಘದ ಜೊತೆ ಇತರ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.