ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಎಫೆಕ್ಟ್ ಹೇಗಿದೆ?
ಬೆಂಗಳೂರು, ಫೆ. 13: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಕೊಟ್ಟಿದ್ದ ಬಂದ್ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಜನಜೀವನ ಎಂದಿನಂತೆ ಸಾಗಿದ್ದು, ಪ್ರಮುಖ ಎಲ್ಲ ಸೇವೆಗಳು ಸರಾಗವಾಗಿ ನಡೆಯುತ್ತಿವೆ. ಅಲ್ಲಲ್ಲಿ ಕೆಲವು ವಾಗ್ವಾದಗಳು, ಪೊಲೀಸರೊಂದಿಗೆ ಮಾತನ ಚಕಮಕಿ ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಇನ್ನು ಅಖಂಡ ಕರ್ನಾಟಕದಾದ್ಯಂತ ಬಂದ್ಗೆ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಎಂದಿನಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೊ, ಆಟೋ ಸಂಚಾರ ಮುಕ್ತವಾಗಿದೆ. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು, ವೈದ್ಯಕೀಯ ಸೇವೆ ಎಂದಿನಂತಿದೆ.
Karnataka Bandh LIVE: ಕನ್ನಡಿಗರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಬದ್ದ
ಪ್ರಬಲ ಕನ್ನಡಪರ ಸಂಘಟನೆಗಳು ಬಂದ್ ಕರೆಯಿಂದ ದೂರ ಉಳಿದಿರುವುದು ಇದಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಜೊತೆಗೆ ಸರೋಜಿನಿ ಮಹಿಷಿ ವರದಿ ಕುರಿತು ರಾಜ್ಯ ಸರ್ಕಾರ ಚರ್ಚೆಗೆ ಸಿದ್ಧ ಎಂದು ನಿನ್ನೆಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂದ್ಗೆ ಕರೆ ಕೊಟ್ಟಿರುವ ಕನ್ನಡಪರ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಬಂದ್ ಮಧ್ಯೆ ಎಂದಿನಂತಿದೆ ಬೆಂಗಳೂರು ಜನ ಜೀವನ
ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಅಖಂಡ ಕರ್ನಾಟಕ ಬಂದ್ಗೆ ಬೆಂಗಳೂರು ಜನಜೀವನದ ಮೇಲೆ ಯಾವುದೇ ಪರಿಣಾ ಬೀರಿಲ್ಲ. ಎಂದಿನಂತೆ ಬಿಎಂಟಿಸಿ, ಆಟೋ, ಮೆಟ್ರೊ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಎಂದಿನಂತೆ ಇವೆ. ಹೀಗಾಗಿ ಜನರ ಸಂಚಾರಕ್ಕೆ ಯಾವುದೇ ಅಡ್ಡಿ ಆಗಿಲ್ಲ. ಜನಜೀವನ ಎಂದಿನಂತೆ ನಡೆದಿದೆ.
ಬಂದ್ನಿಂದ ದೂರ ಉಳಿದ ಪ್ರಬಲ ಕನ್ನಡ ಸಂಘಟನೆಗಳು
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕ್ನನಡ ಸಂಘಟನೆಗಳ ಒಕ್ಕೂಟ ಲಾರೀಮಾಲಿಕರ ಸಂಘ, ಖಾಸಗಿ ಶಾಲಾ ಒಕ್ಕೂಟ, ಸಾರಿಗೆ ನೌಕರರು, ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್ ಬೆಂಬಲ ಕೊಟ್ಟಿಲ್ಲ. ಆದರಿಂದಲೇ ಬೆಂಗಳೂರಿನ ಜನಜೀವನದ ಮೇಲೆ ಬಂದ್ ಪರಿಣಾಮ ಅಷ್ಟಾಗಿ ಆಗಿಲ್ಲ ಎನ್ನಲಾಗಿದೆ.
ಮಹಿಷಿ ವರದಿಗಾಗಿ ಮಾರ್ಚ್ 4 ಕ್ಕೆ ವಿಧಾನಸೌಧ ಬಂದ್ ಅಂತೆ!
ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವುದಾಗಿ, ಆದರೆ ಬಂದ್ಗೆ ಬೆಂಬಲವಿಲ್ಲ ಎಂದು ಮೊದಲೇ ಈ ಸಂಘಟನೆಗಳು ಸ್ಪಷ್ಟಪಡಿಸಿದ್ದವು.
ಕೆ.ಆರ್. ಮಾರುಕಟ್ಟೆ ವಹಿವಾಟು ಎಂದಿನಂತೆ
ಡಾ. ಸರೋಜಿನಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆ.ಆರ್. ಮಾರ್ಕೆಟ್ ವ್ಯಾಪಾರಿಗಳು, ಗ್ರಾಹಕರು ಯಾವುದೇ ಬೆಂಬಲ ಕೊಟ್ಟಿಲ್ಲ. ಹೀಗಾಗಿ ಕೆ.ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆದಿದೆ. ಬಿಎಂಟಿಸಿ ಬಸ್ಗಳು, ಆಟೋ ಸೇವೆಗಳು ಎಂದಿನಂತೆ ಲಭ್ಯವಾಗಿರುವುದರಿಂದ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಿಗು ಬಂದ್ ಬಿಸಿ ತಟ್ಟಿಲ್ಲ. ಮಾರುಕಟ್ಟೆ ಸೇರಿದಂತೆ ಸುತ್ತಲೂ ಯಾವುದೇ ಗಲಾಟೆ, ಗಲಭೆಗಳು ಉಂಟಾಗದಂತೆ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ನಮ್ಮನ್ನ ಬಂಧಿಸೋಕೆ ಮುಂದಾದ್ರೆ ಬೆಂಕಿ ಹಚ್ಚುವ ಕೆಲಸ ಮಾಡುತ್ತೇವೆ
ಇನ್ನು ಪೊಲೀಸರು ರಾಜ್ಯ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದಾರೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಅಧ್ಯಕ್ಷ ಜಯರಾಜ್ ನಾಯ್ಡು ಆರೋಪಿಸಿದ್ದಾರೆ. ಪೊಲೀಸರು ನಮ್ಮನ್ನ ಬಲವಂತವಾಗಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರು ನಮಗೆ ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದಾರೆ.
ನಾವು ಹೋಟೆಲ್ ನಲ್ಲಿ ನಿಂತಿದ್ದಾಗ ಬಂಧಿಸೋಕೆ ಮುಂದಾಗುತ್ತಾರೆ, ನಮ್ಮನ್ನ ಬಂಧಿಸೋದಕ್ಕೆ ಮುಂದಾದರೆ ಮಾಡಿದರೆ ಬೆಂಕಿ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಜೈಲಿಗೆ ಹಾಕ್ತಿರಾ ಹಾಕಿ, ನಾಳೆ ಪೊಲೀಸರಿಗೆ ಹೆಚ್ಚು ಕಮ್ಮಿಯಾದ್ರೆ ಯಾವೊಬ್ಬನೂ ಪ್ರತಿಭಟಿಸೋಲ್ಲ, ನಾವು ಹೋರಾಟ ಮಾಡುತ್ತೇವೆ. ನಿಮಗೆ ನಾಚಿಗೆ ಆಗೋದೊಲ್ವಾ? ನೀವು ಬಿಜೆಪಿ ಸರ್ಕಾರದ ಕೈಗೊಂಬೆ ಎಂದು ನಮ್ಮ ಕರವೆ ಸಂಘಟನೆ ಜಯರಾಜ್ ನಾಯ್ಡು ಹೇಳಿಕೆ ಕೊಟ್ಟಿದ್ದಾರೆ.
ಆನಂದ್ ರಾವ್ ವೃತ್ತದ ಬಳಿ ನಾಗೇಶ್ ತಡೆದ ಪೊಲೀಸರು
ಆನಂದರಾವ್ ವೃತ್ತದ ಬಳಿ ಅಂಗಡಿ-ಮುಗ್ಗಟ್ಟು ಬಂದ್ ಮಾಡಿ ಎಂದು ಮನವಿ ಮಾಡಲು ಹೋರಟಿದ್ದ ಕನ್ನಡ ಪರ ಸಂಘಟನೆ ಅಧ್ಯಕ್ಷ ಎಚ್ ಬಿ ನಾಗೇಶ್ ಗೌಡ ರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ನಾಗೇಶ್ಗೌಡ, ನಾವು ಬಂದ್ ಕರೆ ಕೊಟ್ಟಿದ್ದಕ್ಕೆ ರಾತ್ರಿಯಿಂದಲೇ ನಮ್ಮನ್ನು ಪೊಲೀಸರು ಹಿಂಬಾಲಿಸುತ್ತಿದ್ದಾರೆ. ಪೊಲೀಸ್ ಇಲಾಖೆ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಜನರು ಸ್ವಯಂಪ್ರೇರಿತವಾಗಿ ಅಂಗಡಿ ಬಾಗಿಲು ಮುಚ್ಚಿದ್ರೆ ಪೊಲೀಸರೇ ತೆರೆಸುತ್ತಿದ್ದಾರೆ. ಸರ್ಕಾರ ಬಂದ್ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ. ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದೆ ಎಂದು ಬಂದ್ಗೆ ಕರೆಕೊಟ್ಟಿದ್ದ ನಾಗೇಶ್ಗೌಡ ಹೇಳಿಕೆ ಕೊಟ್ಟಿದ್ದಾರೆ.
ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಎಂದಿನಂತೆ
ವೈದ್ಯಕೀಯ ಸೇವೆ ಬೆಂಗಳೂರಿನಾದ್ಯಂತ ಎಂದನಂತೆಯೆ ಇದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಬಂದ್ ಕರೆಗೆ ವೈದ್ಯರು ಬೆಂಬಲ ಕೊಟ್ಟಿಲ್ಲ. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆ ಎಲ್ಲ ಆಸ್ಪತ್ರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಶಾಲಾ-ಕಾಲೇಜುಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ. ಎಂದಿನಂತೆಯೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬಂದಿದ್ದಾರೆ.
ಟೌನ್ಹಾಲ್ ಎದುರು ಪೊಲೀಸ್ ಬಿಗಿ ಬಂದೋಬಸ್ತ್
ಟೌನ್ಹಾಲ್ನಿಂದ ಸ್ವಾತಂತ್ಯ ಉದ್ಯಾನವನದ ವರೆಗೆ ಮೆರವಣಿಗೆ ನಡೆಸಲು ಬಂದ್ಗೆ ಕರೆಕೊಟ್ಟಿದ್ದ ಸಂಘಟಕರು ನಿರ್ಧರಿಸಿದ್ದರು. ಆದರೆ ರ್ಯಾಲಿಗೆ ಪೊಲೀಸರು ಅನುಮತಿ ಕೊಟ್ಟಿಲ್ಲ. ಬದಲಿಗೆ ರೇಲ್ವೆ ನಿಲ್ದಾಣದಿಂದ ಸ್ವಾತಂತ್ಯ ಉದ್ಯಾನವನದ ವರೆಗೆ ಮೆರವಣಿಗೆಗೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.
ಉಲ್ಟಾ ಹೊಡೆದ ಓಲಾ, ಉಬರ್!
ಆ್ಯಪ್ ಆಧಾರಿ ಆಟೋ, ಟ್ಯಾಕ್ಸಿ ಸಂಚಾರ ಇರಲ್ಲ ಎಂದು ಓಲಾ ಚಾಲಕರ ಸಂಘಟನೆ ಬಂದ್ಗೆ ಬೆಂಬಲ ಕೊಟ್ಟಿತ್ತು. ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ, ಓಲಾ ಸೇವೆ ಇರುವುದಿಲ್ಲ ಎಂದಿದ್ದರು. ಆದರೆ ಬೆಳಿಗ್ಗೆಯಿಂದ ಓಲಾ ಕ್ಯಾಬ್ಗಳು ಕೆಲಸ ಮಾಡುತ್ತಿವೆ. ಕರ್ನಾಟಕ ಬಂದ್ಗೆ ಬೆಂಬಲ ಕೊಡುವುದಾಗಿ ಹೇಳಿದ್ದ ಓಲಾ, ಊಬರ್ ಸೇವೆ ಎಂದನಿಂತೆ ಇದೆ. ಇನ್ನು ಬಂದ್ ಕರೆಗೆ ಆಟೋ ಚಾಲಕರು ಕಿವಿಗೊಟ್ಟಿಲ್ಲ. ಆಟೋ ಯೂನಿಯನ್ ಕರ್ನಾಟಕ ಬಂದ್ ಬೆಂಬಲಿಸಿದೆ. ಆದರೂ ಬೆಂಗಳೂರಿನಲ್ಲಿ ಎಂದಿನಂತೆ ಆಟೋ ಸಂಚಾರವಿದೆ. ಆಟೋ ಚಾಲಕರು, 'ನಮಗೆ ಯೂನಿಯನ್ ನಿಂದ ಮಾಹಿತಿ ಬಂದಿಲ್ಲ, ಹೀಗಾಗಿ ಜನ ಸೇವೆ ಮಾಡ್ತಿದ್ದೀವಿ' ಎಂದು ಬಂದ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಒಟ್ಟಾರೆ ಬೆಂಗಳೂರು ಸೇರಿದಂತೆ ಅಖಂಡ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತವಾಗಿಲ್ಲ.